ಹಮಾರಾ ಕುತ್ತಾ ಹಮಾರೆ ಗಲ್ಲಿಮೇ ಶೇರ್: ಯಡಿಯೂರಪ್ಪ ವಿರುದ್ಧ ಸಿದ್ದು ವಾಗ್ದಾಳಿ! | ಜನತಾ ನ್ಯೂಸ್
ಬೆಂಗಳೂರು : ಹಮಾರ ಕುತ್ತಾ ಹಮಾರ ಗಲ್ಲಿ ಮೆ ಷೇರ್ ತರಹ ಸಿಎಂ ಯಡಿಯೂರಪ್ಪ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಬಸವನಗುಡಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಕರ್ನಾಟಕಕ್ಕೆ ದ್ರೋಹ ಮಾಡಿದ್ದಾರೆ. ಒಂದು ವೇಳೆ ನಾನು ಸಿಎಂ ಆಗಿದ್ದಿದ್ದರೆ ನಿರ್ಮಲಾ ಸೀತಾರಾಮನ್ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೆ. ಯಡಿಯೂರಪ್ಪ ಕೇಂದ್ರದ ಬಳಿ ಮಾತನಾಡುವುದೇ ಇಲ್ಲ. ಹಮಾರಾ ಕುತ್ತಾ ಹಮಾರಾ ಗಲ್ಲಿ ಮೇ ಶೇರ್ ಎನ್ನುತ್ತಾರಲ್ಲ ಹಾಗೆ ಇವರ ನಡೆ ಎಂದರು.
ಸರ್ಕಾರ ಕೊರೊನಾ ಸಂದರ್ಭದಲ್ಲಿ ಜನರ ಸಂಕಷ್ಟ ಬಗೆಹರಿಸುವ ಕೆಲಸ ಮಾಡಬೇಕಿತ್ತು. ಪ್ರತಿಯೊಬ್ಬರಿಗೂ 10 ಸಾವಿರ ರೂಪಾಯಿ ಕೊಡಿ ಎಂದು ಒತ್ತಾಯ ಮಾಡಿದ್ದೆವು. ನಮ್ಮ ಸರ್ಕಾರವಿದ್ದಿದ್ದರೆ 10 ಕೆಜಿ ಅಕ್ಕಿ ಕೊಡುತ್ತಿದ್ದೆವೆ. ಆದರೆ ಈಗ ಇವರು ಎರಡು ಕೆಜಿ ಅಕ್ಕಿ ಕೊಡುತ್ತಿದ್ದಾರೆ. ಹತ್ತು ಕೆಜಿ ಕೊಟ್ಟಿದ್ದರೆ ಇವರ ಗಂಟೇನಾದರೂ ಹೋಗುತ್ತಿತ್ತೇ? ಎಂದು ವಾಗ್ದಾಳಿ ನಡೆಸಿದರು.
ಸಂಸದ ತೇಜಸ್ವಿ ಸೂರ್ಯ ವಿರುದ್ಧ ಸಹಾ ವಾಗ್ದಾಳಿ ನಡೆಸಿದರು. ಅವನು ಸೂರ್ಯ ಅಲ್ಲ ಕತ್ತಲು, ರವಿ ಸುಭ್ರಮಣ್ಯ ಏನು ಮಾಡುತ್ತಿದ್ದಾರೆ ಎಂದು ಕೇಳಬೇಕು. ಜಯದೇವ ಡಾಕ್ಟರ್ ಮಂಜುನಾಥ್ ಹೇಳಿದ್ದಾರೆ. ವ್ಯಾಕ್ಸಿನ್ ಹಾಕಿಸಿಕೊಳ್ಳದವರಿಗೆ 3ನೇ ಅಲೆ ಬರಬಹುದು. ಮಕ್ಕಳಿಗೆ ಬರಬಹುದು ಎಂದು ಹೇಳಿದ್ದಾರೆ. ತಜ್ಞರು ಹೇಳಿದರೂ ಸಹ ಇವರು ಜಾಗೃತೆ ವಹಿಸುತ್ತಿಲ್ಲ.
ಬಡವರಿಗೆ ಇಂದಿರಾ ಕ್ಯಾಂಟಿನ್ ಮಾಡಿದೆ. ಅದನ್ನ ಮುಚ್ಚಿದ್ರು ಇವರು ಮನೆ ಹಾಳಾಗ. ಈ ದೇಶದಲ್ಲಿ ರಾಜಕಾರಣದ ಸೂರ್ಯ ಇದ್ರೆ ಅದು ಅಂಬೇಡ್ಕರ್ ಮಾತ್ರ. ಉಳಿದವರು ಯಾರು ಸೂರ್ಯನೂ ಅಲ್ಲ ಚಂದ್ರನೂ ಅಲ್ಲ ಎಂದು ಹೇಳುತ್ತಾ ತೇಜಸ್ವಿ ಸೂರ್ಯಗೆ ಪರೋಕ್ಷವಾಗಿ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.