ಮಹಿಳೆಯನ್ನ ನಗ್ನಗೊಳಿಸಿ ತೋಟದ ಮನೆಯಲ್ಲಿ ಕೂಡಿಹಾಕಿದ ಬಿಎಂಟಿಸಿ ಬಸ್ ಚಾಲಕ! ಚಾಲಕ ಅರೆಸ್ಟ್ | ಜನತಾ ನ್ಯೂಸ್
ಬೆಂಗಳೂರು : ಬಿಎಂಟಿಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಜತೆ ಸಲುಗೆ ಬೆಳೆಸಿಕೊಂಡ ಬಸ್ ಚಾಲಕನೊಬ್ಬ, ಆಕೆಯನ್ನ ತಿಪಟೂರಿಗೆ ಕರದೊಯ್ದು ತೋಟದ ಮನೆಯಲ್ಲಿ ನಗ್ನಗೊಳಿಸಿ ಕೂಡಿ ಹಾಕಿದ ಪ್ರರಕರಣ ತಡವಾಗಿ ಬೆಳಕಿಗೆ ಬಂದಿದೆ.
ಬಸವೇಶ್ವರನಗರ ನಿವಾಸಿಯಾದ 40 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇರೆಗೆ ಬಿಎಂಟಿಸಿ ಬಸ್ ಚಾಲಕ ವಿಶ್ವನಾಥ್ (42) ಎಂಬಾತನನ್ನು ಪೊಲೀಸರು ಬಂಧಿಸಿ FIR ದಾಖಲಿಸಿದ್ದಾರೆ.
ದೂರುದಾರ ಮಹಿಳೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಬಿಎಂಟಿಸಿ ಬಸ್ನಲ್ಲಿ ದಿನವೂ ಪ್ರಯಾಣಿಸುತ್ತಿದ್ದರು. 2019ರಲ್ಲಿ ಚಾಲಕ ವಿಶ್ವನಾಥ್ ಪರಿಚಯವಾಗಿ ಮಹಿಳೆಯ ಮೊಬೈಲ್ ನಂಬರ್ ಪಡೆದುಕೊಂಡಿದ್ದ. ಇಬ್ಬರ ನಡುವೆ ಸಲುಗೆ ಬೆಳೆದ ಬಳಿಕ ತಿಪಟೂರಿನಲ್ಲಿರುವ ಮನೆಗೆ ಮಹಿಳೆಯನ್ನು ಆಗಾಗ ಕರೆದುಕೊಂಡು ಹೋಗುತ್ತಿದ್ದ ಎನ್ನಲಾಗಿದೆ.
ಮಹಿಳೆಯನ್ನು ವಿವಾಹವಾಗುವುದಾಗಿ ನಂಬಿಸಿದ್ದ ವಿಶ್ವನಾಥ್, 2.70 ಲಕ್ಷ ರೂ. ಸಹ ಪಡೆದಿದ್ದ. ಹಣ ಕೇಳಿದರೂ ಹಿಂತಿರುಗಿಸದೆ ಸತಾಯಿಸುತ್ತಿದ್ದ. ಮಾ.23ರಂದು ನಿನಗೆ ನೀಡಬೇಕಿರುವ ಹಣವನ್ನು ಕೊಡುತ್ತೇನೆ ಎಂದು ಹೇಳಿ ಕೆಎಸ್ಆರ್ಟಿಸಿ ಬಸ್ನಲ್ಲಿ ತಿಪಟೂರಿನ ಹಾಲುಕುರ್ಕೆ ಬಳಿಯಿರುವ ತೋಟದ ಮನೆಗೆ ಮಹಿಳೆಯನ್ನ ಕರೆದುಕೊಂಡು ಹೋಗಿದ್ದ.
ತೋಟದ ಮನೆಯಲ್ಲಿ ಕೊಠಡಿಯಲ್ಲಿ ಕೂಡಿಹಾಕಿ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದಾನೆ. ಹಣ ಕೇಳಿದರೆ ಮಾರಕಾಸ್ತ್ರದಿಂದ ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದ. 2 ದಿನಗಳ ಕಾಲ ತೋಟದ ಮನೆಯಲ್ಲೇ ಇರಿಸಿಕೊಂಡು ಹಿಂಸೆ ಕೊಟ್ಟಿದ್ದಾನೆ ಎಂದು ಸಂತ್ರಸ್ತೆ ದೂರು ಕೊಟ್ಟಿದ್ದು, ಬಿಎಂಟಿಸಿ ಬಸ್ ಚಾಲಕನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.