ಗಣಿಗಾರಿಕೆ ಪ್ರದೇಶಗಳಿಗೆ ಸುಮಲತಾ ನಾಳೆ ಭೇಟಿ, ನ್ಯೂಸೆನ್ಸ್ ಮಾಡಿ ತಿರುಗಾಡುವುದು ಗೌರವವಲ್ಲ ಎಂದ ಶಾಸಕ | ಜನತಾ ನ್ಯೂಸ್
ಮಂಡ್ಯ : ಅಕ್ರಮ ಗಣಿಗಾರಿಕೆಯಿಂದ ಕೆಆರ್ಎಸ್ ಆಣೆಕಟ್ಟಿನಲ್ಲಿ ಬಿರುಕು ಮೂಡಿದೆ ಎಂಬ ಹೇಳಿಕೆಗಳ ಬೆನ್ನಲ್ಲೇ ಸ್ವತಃ ತಾವೇ ಗಣಿಗಾರಿಕೆಯ ಗ್ರೌಂಡ್ ರಿಪೋರ್ಟ್ ಪಡೆಯಲು ಸಂಸದೆ ಸುಮಲತಾ ಅಂಬರೀಶ್ ಮುಂದಾಗಿದ್ದಾರೆ. ನಾಳೆ ಮಂಡ್ಯ ಜಿಲ್ಲೆಗೆ ತೆರಳಲಿರುವ ಸಂಸದೆ ಸುಮಲತಾ ಅಂಬರೀಶ್ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಪ್ರದೇಶಕ್ಕೆ ಭೇಟಿ ಕೊಡಲಿದ್ದಾರೆ.
ಶ್ರೀರಂಗಪಟ್ಟಣ ತಾಲೂಕಿನ ಚೆನ್ನಕೆರೆ, ಹಂಗರ ಹಳ್ಳಿ, ಪಾಂಡವಪುರ ತಾಲೂಕಿನ ಬೇಬಿ ಬೆಟ್ಟಕ್ಕೆ ಭೇಟಿ ನೀಡಲು ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಮಧ್ಯಾಹ್ನ 2.30ಕ್ಕೆ ಶ್ರೀರಂಗಪಟ್ಟಣದ ಚೆನ್ನನಕೆರೆ, 3.30ಕ್ಕೆ ಹಂಗರಹಳ್ಳಿಗೆ ಭೇಟಿ ನೀಡಿ, ಸಂಜೆ 4.30ಕ್ಕೆ ಪಾಂಡವಪುರದ ಬೇಬಿಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ.
ಇತ್ತ ಸುಮಲತಾ ನಾಳೆ ಶ್ರೀರಂಗಪಟ್ಟಣಕ್ಕೆ ಭೇಟಿ ನೀಡುವ ವಿಚಾರ ತಿಳಿಯುತ್ತಿದ್ದಂತೆ ಶಾಸಕ ರವೀಂದ್ರ ಶ್ರೀಕಂಠಯ್ಯ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು, 3 ದಿನಗಳಿಂದ ಕಟ್ಟೆ ಬಗ್ಗೆ ಭಾಷಣ ಬಿಗಿದು ಈಗ ಯಾಕೆ ಗಣಿ ಸ್ಥಳಗಳಿಗೆ ಹೋಗ್ತಿದ್ದೀರಾ? ನಿಮ್ಮ ಉದ್ದೇಶ ಏನು..? ಗಣಿಗಾರಿಕೆ ನಂಬಿ ಬದುಕುವವರಿಗೆ ತೊಂದರೆ ಕೊಡುವುದು ಏಕೆ? ಎಂದು ಪ್ರಶ್ನಿಸಿದ್ದಾರೆ.
ನಿಮಗೆ ಅಣೆಕಟ್ಟಿನ ಬಗ್ಗೆ ಆಸಕ್ತಿ ಇದ್ದಿದ್ದರೇ ಮೊದಲು ಅಲ್ಲಿಗೆ ಭೇಟಿ ಕೊಡ್ತಿದ್ರಿ. ನಿಮಗೆ ಕಟ್ಟೆ ಬಗ್ಗೆ ಕಾಳಜಿ ಇಲ್ಲ. ಮಂಡ್ಯದಲ್ಲಿ ಅದಿರು, ಚಿನ್ನ ತೆಗೆಯುತ್ತಿಲ್ಲ. ಜಲ್ಲಿಕಲ್ಲು ತೆಗೆಯೋದು. ಯಾರಾದರೂ ಅಕ್ರಮ ಮಾಡುತ್ತಿದ್ದರೆ ಸಕ್ರಮ ಮಾಡಿಕೊಡಿ. ಸುಮ್ಮನೆ ನ್ಯೂಸೆನ್ಸ್ ಕ್ರಿಯೇಟ್ ಮಾಡಬೇಡಿ ಎಂದು ಅವರು ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಪ್ರಶ್ನೆಗಳ ಮೂಲಕ ಟೀಕಿಸಿದ್ದಾರೆ.
ಕೆಆರ್ಎಸ್ ಡ್ಯಾಂ ಬಿರುಕು ಬಿಟ್ಟಿದೆ ಎಂಬ ಹೇಳಿಕೆ ವಿಚಾರವಾಗಿ ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ರಾಜ್ಯ ಸರ್ಕಾರ ಕ್ರಮ ವಹಿಸಬೇಕು. ಜಲಾಶಯ ಬಿರುಕು ಬಿಟ್ಟಿಲ್ಲವೆಂದು ರಾಜ್ಯ ಸರ್ಕಾರ ಟೆಕ್ನಿಕಲ್ ರಿಪೋರ್ಟ್ ಬಿಡುಗಡೆಮಾಡಿದೆ. ವರದಿ ಬಂದಮೇಲೂ ಬಿರುಕು ಬಿಟ್ಟಿದೆ ಎಂದು ಹೇಳ್ತಿದ್ದಾರೆ. ಒಬ್ಬ ಸಂಸದೆ ಈ ರೀತಿಯ ಉದ್ದೇಶ ಇಟ್ಟಕೊಂಡರೆ ರಾಜ್ಯ ಸರ್ಕಾರ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು.
ದೇಶದ ಗೌಪ್ಯತೆ ಕಾಪಾಡುವುದಾಗಿ ಪ್ರಮಾಣ ವಚನ ಸ್ವೀಕರಿಸದವರು ಡ್ಯಾಂ ದೇಶದ ಆಸ್ತಿ, ಇದು ಬಿರುಕು ಬಿಟ್ಟಿದೆ ಅಂತಾರೆ. ಡ್ಯಾಂ ಬಿರುಕು ಎಂದು ಬಹಿರಂಗವಾಗಿ ಹೇಳೋದೇನಿದೆ? ನಾಗರಿಕರು, ವಿದ್ಯಾವಂತರು ಮಾಡುವ ಕೆಲಸನಾ ಇದು? ಇಂತಹ ಹೇಳಿಕೆಗಳನ್ನೇ ಅಲ್ವಾ ದೇಶದ್ರೋಹ ಅನ್ನೋದು? ಡ್ಯಾಂ ಬಿರುಕು ಬಿಟ್ಟ ವರದಿ ಇದ್ದರೆ ತೆಗೆದುಕೊಂಡು ಬನ್ನಿ. ಸುಮ್ಮನೆ ಯಾಕೆ ಕೆಆರ್ಎಸ್ ಡ್ಯಾಂಗೆ ಅಪಕೀರ್ತಿ ತರುತ್ತೀರಾ? ನೀವು ಗೆದ್ದಿದ್ದು ಡ್ಯಾಂ ಸರಿ ಇಲ್ಲ ಅಂತ ಹೇಳೋದಕ್ಕಾ? ಎಂದು ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಶಾಸಕ ರವೀಂದ್ರ ಶ್ರೀಕಂಠಯ್ಯ ಕಿಡಿಕಾರಿದ್ದಾರೆ.