ಸುಮಲತಾ ವಿರುದ್ಧ ನಾನು ತಪ್ಪು ಪದ ಬಳಕೆ ಮಾಡಿಲ್ಲ, ನಾನೇಕೆ ಕ್ಷಮೆ ಕೇಳಬೇಕು: ಕುಮಾರಸ್ವಾಮಿ | ಜನತಾ ನ್ಯೂಸ್
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮತ್ತು ಸಂಸದೆ ಸಮಲತಾ ಅವರ ಮಧ್ಯೆ ಕೆ.ಆರ್.ಎಸ್ ಜಲಾಶಯದ ವಿಚಾರದಲ್ಲಿ ವಾಕ್ಸಮರ ಮುಂದುವರಿದಿದೆ.
ಸುಮಲತಾ ಅವರು ಸಂಸದರಾದ ಮೇಲೆ ಅಲ್ಲಿ ಗಣಿಗಾರಿಕೆ ನಡೆಯುತ್ತಿದೆಯೇ, 50-60 ವರ್ಷಗಳಿಂದ ಗಣಿಗಾರಿಕೆ ಆಗುತ್ತಿದೆ. "ಗಣಿಗಾರಿಕೆಯಿಂದ ಕೆಆರ್ ಎಸ್ ಅಣೆಕಟ್ಟು ಬಿರುಕು ಬಿಟ್ಟಿದೆ" ಎಂದು ಹೇಳಿದ್ದ ಸಂಸದೆ ಸುಮಲತಾ ಇದೀಗ ಬಿರುಕು ತೋರಿಸುವುದನ್ನು ಬಿಟ್ಟು ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ಹೋಗಿದ್ದಾರೆ. ಅವರು ಅಲ್ಲಿಗೆ ಹೋಗಿದ್ದೇಕೆ? ಮಾಲಕರನ್ನು ಬೆದರಿಸಿ ಹಣ ವಸೂಲಿ ಮಾಡಲು ಹೋಗಿರಬಹುದು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್. ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ರಾಜ್ಯದಲ್ಲಿ ದೀರ್ಘಕಾಲದಿಂದ ಗಣಿಗಾರಿಕೆ ನಡೆಯುತ್ತಿದೆ. ಎಲ್ಲ ಗಣಿಗಾರಿಕೆಗಳ ಬಗ್ಗೆಯೂ ಸಿಬಿಐ ಅಥವಾ ಸಿಐಡಿಯಿಂದ ತನಿಖೆ ಮಾಡಿಸಲಿ. ತಪ್ಪು ಮಾಡಿದವರ ವಿರುದ್ಧ ಕ್ರಮ ಜರುಗಿಸಲಿ. ಅದಕ್ಕೆ ನಮ್ಮದೇನು ತಕರಾರಿಲ್ಲ ಎಂದರು.
ಸುಮಲತಾ ವಿರುದ್ಧ ನಾನು ಯಾವುದೇ ಕೆಟ್ಟ ಪದ ಬಳಸಿಲ್ಲ. ಹೀಗಿರುವಾಗ ನಾನೇಕೆ ಕ್ಷಮೆ ಕೇಳಬೇಕು. ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಅದನ್ನು ನಾನು ಬೇರೆಯವರಿಂದ ಕಲಿಯಬೇಕಿಲ್ಲ ಎಂದು ತಿರುಗೇಟು ನೀಡಿದರು.
ಅವರಲ್ಲಿ ಕ್ಷಮೆ ಕೇಳುವಂತಹ ಪದವನ್ನು ನಾನು ಬಳಕೆ ಮಾಡಿಲ್ಲ. ಸುಮಲತಾ ಅವರು ಯಾವ ಸಂಸ್ಕೃತಿಯಲ್ಲಿ ಬೆಳೆದಿದ್ದಾರೆ, ಅವರೇನು ಮಾಡುತ್ತಿದ್ದಾರೆ ಎಂದು ನನಗೆ ಗೊತ್ತಿದೆ ಎಂದು ಕುಮಾರಸ್ವಾಮಿ ಹರಿಹಾಯ್ದರು.
ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ನೋಡಿ ಕಲಿಯಬೇಕು ಎಂಬ ಹೇಳಿಕೆ ನೀಡುವ ಮೂಲಕ ಸುಮಲತಾ ಅವರು ನಮ್ಮ ಕುಟುಂಬ ಒಡೆಯಲು ಪ್ರಯತ್ನಿಸುತ್ತಿದ್ದಾರೆ. ನಮ್ಮ ಕುಟುಂಬ ಒಡೆಯಲು, ನನ್ನ ರಾಜಕೀಯ ಭವಿಷ್ಯ ಮುಗಿಸಲು ಬಹಳ ಜನ ಪ್ರಯತ್ನಿಸಿ, ಸೋತಿದ್ದಾರೆ ಎಂದ ಕುಮಾರಸ್ವಾಮಿ, ನಡವಳಿಕೆಯ ಬಗ್ಗೆಯೂ ನನಗೆ ಗೊತ್ತಿದೆ. ಆ ಹೆಣ್ಣು ಮಗಳ ನಡವಳಿಕೆ ಬಗ್ಗೆ ಎಲ್ಲ ಗೊತ್ತಿದೆ ಎಂದು ಹೇಳಿದರು.