ಮಕ್ಕಳ ಜೀವ ಮತ್ತು ಜೀವನ ಎರಡನ್ನು ತಗೆಯಲು ಸುರೇಶ್ ಕುಮಾರ್ ಮುಂದಾಗಿದ್ದಾರೆ: ಎಚ್. ವಿಶ್ವನಾಥ್ | ಜನತಾ ನ್ಯೂಸ್
ಮೈಸೂರು : ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ದಿನಾಂಕ ನಿಗದಿ ಮಾಡಿರುವ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ವಿರುದ್ಧ ಕಿಡಿಕಾರಿರುವ ಎಚ್. ವಿಶ್ವನಾಥ್, ಮಕ್ಕಳ ಜೀವ ಮತ್ತು ಜೀವನ ಎರಡನ್ನು ತಗೆಯಲು ಸಚಿವರು ಮುಂದಾಗಿದ್ದಾರೆಂದು ಕಿಡಿಕಾರಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪನವರು ನಾನು ಹೇಳಿದ್ದೆ ಸರಿ, ನಾನು ಮಾಡಿದ್ದೆ ಸರಿ ಎಂಬ ಲೆಕ್ಕಾಚಾರದಲ್ಲಿದ್ದಾರೆ. ಶಿಕ್ಷಣ ಇಲಾಖೆ ತುಂಬಾ ಸೂಕ್ಷ್ಮ ಇಲಾಖೆ. ರಾಜ್ಯದ ಪ್ರತಿ ಮನೆಯೂ ಇಲಾಖೆ ವ್ಯಾಪ್ತಿಯಲ್ಲಿದೆ ಎಂದರು.
ಇನ್ನು ಹತ್ತು ಹನ್ನೆರಡು ದಿನದಲ್ಲಿ ಡೆಲ್ಟಾ ರೂಪಾಂತರಿ ಹೆಚ್ಚಾಗತ್ತದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಶಿಕ್ಷಣ ಪ್ರತಿ ಮಗುವಿನ ಹಕ್ಕು, ಆದರೆ ಮಗುವನ್ನು ಸಾವಿನ ಕೂಪಕ್ಕೆ ತಳ್ಳುತ್ತಿದ್ದೇವೆ. ಎಲ್ಲರೂ ಸೇರಿ ಮಗುವನ್ನ ಸಾಯಿಸುತ್ತಿದ್ದೇವೆ ಎಂದು ಆರೋಪಿಸಿದರು.
ವಿಧಾನಸೌಧದಲ್ಲಿ ಸಭೆ ಮೇಲೆ ಸಭೆ ನಡೆಸುತ್ತೀರಿ. ಈ ವಿಚಾರದಲ್ಲಿ ನಿಮಗೆ ಗೊತ್ತಾಗಲಿಲ್ಲವೇ? ಪರೀಕ್ಷೆ ವಿಚಾರದಲ್ಲಿ ಸರ್ವ ಪಕ್ಷಗಳ ಸಭೆ ನಡೆಸಿ ತೀರ್ಮಾನ ಕೈಗೊಳ್ಳಬೇಕಿತ್ತು ಎಂದು ವಿಶ್ವನಾಥ್ ಹೇಳಿದರು.
ಇನ್ನು 10- 15 ದಿನಗಳಲ್ಲಿ ಡೆಲ್ಟಾ ಮೂರನೇ ಅಲೆ ಶುರುವಾಗುತ್ತೆ ಅಂತಿದ್ದಾರೆ. ಅದೇ ಸಂದರ್ಭಕ್ಕೆ ಪರೀಕ್ಷೆ ನಿಗದಿಯಾಗಿದೆ. ಮಕ್ಕಳ ಕತೆ ಏನಾಗಬೇಕು? ಕೋವಿಡ್ ಒಂದು ಹೊಸ ಸಮಸ್ಯೆ. ನಾವು ಹೇಳಿದ್ದೇ ನಡೆಯಬೇಕು ಅನ್ನುವ ಇಗೋ ಇರಬಾರದು ಎಂದರು.
ಇದು ಮಗುವನ್ನು ಮರೆತ ಸರ್ಕಾರ. ಶಿಕ್ಷಣ ಇಲಾಖೆಯಲ್ಲಿ ಪ್ರಧಾನ ಕಾರ್ಯದರ್ಶಿ, ಆಯುಕ್ತರಾಗಿ ಕೆಲಸ ಮಾಡಿದ ಅಧಿಕಾರಿಗಳು ಇದ್ದಾರೆ. ಶಿಕ್ಷಣ ಸಚಿವರಾಗಿ ಕೆಲಸ ಮಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ, ತನ್ವೀರ್ ಸೇಠ್ ಹಾಗೂ ನಾನು ಸೇರಿದಂತೆ ಅನೇಕರು ಇದ್ದೇವೆ. ಪ್ರತಿಪಕ್ಷದವರನ್ನೂ ಸೇರಿದಂತೆ ಯಾರನ್ನೂ ಕರೆದು ಅಭಿಪ್ರಾಯ ಕೇಳಿಲ್ಲ. ಏನೂ ಮಕ್ಕಳನ್ನು ಸಾಯಿಸಬೇಕು ಅಂತ ಮಾಡಿದ್ದೀರಾ? ಶಿಕ್ಷಕರು, ಪೋಷಕರ ಜೀವ ಬಲಿ ತೆಗೆದುಕೊಳ್ಳುವ ಅಧಿಕಾರವನ್ನು ಸರ್ಕಾರಕ್ಕೆ ಯಾರೂ ಕೊಟ್ಟಿಲ್ಲ ಎಂದರು ಹೇಳಿದರು.
ಶಿಕ್ಷಣ ಸಚಿವರದ್ದು ಇದೆಂಥಾ ಇಗೋ? ಈ ಹಠ ಯಾಕೆ? ಯಾವ ಹಠಕ್ಕೆ ಪರೀಕ್ಷೆ ಮಾಡುತ್ತಿದ್ದೀರಿ? ಕೇಂದ್ರ ಸರ್ಕಾರ ಸಿಬಿಎಸ್ಸಿ ಪರೀಕ್ಷೆಯನ್ನೇ ರದ್ದು ಮಾಡಿದೆ. ಇಂತಹ ಸಂದರ್ಭದಲ್ಲಿ ಪರೀಕ್ಷೆ ಮಾಡುವುದು ಬೇಡ ಅಂತ ಹೇಳಿದೆ. ಆದರೆ, ಯಾವ ಪುರುಷಾರ್ಥಕ್ಕೆ ರಾಜ್ಯದಲ್ಲಿ ಪರೀಕ್ಷೆ ಮಾಡಲಾಗುತ್ತಿದೆ. ಜೀವ ಮತ್ತು ಜೀವನ ಎರಡನ್ನು ತಗೆಯಲು ಸುರೇಶ್ ಕುಮಾರ್ ಮುಂದಾಗಿದ್ದಾರೆ ಎಂದರು.