ಅಪ್ರಾಪ್ತ ಬಾಲಕಿಯನ್ನು ವೇಶ್ಯಾವಾಟಿಕೆಗೆ ದೂಡಿದ ಪರಿಚಿತ ಮಹಿಳೆ! ಹೆತ್ತವರ ಸಾಥ್ | ಜನತಾ ನ್ಯೂಸ್
ಚಿಕ್ಕಬಳ್ಳಾಪುರ : 14 ವರ್ಷದ ಬಾಲಕಿಯನ್ನ ಪರಿಚಿತ ಮಹಿಳೆಯೊಬ್ಬಳು ವೇಶ್ಯಾವಾಟಿಕೆಗೆ ದೂಡಿದ್ದು, ಆಕೆ ಈಗ 4 ತಿಂಗಳ ಗರ್ಭಿಣಿ ಆಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಂಚೇನಹಳ್ಳಿ ಗ್ರಾಮವೊಂದರ 14 ವರ್ಷದ ಬಾಲಕಿ ದಲಿತ ಸಮುದಾಯಕ್ಕೆ ಸೇರಿದ್ದು, ಈಕೆಯ ತಂದೆ-ತಾಯಿ ಕುಡಿತ ಚಟ ಅಂಟಿಸಿಕೊಂಡಿದ್ದರು. ತಂದೆ-ತಾಯಿ ನಡುವೆ ಮನೆಯಲ್ಲಿ ಜಗಳ ಮಾಮೂಲಿಯಾಗಿತ್ತು. ಈ ಗ್ರಾಮಕ್ಕೆ ಸಂಬಂಧಿಕರ ಮನೆಗೆಂದು ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಗೌರಿ ಎಂಬಾಕೆ ಬರುತ್ತಿದ್ದಳು.
ಬಾಲಕಿಯ ಪಾಲಕರು ಕುಡಿದ ಅಮಲಿನಲ್ಲಿ ಕಿತ್ತಾಡುವುದನ್ನೇ ಬಂಡವಾಳ ಮಾಡಿಕೊಂಡ ಗೌರಿ, ಬಾಲಕಿಯನ್ನ ಪುಸಲಾಯಿಸಿ ತನ್ನ ಬಲೆಗೆ ಬೀಳಿಸಿಕೊಂಡಿದ್ದಾಳೆ.
ನಂತರ ಬೇರೆಯವರೊಂದಿಗೆ ಮಲಗಿದರೆ ಹಣ ಸಿಗುತ್ತೆ ಎಂದು ಬಾಲಕಿಯ ತಲೆಕೆಡಿಸಿದ ಗೌರಿ, ಪುರುಷರೊಂದಿಗೆ ಬಿಟ್ಟಿದ್ದಾಳೆ. ಹೀಗೆ ಐದಾರು ತಿಂಗಳಿಂದ ನಿರಂತರವಾಗಿ ಗ್ರಾಮದ ಆರೇಳು ಮಂದಿ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದು, ಗೌರಿ ಆ ವೇಳೆ ಬಾಲಕಿಗೆ 200ರಿಂದ 300 ರೂಪಾಯಿ ಕೊಡುತ್ತಿದ್ದಳಂತೆ. ಆ ಹಣದಲ್ಲಿ ಆಕೆಯ ಅಪ್ಪ-ಅಮ್ಮ ಸ್ವಲ್ಪ ಪಡೆದು, ಉಳಿದದ್ದನ್ನು ಬಾಲಕಿಗೆ ಕೊಡುತ್ತಿದ್ದರು.
ಬಾಲಕಿಯ ತಾಯಿಗೆ ಕರೊನಾ ಬಂದಿದ್ದ ಕಾರಣ ಮುದುಗೆರೆ ಗ್ರಾಮದ ಸಂಬಂಧಿಕರೊಬ್ಬರ ಮನೆಗೆ ಬಾಲಕಿಯನ್ನು ಪಾಲಕರು ಕಳುಹಿಸಿದ್ದರು. ಅಲ್ಲಿ ವಾಂತಿ ಮಾಡಿಕೊಳ್ಳುತ್ತಿದ್ದ ಬಾಲಕಿಯನ್ನ ಆಶಾ ಕಾರ್ಯಕರ್ತೆಯರು ಪರಿಶೀಲಿಸಿದ್ದು, ಆ ವೇಳೆ ಬಾಲಕಿ ವೇಶ್ಯಾವಾಟಿಕೆ ದಂಧೆ ಬಗ್ಗೆ ಬಾಯ್ಬಿಟ್ಟಿದ್ದಾಳೆ.
ಸದ್ಯ ಬಾಲಕಿಯನ್ನು ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಬಾಲಕಿ ಕೊಟ್ಟ ದೂರಿನಂತೆ ಆರೋಪಿಗಳಾದ ಗೌರಿ ದೊಡ್ಡಬ್ಯಾಲ, ಮೂರ್ತಿ, ಬಶೀರ್, ದೇವಾ, ವಿನೂದ್ ಎಂಬುವವರ ವಿರುದ್ಧ ಕೇಸ್ ದಾಖಲಾಗಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.