ಪಶ್ಚಿಮ ಬಂಗಾಳದಲ್ಲಿ ತನಿಖೆಗೆಂದು ಭೇಟಿ ನೀಡಿದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ತಂಡದ ಮೇಲೆ ಹಲ್ಲೆ | ಜನತಾ ನ್ಯೂಸ್
ಕೊಲ್ಕೊತ್ತಾ : ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶಗಳನ್ನು ಪ್ರಕಟಿಸಿದ ಬಳಿಕ ಮೇ 2ರ ನಂತರದ ರಾಜ್ಯದ ಹಲವೆಡೆ ಬುಗಿಲೆದ್ದ ಹಿಂಸಾಚಾರದ ಘಟನೆಗಳ ತನಿಖೆಗಾಗಿ ಮಂಗಳವಾರ ರಾಜ್ಯಕ್ಕೆ ಭೇಟಿ ನೀಡಿದ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ(ಎನ್ಎಚ್ಆರ್ಸಿ) ತಂಡದ ಮೇಲೆ ಜಾದವ್ಪುರದಲ್ಲಿ ಹಲ್ಲೆ ನಡೆದಿದೆ.
ಎನ್ಎಚ್ಆರ್ಸಿ ತನಿಖಾ ತಂಡದ ಸದಸ್ಯರೊಂದಿಗೆ ಸಂತ್ರಸ್ತರಿಗೆ ಮಾತನಾಡಲು ಅಡ್ಡಿಪಡಿಸಲಾಗಿದ್ದು, ತನಿಖಾ ತಂಡದ ಸದಸ್ಯರಿಗೆ ಸ್ಥಳಕ್ಕೆ ಭೇಟಿ ನೀಡಲು ಅಡ್ಡಿ ಪಡಿಸಲಾಗಿದೆ, ಎಂದು ಆರೋಪಿಸಲಾಗಿದೆ.
ಚುನಾವಣೆ ಮೊದಲು ಮತ್ತು ಚುನಾವಣೆ ಬಳಿಕ ಬಿಜೆಪಿ ಕಾರ್ಯಕರ್ತರ ಮೇಲೆ ನಿರಂತರ ಹಲ್ಲೆ ನಡೆಯುತ್ತಿರುವುದು ಬಗ್ಗೆ ವರದಿಗಳು ಬರುತ್ತಿದ್ದು, ರಾಜಕೀಯ ವೈಷಮ್ಯದಿಂದ ಹಿಂಸಾಚಾರ ನಡೆದಿದೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಹಿಂಸಾಚಾರವನ್ನು ತನಿಖೆ ಮಾಡಲು ಬಂದ ತಂಡದ ಮೇಲೆಯೇ ಹಲ್ಲೆ ನಡೆದಿರುವುದು, ಪಶ್ಚಿಮ ಬಂಗಾಳದಲ್ಲಿನ ಕಾನೂನು ಸುವ್ಯಸ್ಥೆಗೆ ಹಿಡಿದ ಕನ್ನಡಿಯಾಗಿದೆ.
"ಮತದಾನದ ನಂತರದ ಹಿಂಸಾಚಾರದ ತನಿಖೆಗಾಗಿ ಜಾದವ್ಪುರಕ್ಕೆ ಭೇಟಿ ನೀಡಿದ ಎನ್ಎಚ್ಆರ್ಸಿ ತಂಡದ ಮೇಲೆ ಹಲ್ಲೆ ನಡೆಸಲಾಗಿದೆ. ತನಿಖೆಯ ವೇಳೆ ಇಲ್ಲಿ 40 ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ ಎಂದು ತಿಳಿದುಬಂದಿದೆ. ನಮ್ಮ ಮೇಲೆ ಗೂಂಡಾಗಳು ದಾಳಿ ನಡೆಸುತ್ತಿದ್ದಾರೆ" ಎಂದು ಎನ್ಎಚ್ಆರ್ಸಿ ಅಧಿಕಾರಿಯೊಬ್ಬರು ತಿಳಿಸಿದೆ.
ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಪ್ರಕಟವಾದಾಗಿನಿಂದ, ಪಶ್ಚಿಮ ಬಂಗಾಳವು ರಾಜಕೀಯ ಹಿಂಸಾಚಾರದ ನಿರಂತರ ಘಟನೆಗೆ ಸಾಕ್ಷಿಯಾಗಿದೆ. ಆಡಳಿತಾರೂರಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಿಎಂ ಮಮತಾ ಬ್ಯಾನರ್ಜಿ ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ತಮ್ಮ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪರಸ್ಪರ ಆರೋಪಿಸಲಾಗಿದೆ.