ತಾವು ಗೆದ್ದರೆ ಪ್ರತಿವರ್ಷ ಹೊಸ ಮುಖ್ಯಮಂತ್ರಿ - ಉತ್ತರ ಪ್ರದೇಶ ಚುನಾವಣೆ ಕುರಿತು ಎಸ್ಬಿಎಸ್ಪಿ ಅಧ್ಯಕ್ಷ | ಜನತಾ ನ್ಯೂಸ್
ಲಕ್ನೋ : ಉತ್ತರ ಪ್ರದೇಶ(ಯುಪಿ) ವಿಧಾನಸಭಾ ಚುನಾವಣೆಯ ಮುನ್ನ ರಾಷ್ಟೀಯ ಪಕ್ಷಗಳು ಸೇರಿದಂತೆ ಸ್ಥಳೀಯ ಪಕ್ಷಗಳು ಸಾಕಷ್ಟು ರಾಜಕೀಯ ಕಸರತ್ತು ನಡೆಸುತ್ತಿದೆ. ಹಿಂದೆದು ಕೇಳರಿಯದ ರೀತಿಯಲ್ಲಿ, ಸುಹೇಲ್-ದೇವ್ ಭಾರತೀಯ ಸಮಾಜ ಪಕ್ಷದ(ಎಸ್ಬಿಎಸ್ಪಿ) ಅಧ್ಯಕ್ಷ ಓಂ ಪ್ರಕಾಶ್ ರಾಜ್ಭರ್ ಯುಪಿಗೆ ವಿಚಿತ್ರವಾದ ಅಧಿಕಾರ ಹಂಚಿಕೆ ಸೂತ್ರವನ್ನು ತಂದಿದ್ದಾರೆ.
ಇಲ್ಲಿಯ ವರೆಗೆ ಮೈತ್ರಿ ಸರ್ಕಾರದಲ್ಲಿ 50:50 ಅಂದರೆ 2.5ವರ್ಷಗಳ ಸಿಎಂ ಸ್ಥಾನ ಹಂಚಿಕೆ ನಡೆದಿದೆ, ಆದರೆ ಇದೀಗ ಅಧಿಕಾರಕ್ಕಾಗಿ ಒಬ್ಬ ಮುಖ್ಯಮಂತ್ರಿ ಅವಧಿಯನ್ನು ಕೇವಲ 1 ವರ್ಷಕ್ಕೆ ಸ್ಥಿಮಿತಗೊಳಿಸುವ ಹೊಸ ಯೋಜನೆಯನ್ನು ರಾಜ್ಭರ್ ಮುಂದಿಟ್ಟಿದ್ದಾರೆ.
ಮುಂದಿನ ವರ್ಷದ ಯುಪಿ ವಿಧಾನಸಭಾ ಚುನಾವಣೆಯಲ್ಲಿ ತಮ್ಮ 10 ಪಕ್ಷಗಳ "ಭಾಗಿದಾರಿ ಸಂಕಲ್ಪ ಮೋರ್ಚಾ" ಗೆದ್ದರೆ, "ಪ್ರತಿವರ್ಷ ಹೊಸ ಮುಖ್ಯಮಂತ್ರಿ ಇರುತ್ತಾರೆ, ಬೇರೆ ಜಾತಿಯನ್ನು ಪ್ರತಿನಿಧಿಸುತ್ತಾರೆ" ಎಂದು ಉತ್ತರ ಪ್ರದೇಶದ ಮಾಜಿ ಕ್ಯಾಬಿನೆಟ್ ಸಚಿವರಾದ ರಾಜ್ಭರ್ ಹೇಳಿದ್ದಾರೆ.
ಚುನಾವಣೆಯಲ್ಲಿ ಆರಾಮದಾಯಕ ಗೆಲುವು ಸಾಧಿಸುವುದಾಗಿ, ಭಗಿದಾರಿ ಸಂಕಲ್ಪ ಮೋರ್ಚಾದ ಸಾಮರ್ಥ್ಯದ ಬಗ್ಗೆಯೂ ಅವರು ವಿಶ್ವಾಸ ವ್ಯಕ್ತಪಡಿಸಿದರು. 2017ರ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಎಸ್ಬಿಎಸ್ಪಿ ಬಿಜೆಪಿಯೊಂದಿಗೆ ಕೈಜೋಡಿಸಿ 8 ಸ್ಥಾನಗಳಿಗೆ ಸ್ಪರ್ಧಿಸಿತ್ತು. ಅದರಲ್ಲಿ, ಎಸ್ಬಿಎಸ್ಪಿ 4 ಸ್ಥಾನಗಳಲ್ಲಿ ಜಯ ದಾಖಲಿಸಿದ್ದು, ಶೇಕಡಾ 0.7 ರಷ್ಟು ಮತಗಳನ್ನು ಗಳಿಸಿತ್ತು.
"ಬಡ ಮತ್ತು ದೀನ ದಲಿತರಲ್ಲಿರುವ ಪ್ರತಿಯೊಂದು ಪ್ರಮುಖ ಜಾತಿ ಗುಂಪುಗಳು ಅಧಿಕಾರದಲ್ಲಿ ಪಾಲು ಪಡೆಯುವುದನ್ನು ನಾನು ಖಚಿತಪಡಿಸುತ್ತೇನೆ. ಎಲ್ಲಾ ಹುದ್ದೆಗಳನ್ನು ನಾನೇ ಹಿಡಿದಿಡಲು ಮತ್ತು ಇತರರನ್ನು ವಂಚಿಸಲು ನಾನು ಆಸಕ್ತಿ ಹೊಂದಿಲ್ಲ", ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.
ಕಳೆದ ವರ್ಷದ ಲೋಕಸಭಾ ಚುನಾವಣೆಯವರೆಗೂ ಎಸ್ಬಿಎಸ್ಪಿ ಆಡಳಿತಾರೂಡ ಬಿಜೆಪಿಯ ಮಿತ್ರಪಕ್ಷವಾಗಿತ್ತು ಎಂದು ಇದನ್ನು ನೆನಪಿಸಿಕೊಳ್ಳಬಹುದು. ಆದಾಗ್ಯೂ, ಇದು ಈಗ 2022ರ ಯುಪಿ ಚುನಾವಣೆಯಲ್ಲಿ ಮೋರ್ಚಾ ಆಗಿ ಚುನಾವಣೆ ಎದುರಿಸಲಿದೆ.
ಅಸದುದ್ದೀನ್ ಒವೈಸಿ ಯವರ ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹದುಲ್ ಮುಸ್ಲೀಮೀನ್ (ಎಐಐಎಂಐಎಂ) ಪಕ್ಷದೊಂದಿಗೆ ಸೀಟು ಹಂಚಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಆವರು, ಯುಪಿ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ)ವನ್ನು ಎದುರಿಸಲು ಅವರ ಸನ್ನದ್ಧತೆಯನ್ನು ನಿರ್ಣಯಿಸಿದ ನಂತರ ಮುಂದಿನ ದಿನಗಳಲ್ಲಿ "ಭಾಗಿದಾರಿ ಮೋರ್ಚಾ" ಅದರ ಬಗ್ಗೆ ಚರ್ಚೆ ನಡೆಸಲಿದೆ, ಎಂದು ಹೇಳಿದರು.