ಕೊರೊನಾ ಮೂರನೇ ಅಲೆ ತಡೆಯಲು ಹಳ್ಳಿಗೆ ನಡೆಯಿರಿ ಮಕ್ಕಳ ತಜ್ಞರೆ: ಆರ್ ಅಶೋಕ್ | ಜನತಾ ನ್ಯೂಸ್
ಹಾಸನ : ಕೋವಿಡ್ ಸಂಭಾವ್ಯ ಮೂರನೇ ಅಲೆ ಮಕ್ಕಳನ್ನು ಹೆಚ್ಚು ಬಾಧಿಸುವ ಬಗ್ಗೆ ತಜ್ಞರು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ "ಹಳ್ಳಿಗೆ ನಡೆಯಿರಿ ಮಕ್ಕಳ ತಜ್ಞರೆ" ಕಾರ್ಯಕ್ರಮವನ್ನು ರಾಜ್ಯದಾದ್ಯಂತ ಆರಂಭಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.
ಮೂರನೆ ಅಲೆ ತಡೆಯುವಿಕೆ ತಯಾರಿಗೆ ಹಳ್ಳಿಗೆ ನಡೆಯಿರಿ ಮಕ್ಕಳ ತಜ್ಞರೆ ಕಾರ್ಯಕ್ರಮ ನಡೆಸುತ್ತೇವೆ. ಅಪೌಷ್ಟಿಕತೆಯಿಂದ ಬಳಲುತ್ತಿರೊ ಮಕ್ಕಳನ್ನು ಸದೃಢ ಮಾಡಲು ವಿಶಿಷ್ಟ ಗುಣಮಟ್ಟದ ಫುಡ್ ನೀಡಲು ರಾಜ್ಯಾದ್ಯಂತ ಕ್ರಮ ವಹಿಸುತ್ತೇವೆ.
ಜಿಲ್ಲಾಧಿಕಾರಿಗಳು, ಎಸ್.ಡಿ.ಆರ್.ಎಫ್ ಹಣದಿಂದ ಅಪೌಷ್ಟಿಕ ಮಕ್ಕಳಿಗೆ ಫುಡ್ ಕಿಟ್ ನೀಡಲು ಕ್ರಮ ಕೈಗೊಳ್ಳುತ್ತೇವೆ. ಮಿಲ್ಕ್ ಪೌಡರ್, ಬಾದಾಮಿ, ಮಲ್ಟಿ ವಿಟಮಿನ್ ಸಿರಪ್ ಹಾಗು ಮಕ್ಕಳ ಮಾಸ್ಕ್ ಹೊಂದಿದ ಕಿಟ್ ನೀಡಬೇಕು. ರಾಜ್ಯಾದ್ಯಂತ ಅಪೌಷ್ಟಿಕ ಮಕ್ಕಳಿಗೆ ಫುಡ್ಕಿಟ್ ನೀಡಲು ಆದೇಶ ನೀಡುತ್ತೇವೆ ಎಂದು ಹಾಸನದಲ್ಲಿ ಕಂದಾಯ ಸಚಿವ ಆರ್ ಅಶೋಕ್ ಹೇಳಿಕೆ ನೀಡಿದ್ದಾರೆ.
ಮಕ್ಕಳಿಗೆ ಚಿಕಿತ್ಸೆ ನೀಡಲು ಜಿಲ್ಲೆಯಲ್ಲಿ ಹತ್ತು ದಿನದೊಳಗೆ ವೈದ್ಯರಿಗೆ ತರಬೇತಿ ನೀಡಬೇಕು. ಈ ಬಗ್ಗೆ ತಜ್ಞ ಮಕ್ಕಳ ವೈದ್ಯರಿಂದ ಇತರೆ ವೈದ್ಯರಿಗೆ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗಿದೆ. ಹಾಸನ ಜಿಲ್ಲೆಗೆ ಮಕ್ಕಳಿಗೆ 18 ವೆಂಟಿಲೇಟರ್ ಖರೀದಿಗೆ 2.3 ಕೋಟಿ ಹಣ ನೀಡುತ್ತೇವೆ ಎಂದು ಹೇಳಿದ್ದಾರೆ.
ಪ್ರತಿ ತಾಲ್ಲೂಕಿಗೆ ಎರಡು ವಾಹನಗಳನ್ನು ನಿಯೋಜಿಸಲಾಗುವುದು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರ ಜತೆಯೂ ಚರ್ಚಿಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಂದಾಯ ಇಲಾಖೆಯ ಎಸ್ಡಿಆರ್ಎಫ್ ಅನುದಾನ ಅಡಿ ಅಪೌಷ್ಟಿಕ ಮಕ್ಕಳಿಗೆ ಅರ್ಧ ಕೆ.ಜಿ. ಹಾಲಿನ ಪುಡಿ, 200 ಗ್ರಾಂ ಬಾದಾಮಿ, ಬಿಸ್ಕೆಟ್, ಮಲ್ಟಿ ವಿಟಮಿನ್ ಮಾತ್ರೆ, ಸಿರಪ್ ಸೋಪ್ ಒಳಗೊಂಡ ಆಹಾರ ಕಿಟ್ಗಳನ್ನು ನೀಡಿ, ರೋಗ ನಿರೋಧಕ ಶಕ್ತಿ ಹೆಚ್ಚಿಸಲಾಗುವುದು. ಅಲ್ಲದೇ ಕೋವಿಡ್ನಿಂದ ಮೃತಪಟ್ಟ ಮನೆಗಳಿಗೆ ಸಿಬ್ಬಂದಿ ಭೇಟಿ ನೀಡಿ, ಮೃತ ವ್ಯಕ್ತಿ ಸೋಂಕು ತಗಲುವ ಮುನ್ನ ಯಾವ ಕಾಯಿಲೆಗಳಿಂದ ಬಳಲುತ್ತಿದ್ದರು ಎಂಬ ಮಾಹಿತಿ ಸಂಗ್ರಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಈಗಾಗಲೇ ರಚಿಸಿದ್ದ ಟಾಸ್ಕ್ ಫೋರ್ಸ್ ರದ್ದು ಪಡಿಸಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಒಳಗೊಂಡಂತೆ ಹೊಸ ಟಾಸ್ಕ್ಫೋರ್ಸ್ ರಚಿಸುವಂತೆ ಮಾಡಿದ ಮನವಿಗೆ ಸಿ.ಎಂ ಸ್ಪಂದಿಸಿದ್ದಾರೆ ಎಂದರು.