ಕಾಂಗ್ರೆಸ್ ಗೆ ಈಗಿರುವ ಶಕ್ತಿ ಸಾಲದು, ಆಮದು ಶಕ್ತಿಯ ಅವಶ್ಯಕತೆ ಇದೆ: ಬಸವರಾಜ ಬೊಮ್ಮಾಯಿ | ಜನತಾ ನ್ಯೂಸ್
ಬೆಂಗಳೂರು : ಕಾಂಗ್ರೆಸ್ ಪಕ್ಷಕ್ಕೆ ಈಗಿರುವ ಶಕ್ತಿ ಸಾಲದು,ಅವರಿಗೆ ಆಮದು ಶಕ್ತಿಯ ಅವಶ್ಯಕತೆ ಇದೆ. ಹೀಗಾಗಿ ಅವರ ಆತಂಕ ಡಿ.ಕೆ. ಶಿವ ಕುಮಾರ್ ಹೇಳಿಕೆಯಲ್ಲಿ ಕಾಣುತ್ತಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ 17 ಜನ ಸೇರಿದಂತೆ ಯಾರು ಬೇಕಾದರು ಸೇರ್ಪಡೆಯಾಗಬಹುದು ಎಂಬ ಡಿ.ಕೆ . ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ಈ ರೀತಿಯಲ್ಲಿ ವ್ಯಂಗ್ಯವಾಗಿ ಟೀಕೆ ಮಾಡಿದರು. ಕಾಂಗ್ರೆಸ್ಗೆ ವಲಸಿಗರು ಮರಳಿ ಬಂದರೆ ಸ್ವಾಗತ ಎಂಬ ಹೇಳಿಕೆಯನ್ನು ಡಿಕೆ ಶಿವಕುಮಾರ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬೊಮ್ಮಾಯಿ ವ್ಯಂಗ್ಯವಾಗಿ ತರಾಟೆಗೆ ತೆಗೆದುಕೊಂಡರು.
ಮೇಕೆದಾಟು ಯೋಜನೆ ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬರೆದ ಪತ್ರಕ್ಕೆ ತಮಿಳುನಾಡು ಮುಖ್ಯಮಂತ್ರಿಗಳು ಸ್ಪಂದಿಸಬೇಕು. ಈ ಯೋಜನೆಯಿಂದ ಎರಡೂ ರಾಜ್ಯಗಳಿಗೆ ಅನುಕೂಲವಾಗಲಿದೆ ಎನ್ನುವುದನ್ನು ತಿಳಿಯಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಮೇಕೆದಾಟು ಯೋಜನೆಯಿಂದ ಇಬ್ಬರಿಗೂ ಅನುಕೂಲ ಇದೆ. ನಮಗೆ ಕುಡಿಯುವ ನೀರು ಸಿಗುತ್ತದೆ. ಮಳೆ ಕಡಿಮೆಯಾದಾಗ ಅವರ ಪಾಲಿನ ನೀರನ್ನ ಕೊಡಲು ಸಾಧ್ಯವಾಗುತ್ತದೆ. ಎರಡೂ ರಾಜ್ಯಕ್ಕೆ ಅನುಕೂಲ ಆಗುತ್ತದೆ ಎಂದೂ ಗೊತ್ತಿದ್ದರೂ ಕೂಡ ಅವರು ಸುಪ್ರೀಂ ಕೋರ್ಟ್ನಲ್ಲಿ ಆಕ್ಷೇಪಣೆ ಸಲ್ಲಿಸಿದ್ದಾರೆ. ಆದರೂ ನಮಗೆ ನ್ಯಾಯ ಸಿಗುವ ವಿಶ್ವಾಸ ಇದೆ ಎಂದರು.
ಮೇಕೆದಾಟು ನಮ್ಮ ವ್ಯಾಪ್ತಿಯಲ್ಲಿ ಮಾಡುತ್ತಿದ್ದೇವೆ. ಅವರ ಪಾಲಿನ ನೀರಿಗೆ ಯಾವುದೇ ತೊಂದರೆಯಾಗಲ್ಲ. ಆದರೂ ಅವರು ಸುಪ್ರೀಂಕೋರ್ಟ್ಗೆ ಹೋಗಿದ್ದಾರೆ. ಮಾರ್ಕಂಡೇಯ ಜಲಾಶಯ ವಿಷಯವಾಗಿ ಮೊದಲಿನಿಂದಲೂ ತಗಾದೆ ತೆಗೆಯುತ್ತಿದ್ದಾರೆ. ಇದೆಲ್ಲ ರಾಜಕೀಯ ಕಾರಣಕ್ಕಾಗಿ ಮಾಡುತ್ತಿದ್ದಾರೆ. ಹೊಸ ಸರ್ಕಾರ ಬಂದಿದೆ. ಸಣ್ಣ ವಿಚಾರ ದೊಡ್ಡದು ಮಾಡುತ್ತಿದ್ದಾರೆ ಎಂದರು.