ಅಂಬರೀಶ್ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತಂದು, ಅವರಿಗೆ ಸ್ಮಾರಕ ನಿರ್ಮಾಣ ಮಾಡಿದೆ | ಜನತಾ ನ್ಯೂಸ್
ಮಂಡ್ಯ : ಸಂಸದೆ ಸುಮಲತಾ ಅಂಬರೀಶ್ ಅವರ ಅಂಬರೀಶ್ ವಿಚಾರ ಚರ್ಚಿಸಿದರೆ ಮಣ್ಣಾಗುತ್ತಾರೆಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿರುಗೇಟನ್ನೂ ನೀಡಿದ್ದಾರೆ.
ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಗ್ರಾಮದಲ್ಲಿ ಮಾತನಾಡಿದ ಅವರು, ನಾನು ಸಿಎಂ ಆಗಿದ್ದಕ್ಕೆ ಅಂಬರೀಶ್ ಪಾರ್ಥಿವ ಶರೀರವನ್ನು ಮಂಡ್ಯಗೆ ತಂದು ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಟ್ಟೆ, ಬೆಂಗಳೂರಿನಲ್ಲಿ ಅಂಬರೀಶ್ ಅವರ ಸಮಾಧಿಗೆ ಜಾಗ ನೀಡಿದೆ. ಆದರೆ ವಿಷ್ಣುವರ್ಧನ್ ಅವರು ನಿಧನರಾದಾಗ ಬಿಜೆಪಿ ಸರ್ಕಾರ ಹೇಗೆ ನಡೆದುಕೊಂಡಿದೆ ಎನ್ನುವುದು ಎಲ್ಲರಿಗೂ ಗೋತ್ತು. ಇಂದಿಗೂ ಸಹ ವಿಷ್ಟುವರ್ಧನ್ ಅವರಿಗೆ ಸರಿಯಾಗಿ ಸ್ಮಾರಕ ಕಟ್ಟಲು ಆಗಿಲ್ಲ. ಇದನ್ನು ಸುಮಲತಾ ಅವರು ಅರ್ಥ ಮಾಡಿಕೊಳ್ಳಬೇಕು. ಈ ರೀತಿ ಮಣ್ಣಾಗಿ ಹೋಗುತ್ತಾರೆ ಎಂದು ಹೇಳಲು ಹೋಗಬಾರದು ಎಂದರು.
ಬೇರೆ ಮಹಿಳೆಯರ ಬಗ್ಗೆ ಬೇಕಾದರೆ ಚರ್ಚೆ ಮಾಡೋಣ. ಇಂತಹ ವಿಶೇಷವಾದ ಮಹಿಳೆಗೆ ನಮಸ್ಕಾರ. ವಿಷ್ಣುವರ್ಧನ್ ಸ್ಮಾರಕ ಏನಾಯಿತು ಎಲ್ಲರಿಗೂ ಗೊತ್ತಿರೋದೆ. ಬಿಜೆಪಿ ಸರ್ಕಾರದವರು ಈವರೆಗೆ ಏನಾದರೂ ಮಾಡಿದರಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಹಿರಿಯರಾದ ಜಿ.ಮಾದೇಗೌಡ ಆರೋಗ್ಯ ವಿಚಾರಿಸಲು ಮಂಡ್ಯಕ್ಕೆ ಬಂದಿದ್ದೇನೆ. ಈ ಸಂದರ್ಭದಲ್ಲಿ ಬೇರೆಯವರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ನಾನು ಅವರ ಬಗ್ಗೆ ಏಕೆ ಮಾತಾಡಲಿ, ಸುಮಲತಾ ಹೇಳಿಕೆ ಬಗ್ಗೆ ಮೈಸೂರು ಸಂಸದ ಪ್ರತಾಪ್ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ. ಅಕ್ರಮ ಗಣಿಗಾರಿಕೆ ವಿಚಾರವಾಗಿ ಗಣಿ ಸಚಿವ ನಿರಾಣಿ ಸ್ಪಷ್ಟನೆ ನೀಡಿದ್ದಾರೆ ಎಂದರು.
ಅಕ್ರಮ ಗಣಿಗಾರಿಕೆ ನಿಷೇಧಿಸಿದ್ದೇವೆಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ನಾನು ಮುಖ್ಯಮಂತ್ರಿ ಆಗಿದ್ದಾಗಿ ಅಕ್ರಮ ಗಣಿಗಾರಿಕೆ ಬಂದ್ ಮಾಡಿಸಿದ್ದೆ. ನನ್ನನ್ನು ಫಿನಿಶ್ ಮಾಡುತ್ತೇವೆ ಎಂದು ತಿಳಿದುಕೊಂಡಿದ್ದರೆ ಅದು ಆಗಲ್ಲ. ಇನ್ನು 100 ವರ್ಷ ಆದರೂ ಕೆಆರ್ಎಸ್ ಡ್ಯಾಂಗೆ ಏನೂ ಆಗಲ್ಲ. ನನ್ನ ಅವಧಿಯಲ್ಲಿ ಕೆಆರ್ಎಸ್ ಸುತ್ತಮುತ್ತಲ 20 ಕಿಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧ ಮಾಡಿದ್ದೆ. ಮನ್ಮುಲ್, ಮೈಶುಗರ್ ವಿಚಾರದಲ್ಲಿ ಅನ್ಯಾಯ ಆಗಲು ಬಿಡಲ್ಲ ಎಂದು ಘೋಷಿಸಿದರು.
ಸುಮಲತಾ ಅವರ ಬಗ್ಗೆ ಸಂಸದ ಪ್ರತಾಪ್ ಸಿಂಹ ಅವರು ಸುಧೀರ್ಘವಾಗಿ ಮಾತನಾಡಿದ್ದಾರೆ. ನನ್ನ ತೇಜೋವಧೆ ಮಾಡಿದರು ಸಹ ಯಾರೂ ನನ್ನ ಮುಗಿಸಲು ಸಾಧ್ಯವಿಲ್ಲ. ನಾವು ಸದಾ ಜನರು ಮತ್ತು ರೈತರ ಪರವಾಗಿ ಇರುತ್ತೇನೆ, ಜನರ ಆಶೀರ್ವಾದ ನನ್ನ ಮೇಲೆ ಇದೆ ಎಂದು ಕುಮಾರಸ್ವಾಮಿ ಹೇಳಿದರು.