ಪ್ರಧಾನಿ ಮೋದಿ ನೇತ್ರತ್ವದಲ್ಲಿ ಉನ್ನತ ಮಟ್ಟದ ಸಭೆ ರಕ್ಷಣಾ ಮಂತ್ರಿ, ಗೃಹ ಮಂತ್ರಿ ಹಾಗೂ ರಾಷ್ಟೀಯ ಭದ್ರತಾ ಸಲಹೆಗಾರ ಭಾಗಿ | ಜನತಾ ನ್ಯೂಸ್
ನವದೆಹಲಿ : ಜಮ್ಮು ವಾಯುನೆಲೆಯ ಮೇಲೆ ಭಾನುವಾರ ನಡೆದ ಡ್ರೋನ್ ದಾಳಿ ಮತ್ತು ನಂತರದ ಘಟನೆಗಳ ಕುರಿತು ಮಾಹಿತಿ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉನ್ನತ ಮಟ್ಟದ ಸಭೆಯನ್ನು ಕರೆದಿದ್ದು, ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡುತ್ತಿದ್ದಾರೆ. ಭಾರಿ ಮಹತ್ವ ಪಡೆದಿರುವ ಈ ಸಭೆ ಸಂಜೆ 4 ಗಂಟೆಗೆ ಪ್ರಾರಂಭವಾಗಿದೆ ಎಂದು ತಿಳಿದುಬಂದಿದೆ.
ಭಾರತದ ಪ್ರಮುಖ ನೌಕಾನೆಲೆಗೆ ಭೇಟಿಯ ಬೆನ್ನಲ್ಲೇ, ಲೇಹ್ ಮತ್ತು ಲಡಾಖ್ನಲ್ಲಿನ ಮುಂಚೂಣಿ ನೆಲೆಗಳಿಗೆ ಮೂರು ದಿನಗಳ ಭೇಟಿಯಿಂದ ಹಿಂದಿರುಗಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿಯವರ ನಿವಾಸಕ್ಕೆ ಆಗಮಿಸಿ ರಾಷ್ಟ್ರೀಯ ಭದ್ರತೆಯ ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ, ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಲು ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ರಾಷ್ಟೀಯ ಭದ್ರತಾ ಸಲಹೆಗಾರ(ಎನ್ಎಸ್ಎ) ಅಜಿತ್ ದೋವಲ್ ಅವರು ಸಹ 7, ಲೋಕ ಕಲ್ಯಾಣ್ ಮಾರ್ಗಕ್ಕೆ ಆಗಮಿಸಿದ್ದು, ಇತರ ಉನ್ನತ ಸಚಿವರು ಸಹ ಭಾಗವಹಿಸಲಿದ್ದಾರೆ. ಗಡಿಯಲ್ಲಿನ ಪರಿಸ್ಥಿತಿಯನ್ನು ನಿಭಾಯಿಸುವುದರ ಹೊರತಾಗಿ, ಕಳೆದ ವಾರ ಪ್ರಧಾನಿ ಕಾಶ್ಮೀರದ ರಾಜಕಾರಣಿಗಳೊಂದಿಗೆ ಪ್ರಧಾನಿ ತಮ್ಮ ಭೇಟಿಯ ಬಗ್ಗೆ ಚರ್ಚಿಸಲಿದ್ದಾರೆ, ಎಂದು ಮೂಲಗಳು ತಿಳಿಸಿವೆ.
ಎರಡು ವರ್ಷಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದ ಪ್ರಮುಖ ರಾಜಕಾರಣಿಗಳನ್ನು ಭೇಟಿ ಮಾಡಿದ್ದ ಪ್ರಧಾನಿ ಮೋದಿ, ಕೆಲವೇ ದಿನಗಳಲ್ಲಿ ಆರ್ಟಿಕಲ್ 370 ರದ್ದುಗೊಳಿಸುವಂತಹ ಅತಿದೊಡ್ಡ ನಿರ್ಧಾರ ಕೈಗೊಂಡಿದ್ದರು. ಕಳೆದ ವಾರ ಮತ್ತೊಮ್ಮೆ ಕಾಶ್ಮೀರದ ರಾಜಕಾರಣಿಗಳನ್ನ ಭೇಟಿ ಮಾಡಿದ ಬೆನ್ನಲ್ಲೇ ಇಂದಿನ ಉನ್ನತ ಮಟ್ಟದ ಸಭೆ ಸಾಕಷ್ಟು ಕುತೂಹಲ ಕೆರಳಿಸಿದೆ.
ಡ್ರೋನ್ ದಾಳಿ
ಭಾನುವಾರ ಮಧ್ಯರಾತ್ರಿಯ ನಂತರ, ಜಮ್ಮು ವಿಮಾನ ನಿಲ್ದಾಣದ ವಾಯುಪಡೆಯ ನೆಲೆಯಲ್ಲಿ ಎರಡು ಸ್ಫೋಟಗಳು ನಡೆದಿದ್ದು, ಇದರಲ್ಲಿ ಕೆಲವು ಕಟ್ಟಡ ಹಾನಿಯಾಗಿದೆ ಮತ್ತು ಇಬ್ಬರು ಭಾರತೀಯ ವಾಯುಪಡೆಯ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೊಯ್ಬಾ ಈ ದಾಳಿಯಲ್ಲಿ ಭಾಗಿಯಾಗಿರಬಹುದೆಂದು ಶಂಕಿಸಲಾಗಿದೆ, ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಹೇಳಿದ್ದಾರೆ. ಸೋಮವಾರ ಮಿಲಿಟರಿ ಸೌಲಭ್ಯದ ಬಳಿ ಗುರುತಿಸಲಾದ ಡ್ರೋನ್ಗಳ ಹಿಂದೆ ಅದೇ ಗುಂಪು ಕೂಡ ಇರಬಹುದು, ಎಂದು ಅವರು ಹೇಳಿದ್ದಾರೆ.