ಕಬ್ಬಿನ ಗದ್ದೆಯ ವಿದ್ಯುತ್ ತಂತಿ ಸ್ಪರ್ಶಿಸಿ ಚಿರತೆ ಸಾವು | ಜನತಾ ನ್ಯೂಸ್
ವಿಜಯಪುರ : ವಿಜಯಪುರದಲ್ಲಿ ಭೀಮಾ ತೀರದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಇಂದು ಸಾವಿಗೀಡಾಗಿದೆ.
ಜಿಲ್ಲೆಯ ಸಿಂದಗಿ ತಾಲೂಕಿನ ದೇವರನಾವದಗಿ ಗ್ರಾಮದ ಸುತ್ತಲಿನ ಕಬ್ಬಿನ ಗದ್ದೆಗಳಲ್ಲಿ ಚಿರತೆ ಬಿಡಾರ ಹೂಡಿತ್ತು. ಶನಿವಾರ ರಾತ್ರಿ ಬಸವರಾಜ ಪಾಟೀಲ ಎಂಬವರ ಜಮೀನಿನ ವಿದ್ಯುತ್ ಪರಿವರ್ತಕ ಏರಲು ಯತ್ನಿಸಿ, ವಿದ್ಯುತ್ ಪ್ರವಹಿಸಿ ಮೃತಪಟ್ಟಿದೆ ಎನ್ನಲಾಗಿದೆ.
ಮೃತ ಚಿರತೆ ಕಳೆದ ಒಂದು ತಿಂಗಳಿಂದ ಆಹಾರಕ್ಕಾಗಿ ರೈತರ ಹತ್ತಾರು ಜಾನುವಾರುಗಳನ್ನು ಕೊಂದು ಹಾಕಿ ಆತಂಕ ಸೃಷ್ಟಿಸಿತ್ತು.
ಶಂಬೆವಾಡ, ಕುಮಸಗಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿತ್ತು. ಜಾನುವಾರುಗಳನ್ನು ತಿಂದು ಹಾಕಿದ್ದ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಾಕಷ್ಟು ಪ್ರಯತ್ನ ನಡೆಸಿತ್ತು. ಆದರೆ ಸಾಧ್ಯವಾಗಿರಲಿಲ್ಲ. ಅರಣ್ಯ ಇಲಾಖೆ ವಿವಿಧ ಕಡೆ ಸಿಸಿ ಕ್ಯಾಮರಾ ಅಳವಡಿಸಿದ ಮೇಲೆ ಕ್ಯಾಮರಾದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ನಂತರ ಇಲಾಖೆ ಮೂರು ಬೋನ್ ಇಟ್ಟಿದ್ದರೂ ಸಹ ಚಿರತೆ ಸೆರೆಯಾಗಿರಲಿಲ್ಲ.
ವಿಷಯ ತಿಳಿಯುತ್ತಲೇ ವಿಜಯಪುರ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಅಶೋಕ ಪಾಟೀಲ, ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಬಿ.ಪಿ.ಚವ್ಹಾಣ, ಸಿಂದಗಿ ವಲಯ ಅರಣ್ಯ ಅಧಿಕಾರಿ ಬಸನಗೌಡ ಬಿರಾದಾರ, ಇರ್ಶಾದ ನೇವಾರ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ.