ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಜಯವಾಗಲಿ ಎಂಬ ಜೈಕಾರ | ಜನತಾ ನ್ಯೂಸ್
ದಾವಣಗೆರೆ : "ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಜೈ" ಎಂಬ ಘೋಷಣೆ ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಕೇಳಿ ಬಂದಿದೆ.
ಹರಿಹರ ಶಾಸಕ ಎಸ್. ರಾಮಪ್ಪನವರ ಮಗಳ ಮದುವೆ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಆಗಮಿಸಿದ್ದರು. ಕಲ್ಯಾಣ ಮಂಟಪಕ್ಕೆ ಸಿದ್ದರಾಮಯ್ಯ ಬರುತ್ತಿದ್ದಂತೆ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಜಯವಾಗಲಿ ಎಂದು ಅಭಿಮಾನಿಗಳು ಜೈಕಾರ ಕೂಗಿದರು.
ಹರಿಹರದಲ್ಲಿ ಕಾರು ಇಳಿಯುತ್ತಿದ್ದಂತೆ ಕೆಲವರು ಮುಂದಿನ ಮುಖ್ಯಮಂತ್ರಿ ಘೋಷಣೆ ಹಾಕಿರುವುದು ಕುತೂಹಲ ಕೆರಳಿಸಿದೆ. ಇನ್ನು ಮೊದಲಿನಿಂದಲೂ ಸಿದ್ದರಾಮಯ್ಯಗೆ ರಾಮಪ್ಪ ಆಪ್ತರು. ಈ ಹಿನ್ನೆಲೆಯಲ್ಲಿ ರಾಮಪ್ಪ ಮಗಳ ವಿವಾಹಕ್ಕೆ ಸಿದ್ದರಾಮಯ್ಯ ಆಗಮಿಸಿ ವಧು- ವರರನ್ನು ಆಶೀರ್ವದಿಸಿದರು.
ರಾಜ್ಯ ಸರ್ಕಾರ ಕೇವಲ 40 ಮಂದಿ ಮಾತ್ರ ಕೋವಿಡ್ ಮಾರ್ಗಸೂಚಿ ಪಾಲಿಸಿ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದೆ.
ಆದರೆ ರಾಮಪ್ಪ ಪುತ್ರಿಯ ವಿವಾಹದಲ್ಲಿ ಯಾವ ಕೋವಿಡ್ ಮಾರ್ಗಸೂಚಿ ಪಾಲಿಸಲಿಲ್ಲ. ಸಾಮಾಜಿಕ ಅಂತರ ಇರಲಿಲ್ಲ. ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆ ನೂಕುನುಗ್ಗಲು ಹೆಚ್ಚಾಯಿತು.
ಜಿಲ್ಲೆಯ ಮಾಜಿ ಸಚಿವರು, ಮುಖಂಡರು, ಕಾರ್ಯಕರ್ತರು ಸಿದ್ದರಾಮಯ್ಯ ವೇದಿಕೆಗೆ ಬರುತ್ತಿದ್ದಂತೆ ಮುಗಿಬಿದ್ದರು. ತಳ್ಳಾಟ, ನೂಕಾಟವೂ ಆಯ್ತು. ಇದೇ ವೇಳೆಯಲ್ಲಿ ಕೆಲವರು ಸೆಲ್ಫೀ ತೆಗೆದುಕೊಳ್ಳಲು ಸಹ ಮುಂದಾದರು. ರಾಜಕಾರಣಿಗಳಿಗೆ ಕೋವಿಡ್ ಮಾರ್ಗಸೂಚಿ ಅನ್ವಯ ಆಗುವುದಿಲ್ಲವೇ? ಎಂಬ ಪ್ರಶ್ನೆ ಜನರಲ್ಲಿ ಎದ್ದಿದೆ ? ಮದುವೆಯಲ್ಲಿ ಜನಪ್ರತಿನಿಧಿಗಳು ಕೋವಿಡ್ ನಿಯಮಾವಳಿಯನ್ನು ಗಾಳಿಗೆ ತೂರಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.