ಮಾಸಿಕ ₹5ಲಕ್ಷ ವೇತನ ಪಡೆದು,₹2.75 ಲಕ್ಷ ತೆರಿಗೆ ಕಟ್ಟುವೆ: ರಾಷ್ಟ್ರಪತಿ ಕೋವಿಂದ್ | ಜನತಾ ನ್ಯೂಸ್
ನವದೆಹಲಿ: : ದೇಶದ ನಾಗರೀಕರು ತಪ್ಪದೆ ತೆರಿಗೆ ಕಟ್ಟಬೇಕು, ಇದರಿಂದ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ತಿಳಿಸಿದರು.
ಉತ್ತರ ಪ್ರದೇಶಕ್ಕೆ ಮೂರು ದಿನಗಳ ಪ್ರವಾಸ ಕೈಗೊಂಡಿದ್ದ ಅವರು, ಜಿಂಜಾಕ್ ರೈಲ್ವೇ ನಿಲ್ದಾಣದಲ್ಲಿ ಶುಕ್ರವಾರದಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ನನಗೆ ಮಾಸಿಕ ₹5ಲಕ್ಷ ಸಂಬಳ ಸಿಗುತ್ತದೆ ಅದರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಅಂದರೆ ₹2.75ಲಕ್ಷ ತೆರಿಗೆಗೆ ಹೋಗುತ್ತದೆ. ನಾನು ಉಳಿಸಬಹುದಾಗಿದ್ದಕ್ಕಿಂತಲೂ ಹೆಚ್ಚು ಮೊತ್ತವನ್ನು ಬೇರೆ ಅಧಿಕಾರಿಗಳು, ಶಿಕ್ಷಕರು ಉಳಿಸುತ್ತಾರೆ ಎಂದು ತಮಾಷೆ ಮಾಡುತ್ತಲೇ ತೆರಿಗೆಯ ಮಹತ್ವವನ್ನು ವಿವರಿಸಿದರು.
ನಾವು-ನೀವು ತೆರಿಗೆ ಪಾವತಿಸಿದರೆ ಮಾತ್ರ ದೇಶದಲ್ಲಿ ಅಭಿವೃದ್ದಿ ಕೆಲಸಗಳು ನಡೆಯಲು ಸಾಧ್ಯ ಎಂದು ಹೇಳುವ ಸಲುವಾಗಿ ಇಲ್ಲಿ ವೇತನದ ವಿಷಯವನ್ನು ಪ್ರಸ್ತಾಪ ಮಾಡಿದೆ ಎಂದು ರಾಮನಾಥ್ ಕೋವಿಂದ್ ಹೇಳಿದರು.
ಕೆಲವೊಮ್ಮೆ ಜನರು ಸಿಟ್ಟಿನಲ್ಲಿ ರೈಲಿಗೆ ಕಲ್ಲು ಹೊಡೆಯುವುದು ಅಥವಾ ಬೆಂಕಿ ಹಚ್ಚುವುದು ಮಾಡುತ್ತಾರೆ. ಹಾಗೆ ಮಾಡಿದರೆ ಯಾರಿಗೆ ನಷ್ಟ? ಸರ್ಕಾರದ ಆಸ್ತಿ ಅದು ಎಂದು ಹೇಳಬಹುದು. ಆದರೆ, ಅದು ತೆರಿಗೆದಾರರ ಹಣ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ರಾಷ್ಟ್ರಪತಿ ಹುದ್ದೆಯಲ್ಲಿರುವವರಿಗೆ ಅತಿ ಹೆಚ್ಚು ಸಂಬಳ ಬರುತ್ತದೆ ಎಂದು ಎಲ್ಲರಿಗೂ ಗೊತ್ತು. ನನಗೀಗ ಮಾಸಿಕ ₹5ಲಕ್ಷ ಸಂಬಳ ಬರುತ್ತದೆ. ಆದರೆ, ಅದರಲ್ಲಿ ₹2.75ಲಕ್ಷ ಪ್ರತಿ ತಿಂಗಳು ತೆರಿಗೆಗೆ ಹೋಗುತ್ತದೆ. ನಾನು ₹5ಲಕ್ಷ ಪಡೆಯುತ್ತೇನೆ ಎನ್ನುವುದನ್ನು ಮಾತ್ರ ಎಲ್ಲರೂ ಗಮನಿಸುತ್ತಾರೆ. ನೆನಪಿರಲಿ, ನಾನು ಅದರಲ್ಲಿ ತೆರಿಗೆಯನ್ನೂ ಕಟ್ಟುತ್ತೇನೆ ಎಂದು ಹೇಳಿದರು.