ಪ್ರಿಯಾಂಕಾ ಗಾಂಧಿ ವಾಡ್ರಾ ಭೇಟಿ ಮಾಡಿದ ಪಂಜಾಬ್ ಕಾಂಗ್ರೆಸ್ ಬಂಡಾಯ ನಾಯಕ ನವಜೋತ್ ಸಿಂಗ್ ಸಿಧು | ಜನತಾ ನ್ಯೂಸ್
ನವದೆಹಲಿ : ಪಂಜಾಬ್ ಕಾಂಗ್ರೆಸ್ ನ ಅತ್ರಪ್ತ ಬಣದ ನಾಯಕ ನವಜೋತ್ ಸಿಂಗ್ ಸಿಧು ನವದೆಹಲಿಯಲ್ಲಿ ಇಂದು ಬುಧವಾರ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಡ್ರಾರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಪಂಜಾಬ್ ಕಾಂಗ್ರೆಸ್ ನಲ್ಲಿನ ಬಂಡಾಯ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ಪಕ್ಷದ ಹೈಕಮಾಂಡ್ ಯೋಜಿಸುತ್ತಿದ್ದು, ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿಯವರ ಮಗಳು ಪ್ರಿಯಾಂಕ ಗಾಂಧಿ ಜೊತೆಗೆ ನವಜೋತ್ ಸಿಂಗ್ ಸಿಧು ಭೇಟಿಯು ಕಾಂಗ್ರೆಸ್ ವಲಯದಲ್ಲಿ ಮಹತ್ವದ್ದಾಗಿದೆ.
ಸುಮಾರು ಮೂರು ಗಂಟೆಗಳ ಕಾಲ ಇಬ್ಬರ ಸಭೆ ನಡೆದಿದೆ ಎಂದು ನವಜೋತ್ ಸಿಂಗ್ ಸಿಧು ಆಪ್ತ ಮೂಲಗಳು ತಿಳಿಸಿವೆ. "ಪ್ರಿಯಾಂಕಾ ಗಾಂಧಿ ಜೊತೆಗೆ ಸುದೀರ್ಘ ಸಭೆ ನಡೆಸಿದ್ದೇನೆ" ಎಂದು ಬರೆದು ಚಿತ್ರವೊಂದನ್ನು ನವಜೋತ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಮೊದಲು ಬಿಜೆಪಿಯಲ್ಲಿದ್ದ ಸಿಧು ಅಲ್ಲಿ ಬಂಡಾಯ ಎದ್ದು, ಕಾಂಗ್ರೆಸ್ ಸೇರಿದ್ದರು. ಇದೀಗ ಸಿಧು ಬಣದಿಂದ ಪಂಜಾಬ್ ಕಾಂಗ್ರೆಸ್ನಲ್ಲಿ ಬಿಕ್ಕಟ್ಟು ಎದುರಾಗಿ ಹೈಕಮಾಂಡ್ ಗೆ ತಲೆನೋವಾಗಿ ಪರಿಣಮಿಸಿದೆ. ಇದರ ಬೆನ್ನಲ್ಲೇ ಪಂಜಾಬ್ನ ಕಾಂಗ್ರೆಸ್ನ ನವಜೋತ್ ಸಿಂಗ್ ಸಿಧು ತಾವು ಹಿರಿಯ ನಾಯಕರನ್ನು ಭೇಟಿಯಾಗುವುದಾಗಿ ತಿಳಿಸಿದ್ದರು. ಆದರೆ, ಸಿಧು ಅವರನ್ನು ರಾಹುಲ್ ಗಾಂಧಿ ಭೇಟಿಯಾಗಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಸಿಧು ತಂಡವು ಸೋಮವಾರ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿಯನ್ನು ಭೇಟಿಯಾಗುವುದಾಗಿ ಮಾಧ್ಯಮಗಳಿಗೆ ತಿಳಿಸಿತ್ತು. ಮಂಗಳವಾರ ಬೆಳಿಗ್ಗೆ ತಮ್ಮ ಪಟಿಯಾಲ ನಿವಾಸದಿಂದ ತೆರಳಿದ್ದರು. ಆದರೆ, ಯಾವುದೇ ಸಭೆ ನಡೆದಿರಲಿಲ್ಲ. "ಸಿಧು ಜೊತೆಗೆ ಯಾವುದೇ ಸಭೆ ನಡೆದಿಲ್ಲ" ಎಂದು ರಾಹುಲ್ ಮಂಗಳವಾರ ಮಾಧ್ಯಮಗಳಿಗೆ ತಿಳಿಸಿದ್ದರು.
ಈ ಸಭೆ ಪಕ್ಷದಲ್ಲಿ ಸಿಧು ಭವಿಷ್ಯದ ಮೇಲೆ ಹಾಗೆಯೇ ಆಡಳಿತರೂಡ ರಾಜ್ಯ ಕಾಂಗ್ರೆಸ್ ಭವಿಷ್ಯದ ಮೇಲೂ ಪರಿಣಾಮ ಬೀರಲಿದೆ. ಸಿಧು ಇತ್ತೀಚಿಗೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.