ರೇಖಾ ಹಂತಕ ಪೀಟರ್ ಬಾಯ್ಬಿಟ್ಟ ಸ್ಫೋಟಕ ರಹಸ್ಯ: ಸ್ವಂತ ಅತ್ತಿಗೆಯನ್ನೇ ಕೊಂದ ಮಾಲ? | ಜನತಾ ನ್ಯೂಸ್
ಬೆಂಗಳೂರು : ರಾಜಕೀಯ ಹಿಡಿತ ಸಾಧಿಸಲು ರೇಖಾ ಕೊಲೆ ಮಾಡಿಸಿರೋದನ್ನ ಪೊಲೀಸರು ಬಯಲಿಗೆ ಎಳೆದಿದ್ದಾರೆ. ಬಡ ಜನರಿಗೆ ಊಟ ವಿತರಿಸುತ್ತಿರುವಾಗಲೇ ಜೂ.24ರಂದು ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ನನ್ನು ಅವರ ಕಚೇರಿ ಬಳಿಯೇ ಅಟ್ಟಾಡಿಸಿ ಕೊಂದ ಪೀಟರ್ ಪೊಲೀಸರ ಮುಂದೆ ಸ್ಫೋಟಕ ಹೇಳಿಕೆ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
2018ರಲ್ಲಿ ಕದಿರೇಶ್ ಹತ್ಯೆ ಮಾಡಿದ್ದ ಶೋಭನ್ ಗ್ಯಾಂಗ್ಗೆ ರೇಖಾ ನೆರವು ನೀಡಿದ್ದಳು. ಇದೇ ವಿಚಾರಕ್ಕೆ ಆಕೆಯನ್ನು ಹತ್ಯೆ ಮಾಡಿದ್ದಾಗಿ ಪ್ರಮುಖ ಆರೋಪಿ ಪೀಟರ್ ವಿಚಾರಣೆಯಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎಂದು ಹೇಳಲಾಗುತ್ತಿದೆ. ಕದಿರೇಶ್ ಜತೆ ಓಡಾಡಿಕೊಂಡಿದ್ದ ಪೀಟರ್ಗೆ ಯಾವುದಕ್ಕೂ ಕೊರತೆ ಇರಲಿಲ್ಲ. ಕದಿರೇಶ್ ಹತ್ಯೆಯಾದ ಬೆನ್ನಲ್ಲೇ ರೇಖಾ ಯಾವುದೇ ನೆರವನ್ನು ನೀಡದೆ ಪೀಟರ್ನನ್ನು ದೂರ ಇಟ್ಟಿದ್ದಳು. ಜೀವನ ನಿರ್ವಹಣೆಗೂ ಕಷ್ಟವಾದಾಗ ರೇಖಾ ಮೇಲೆ ಆಕ್ರೋಶಗೊಂಡಿದ್ದ. ಅದನ್ನು ತಿಳಿದಿದ್ದ ಕದಿರೇಶ್ ಅಕ್ಕ ಮಾಲಾ ಹಾಗೂ ಇತರರು ಪೀಟರ್ನನ್ನು ದಾಳವಾಗಿ ಬಳಸಿಕೊಂಡು ತಮ್ಮ ದಾರಿಗೆ ಅಡ್ಡವಾಗಿದ್ದ ರೇಖಾಳನ್ನು ಮುಗಿಸಲು ಆತನಿಗೆ ಆಮಿಷವೊಡ್ಡುತ್ತಿದ್ದರು.
ಜೊತೆಗೆ ಆಡಳಿತ ಹಾಗೂ ಉಳಿದ ವ್ಯವಹಾರವನ್ನೆಲ್ಲ ನೋಡಿಕೊಳ್ಳುತ್ತಿದ್ದ ಕದಿರೇಶ್, ಅಕ್ಕ, ಕುಟುಂಬದವರಿಗೆ ಆರ್ಥಿಕವಾಗಿ ಸಹಾಯ ಮಾಡುತ್ತಿದ್ದರು. ಕದಿರೇಶ್ ಕೊಲೆಯಾದ ನಂತರ ರೇಖಾ, ಪತಿ ಮನೆಯವರನ್ನು ದೂರವಿಟ್ಟಿದ್ದರು. ಕದಿರೇಶ್ ಆಸ್ತಿಯನ್ನು ರೇಖಾ ಮಾತ್ರ ಅನುಭವಿಸುತ್ತಿದ್ದಾರೆಂಬ ಕಾರಣಕ್ಕೆ ಮಾಲಾ ಗಲಾಟೆ ಮಾಡುತ್ತಿದ್ದಳು. ಇತ್ತೀಚೆಗೆ ಮಾಲಾ ಸಂಬಂಧಿಯೊಬ್ಬರ ಕಪಾಳಕ್ಕೆ ರೇಖಾ ಹೊಡೆದಿದ್ದರು. ಇದು ವೈಷಮ್ಯಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.
ಮುಂಬರುವ ಬಿಬಿಎಂಪಿ ಚುನಾವಣೆಗೆ ನಿಲ್ಲಲು ರೇಖಾ ಕದಿರೇಶ್ ಸಿದ್ಧವಾಗಿದ್ದರು. ಈ ಬಾರಿಯೂ ಬಿಜೆಪಿಯಿಂದಲೇ ರೇಖಾಗೆ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿತ್ತು. ಇತ್ತ ಮಾಲಾ ಬಿಎಸ್ಪಿಯಿಂದ ಚುನಾವಣೆ ಸ್ಪರ್ಧಿಸಲು ಚಿಂತಿಸಿದ್ದಳು. ತನಗೆ ಆಗದಿದ್ದರೆ ಮಗಳು ಕಸ್ತೂರಿ ಅಥವಾ ಅರುಳ್ ಪತ್ನಿ ಪೂರ್ಣಿಮಾಳನ್ನು ನಿಲ್ಲಿಸಲು ತಯಾರಿ ಮಾಡಿದ್ದಳು.
ಆದರೆ ಏರಿಯಾದಲ್ಲಿ ಹೆಚ್ಚು ಸಮಾಜ ಸೇವೆಯಲ್ಲಿ ತೊಡಗಿದ್ದ ರೇಖಾ ಮೀರಿ ಚುನಾವಣೆಗೆ ನಿಲ್ಲೋದು ಕಷ್ಟದ ಮಾತಾಗಿತ್ತು. ಹಾಗಾಗಿ ರೇಖಾ ಜೊತೆಗೇ ಇದ್ದ ಪೀಟರ್ ಬಳಸಿ ರೇಖಾ ಕಥೆಯನ್ನೇ ಮುಗಿಸೋ ಪ್ಲ್ಯಾನ್ ಮಾಡಿಕೊಂಡಿದ್ರು.
ಪ್ರಮುಖ ಆರೋಪಿ ಪೀಟರ್ ಹಾಗೂ ಸೂರ್ಯನ ಜತೆ ಸೇರಿ ರೇಖಾ ಕೊಲೆಗೆ ಒಳಸಂಚು ರೂಪಿಸಿದ್ದರು. ಹತ್ಯೆಯಲ್ಲಿ ಮಾಲಾ ಹಾಗೂ ಈಕೆಯ ಪುತ್ರ ಅರುಳ್ ಭಾಗಿಯಾಗಿರುವುದು ತನಿಖೆಯಲಿ ದೃಢಪಟ್ಟಿದ್ದು, ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
ರೇಖಾ ಹತ್ಯೆಗೆ ಕೇವಲ ರಾಜಕೀಯ ಕಾರಣನಾ? ಅಥವಾ ಬೇರೇನಾದ್ರೂ ಕಾರಣಗಳಿವೆಯಾ ಅಂತಾ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.