ಅವರು ಎಂಎಲ್ಎ ಆದ್ರೆ ನಾನು ಎಂಟು ವಿಧಾನಸಭಾ ಕ್ಷೇತ್ರಕ್ಕೆ ಎಂಪಿ: ಕುಮಾರಸ್ವಾಮಿಗೆ ಸುಮಲತಾ ತಿರುಗೇಟು | ಜನತಾ ನ್ಯೂಸ್
ಬೆಂಗಳೂರು : ಅಕ್ರಮ ಗಣಿಗಾರಿಕೆಯಿಂದ ಕೆಆರ್ಎಸ್ ಡ್ಯಾಂಗೆ ಹಾನಿಯಾಗುತ್ತಿದೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಹೇಳಿಕೆ ಕೊಟ್ಟ ಹಿನ್ನೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸುಮಲತಾ ಅಂಬರೀಷ್ ಅವರ ನಡುವೆ ಮತ್ತೆ ಮಾತಿನ ಸಮರ ನಡೆದಿದೆ.
ಕೃಷ್ಣ ರಾಜ ಸಾಗರ ಅಣೆಕಟ್ಟು ಬಿರುಕು ವಿಚಾರವಾಗಿ ತಮ್ಮ ವಿರುದ್ಧ ಮಾತನಾಡಿರುವ ಮಾಜಿ ಸಿಎಂ ಎಚ್ ಡಿ ಕುಮಾರ ಸ್ವಾಮಿ ಅವರ ವಿರುದ್ಧ ಮಂಡ್ಯ ಸಂಸದೆ ಸುಮಲತಾ ಅಂಬರಿಷ್ ಅವರು ವಾಗ್ದಾಳಿ ನಡೆಸಿದ್ದು, ಮಹಿಳೆಯ ಬಗ್ಗೆ ಹೀಗೆಲ್ಲಾ ಹಗುರವಾಗಿ ಮಾತನಾಡುವುದು ಸರಿಯೇ?.. ಮೈಶುಗರ್ ಕಾರ್ಖಾನೆ ಬಗ್ಗೆ ಸಿಎಂ ಆಗಿದ್ದಾಗ ಏಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾಡಿದ ಸುಮಲತಾ, ಮಾಜಿ ಸಿಎಂ ಆದವರಿಗೆ ಭಾಷೆ ಮೇಲೆ ಹಿಡಿತ ಇಲ್ವಾ? ಯಾವ ಮಾತು ಆಡಬೇಕು? ಯಾವ ಮಾತು ಆಡಬಾರದು ಅನ್ನೋ ಜ್ಞಾನ ಅವರಿಗೆ ಇಲ್ವಾ? ಈ ರೀತಿಯ ಮಾತು ಒಪ್ಪುವಂಥದ್ದಾ? ನಾನು ಸಂಸದೆ ಅನ್ನೋದಕ್ಕಿಂತ ಇಬ್ಬ ಹೆಣ್ಣುಮಗಳು. ಇಂತಹ ವೈಯಕ್ತಿಕ ಟೀಕೆಗಳು ನನ್ನ ಮೇಲೆ ಪರಿಣಾಮ ಬಿರೋದಿಲ್ಲ. ಐ ಡೋಂಟ್ ಕೇರ್, ನಾನು ಯಾವತ್ತೂ ಅಂತಹ ಲೆವೆಲ್ಗೆ ಹೋಗಿ ಪ್ರತಿಕ್ರಿಯೆ ನೀಡಿಲ್ಲ ಎಂದು ಕುಮರಸ್ವಾಮಿಯ ಮಾತಿನ ದಾಟಿಗೆ ಚಾಟಿ ಬೀಸಿದರು.
"ಕುಮಾರಸ್ವಾಮಿ ಅವರ ಹೇಳಿದಂತೆ ಮಂಡ್ಯ ಜಿಲ್ಲೆ ಈ ಹಿಂದೆ ನನ್ನಂತ ಸಂಸದೆಯನ್ನು ಕಂಡಿಲ್ಲ. ಕಾರಣ, ನನ್ನಂತ ನೇರವಂತಿಕೆ ಹಾಗೂ ಭ್ರಷ್ಟಾಚಾರದ ಬಗ್ಗೆ ನೇರವಾಗಿ ಮಾತನಾಡುತ್ತಿರುವುದು ಅವರಿಗೆ ಆಗುತ್ತಿಲ್ಲ. ನಾನು ನನ್ನ ಕೆಲಸ ಹಾಗೂ ಜವಾಬ್ದಾರಿಯನ್ನು ಮಾಡುತ್ತೇನೆ. ಚುನಾವಣೆಯ ಸಮಯದಿಂದಲೂ ಅವರ ಸಂಸ್ಕೃತಿ-ಸಂಸ್ಕಾರ ಏನು ಎನ್ನವುದು ಜನರಿಗೂ ತಿಳಿದಿದೆ" ಎಂದು ಹೇಳಿದ್ದಾರೆ.
ಕೆಆರ್ಎಸ್ ಡ್ಯಾಂ ಬಿರುಕು ಬಗ್ಗೆ ತನಿಖೆ ಮಾಡಲು ಒತ್ತಾಯಿಸಿದ್ದೇನೆ. ಅಲ್ಲಿನ ಅಕ್ರಮ ಗಣಿಗಾರಿಕೆ ಬಗ್ಗೆ ರೈತರು ನನಗೆ ಮನವಿ ಮಾಡಿದ್ದರು. ನಿರಾಣಿ ಅವರನ್ನು ಖುದ್ದಾಗಿ ಕರೆದುಕೊಂಡು ಹೋಗಿ ಸ್ಥಳ ತೋರಿಸಿದ್ದೆ. ಅಕ್ರಮ ಆಗಿದ್ದಕ್ಕೆ 100 ಕೋಟಿ ರೂ. ದಂಡ ಹಾಕಿದ್ದಾರೆ. ದಂಡವನ್ನು ಸುಮ್ಮನೆ ಹಾಕೋದಕ್ಕೆ ಆಗುತ್ತಾ? ಅಕ್ರಮ ಗಣಿಗಾರಿಕೆ ತಡೆದ್ರೆ ಮಂಡ್ಯದ ಖಜಾನೆಗೆ ಸಾವಿರಾರು ಕೋಟಿ ಬರಲಿದೆ. ಇದರಿಂದ ಯಾರಿಗೆ ಪ್ರಯೋಜನ? ಯಾರಿಗೆ ನಷ್ಟ ಅಂತ ತಿಳಿವಳಿಕೆ ಇರೋರು ಅರ್ಥ ಮಾಡಿಕೊಳ್ಳಬೇಕು. ಇದರಲ್ಲಿ ಬೇರೆಯವರು ಯಾಕೆ ಆತಂಕ ಪಡುತ್ತಿದ್ದಾರೆ ಗೊತ್ತಿಲ್ಲ ಎಂದರು.
ಕುಮಾರಸ್ವಾಮಿ ಸಿಎಂ ಆಗಿದ್ದಾಗ ಏನು ಮಾಡಿದ್ರು? ಅವರು ಸಿಎಂ ಆಗಿದ್ದಾಗ ಯಾಕೆ ಮೈ ಶುಗರ್ ಪ್ರಾರಂಭ ಮಾಡಿಲ್ಲ ಎಂದು ಪ್ರಶ್ನಿಸಿದ ಸುಮಲತಾ, ಎಲ್ಲರ ಜತೆ ಮಾತನಾಡಿ ಕಾರ್ಖಾನೆ ಪ್ರಾರಂಭಿಸಿ ಎಂದು ಮನವಿ ಮಾಡಿದ್ದೇನೆ. ಯಾವುದಾದರೂ ಒಂದು ಮಾದರಿಯಲ್ಲಿ ಕಾರ್ಖಾನೆ ತೆರೆಯಲಿ. ಮೈಶುಗರ್ನಲ್ಲಿ 400 ಕೋಟಿ ರೂ. ಅಕ್ರಮ ಆಗಿದೆ ಅಂತ ಹೇಳಿದ್ರು. ರೈತರ ಪರವಾಗಿ ಆ ಕಾರ್ಖಾನೆ ಪ್ರಾರಂಭ ಆಗಬೇಕು ಅಷ್ಟೆ. ನಾನು ಖಾಸಗೀಕರಣ ಮಾಡಿ ಅಂತ ಹೇಳಿಲ್ಲ ಎಂದರು.
"ಕೆಆರ್ಎಸ್ ಜಲಾಶಯ ಸೋರಿಕೆಯಾಗುತ್ತಿದ್ದರೆ ನೀರು ಹೋಗದಂತೆ ಸುಮಲತಾ ಅವರನ್ನು ಅಡ್ಡ ಮಲಗಿಸಬೇಕು" ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು.
ಮನ್ಮುಲ್ ಅಕ್ರಮದ ಬಗ್ಗೆಯೂ ಸಿಎಂ ಜತೆ ಚರ್ಚಿಸಿದೀನಿ. ಈ ಪ್ರಕರಣ ಸಿಐಡಿಗೆ ವಹಿಸಲಾಗಿದ್ದು, ತನಿಖೆ ಮುಗಿದು ವರದಿ ಬರಲಿ, ನಂತರ ಮಾತಾಡೋಣ. ತನಿಖೆಗೂ ಮುನ್ನ ಅವರ ಹಾಗೆ ಮಾತಾಡಲ್ಲ ನಾನು ಅವರಲ್ಲ ಎಂದು ಕುಮಾರಸ್ವಾಮಿ ಅವರಿಗೆ ಸುಮಲತಾ ತಿರುಗೇಟು ನೀಡಿದರು.