2023ರಲ್ಲಿ ಸಿದ್ದರಾಮಯ್ಯ ಚುನಾವಣೆ ನಿಲ್ಲೋದಕ್ಕೆ ಕ್ಷೇತ್ರ ಫಿಕ್ಸ್! | ಜನತಾ ನ್ಯೂಸ್
ಬೆಂಗಳೂರು : ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾನು ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧಿಸುವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ನಾನು ಚಾಮರಾಜಪೇಟೆ ಅಳಿಯ ಅಂತ ಹೇಳಿಕೆ ನೀಡಿದ ಬೆನ್ನಲ್ಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಿವಾಸದೆದುರು ಬದಾಮಿಯ ನೂರಾರು ಬೆಂಬಲಿಗರು ಜಮಾಯಿಸಿದ್ದು ಬದಾಮಿಯಿಂದಲೇ ಮುಂದಿನ ಬಾರಿಯೂ ಸ್ಪರ್ಧಿಸುವಂತೆ ಒತ್ತಾಯಿಸಿದ್ದಾರೆ.
ಈ ವೇಳೆ ಹೇಳಿಕೆ ನೀಡಿದ ಸಿದ್ದರಾಮಯ್ಯ, ತಾವು ಬದಾಮಿ ಬಿಟ್ಟು ಎಲ್ಲಿಯೂ ಸಹ ಚಾಮರಾಜಪೇಟೆಯಿಂದ ಚುನಾವಣೆಗೆ ನಿಲ್ತೀನಿ ಅಂತ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ನನಗೆ ಕೋಲಾರ, ಚಾಮರಾಜಪೇಟೆ, ಕೊಪ್ಪಳದಲ್ಲಿ ಎಲ್ಲಾ ಕಡೆಯಿಂದ ಕರೀತಿದ್ದಾರೆ.. ಆದರೆ ನಾನು ಎಲ್ಲಿಯೂ ಸಹ ಚಾಮರಾಜಪೇಟೆಯಿಂದ ನಿಲ್ತೀನಿ ಅಂತ ಹೇಳಿಲ್ಲ.. ಅಸೆಂಬ್ಲಿ ಯಲ್ಲಿ ಚರ್ಚೆ ಆದಾಗ ಅಶೋಕ್ ಕೇಳಿದಾಗ ನಾನು ಬದಾಮಿ ಶಾಸಕ ಅಂತ ಹೇಳಿದ್ದೆ ಎಂದರು. ಈ ವೇಳೆ ಅಭಿಮಾನಿಗಳು ಭಾರೀ ಕರತಾಡನ ಹರ್ಷೋದ್ಗಾರದ ಮೂಲಕ ಸಂಭ್ರಮಿಸಿದರು.
ಬದಾಮಿ ಕ್ಷೇತ್ರದ ಜನರನ್ನು ಮರೆಯಲು ಸಾಧ್ಯವೇ ಇಲ್ಲ. ಬೇರೆ ಕಡೆ ನಿಲ್ತೀನಿ ಅಂತ ನಾನು ಎಲ್ಲೂ ಹೇಳಿಲ್ಲ. ಒಬ್ಬ ಶಾಸಕನಾದವನು ದಿನನಿತ್ಯ ಜನರ ಕಷ್ಟಸುಖಗಳಿಗೆ ಸ್ಪಂದಿಸಬೇಕು. ನಾನು ಅಲ್ಲಿಗೆ ಹೆಚ್ಚು ಬರಲು ಆಗ್ತಿಲ್ಲ ಎಂದರು.
ಬದಾಮಿ ಕ್ಷೇತ್ರದ ಜನ ಬಹಳ ಒಳ್ಳೆಯವರು, ನಿಮ್ಮನ್ನು ಖುಷಿಪಡಿಸಲು ಈ ಮಾತು ಹೇಳ್ತಿಲ್ಲ, ಇನ್ನೂ ಎರಡು ವರ್ಷಗಳಿವೆ ಏನೇನೆಲ್ಲ ಮಾಡಲು ಸಾಧ್ಯವೋ ಎಲ್ಲ ಮಾಡ್ತೀನಿ. ನಾನು ನಿಮಗೆ ನೀರು, ಆಸ್ಪತ್ರೆ, ಜವಳಿ ಪಾರ್ಕ್ ಕೊಡಿಸಿರೋದೆಲ್ಲ ಒಬ್ಬ ಶಾಸಕನಾಗಿ ಮಾಡಬೇಕಾದ ಕೆಲಸ ಮಾಡಿದ್ದೇನೆ ಅಷ್ಟೇ ಎಂದಿದ್ದಾರೆ.
ಸುಮ್ಮನೆ ಖರ್ಚು ಮಾಡಿಕೊಂಡು ನೀವು ಇಲ್ಲಿಗೆ ಬರಬೇಡಿ, ನಾನೇ ಭಾನುವಾರ ಬಾದಾಮಿಗೆ ಬರುವೆ. ಅಲ್ಲಿಯೇ ನಿಮ್ಮನ್ನು ಭೇಟಿ ಮಾಡುತ್ತೇನೆ ಎಂದಿದ್ದೆ. ಆದರೂ ಬಂದಿದ್ದೀರಿ. ನಾನು ಬಾದಾಮಿ ಬಿಟ್ಟು ಬೇರೆ ಕಡೆ ಚುನಾವಣೆಗೆ ಸ್ಪರ್ಧಿಸುವುದಾದರೂ ನಿಮ್ಮ ಅನುಮತಿ ಪಡೆದೇ ಹೋಗುವೆ ಎಂದರು.