ಸಿದ್ದರಾಮಯ್ಯ ಯಾವ ಪಕ್ಷಕ್ಕೆ ಮಗ? ತಾವು ಯಾವ ಪಕ್ಷಕ್ಕೆ ನಿಷ್ಠಾವಂತ? ಈಶ್ವರಪ್ಪ | ಜನತಾ ನ್ಯೂಸ್
ಬೆಂಗಳೂರು : ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ತಾನು ಸೊಸೆ ಕೀಲಿ ಕೈ ನನ್ನ ಕೈಯಲ್ಲಿ ಇದೆ ಎನ್ನುತ್ತಾರೆ. ಹಾಗಾದರೆ, ಅವರು ಯಾವ ಪಕ್ಷಕ್ಕೆ ಮಗ ಎಂದು ಪ್ರಶ್ನಿಸಿದ ಈಶ್ವರಪ್ಪ, ನಾವು ಪಕ್ಷವನ್ನು ತಾಯಿ ಅಂದುಕೊಂಡಿದ್ದೇವೆ. ನಮ್ಮ ತಾಯಿಗೆ ಕಿಂಚಿತ್ ತೊಂದರೆಯಾದರೂ ನಾವು ವಿರೋಧಿಸಿ ನಿಲ್ಲುತ್ತೇವೆ. ಸಿದ್ದರಾಮಯ್ಯ ತಾವು ಯಾವ ಪಕ್ಷಕ್ಕೆ ನಿಷ್ಠಾವಂತ ಎಂದು ತಿಳಿಸಬೇಕು ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯ,ಪರಮೇಶ್ವರ ಇಬ್ಬರೂ ಯಾವುದಾದರೂ ದಲಿತರ ಬೀದಿಗೆ ಹೋಗಲಿ. ಸಿದ್ದರಾಮಯ್ಯರನ್ನು ಸೋಲಿಸಲು ನಾನು ಪ್ರಯತ್ನ ಮಾಡಿಲ್ಲವೆಂದು ಪರಮೇಶ್ವರ್ ಹೇಳಲಿ, ಪರಮೇಶ್ವರರನ್ನು ಸೋಲಿಸಲು ನಾನು ಪ್ರಯತ್ನ ಮಾಡಿಲ್ಲವೆಂದು ಸಿದ್ದರಾಮಯ್ಯ ಆಣೆ ಮಾಡಿ ಹೇಳಲಿ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಸವಾಲೆಸೆದರು.
ಕಾಂಗ್ರೆಸ್ ನಲ್ಲಿ ಐವರು ಸ್ವಯಂ ಘೋಷಿತ ಮುಖ್ಯಮಂತ್ರಿಗಳಿದ್ದಾರೆ. ಚುನಾವಣೆಗೆ ಇನ್ನೂ ಒಂದೂವರೆ ವರ್ಷವಿದೆ. ಒಂದೊಂದು ಸಮುದಾಯಕ್ಕೆ ಒಬ್ಬೊಬ್ಬ ನಾಯಕ ಸಿಎಂ ಆಗಬೇಕು ಎಂದು ಘೋಷಣೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕೈ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ತನ್ವೀರ್ಸೇಠ್, ಪರಮೇಶ್ವರ್ ಹಾಗೂ ಎಂ.ಬಿ. ಪಾಟೀಲ್ ಮುಖ್ಯಮಂತ್ರಿಯಾಗುವುದಾಗಿ ಸ್ವಯಂ ಘೋಷಿಸಿಕೊಂಡಿದ್ದಾರೆ. ನಾವು ಬಿಜೆಪಿಯವರು ಪಾಂಡವರಿದ್ದಂತೆ, ಒಬ್ಬ ನಾಯಕನನ್ನು ಆರಿಸಿಕೊಂಡು ರಾಜ್ಯದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ನಲ್ಲಿ ಗೊಂದಲವಿದೆ. ಇದಕ್ಕೆ ಉದಾಹರಣೆ ಪಕ್ಷ ಬಿಟ್ಟು ಹೋದ 17 ಮಂದಿಯನ್ನು ಮತ್ತೆ ಸೇರಿಸಿಕೊಳ್ಳುವುದಿಲ್ಲ ಎಂದು ಹೇಳುತ್ತಾರೆ. ಡಿ.ಕೆ.ಶಿವಕುಮಾರ್ ಅಪ್ಲಿಕೇಶನ್ ಹಾಕಿಕೊಳ್ಳಲಿ ನೋಡೋಣ ಎನ್ನುತ್ತಾರೆ. ಇದು ಮುಳುಗುತ್ತಿರುವ ಪಕ್ಷ. ಇಂತಹ ಪಕ್ಷಕ್ಕೆ ಯಾರು ಅರ್ಜಿ ಹಾಕಿಕೊಂಡು ಹೋಗುತ್ತಾರೆ ಎಂದು ಟೀಕಾಪ್ರಹಾರ ನಡೆಸಿದರು.
ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಮೀಸಲಾತಿ ಘೋಷಣೆ ಮಾಡಿದ್ದರ ಕುರಿತು ಎಲ್ಲ ಪಕ್ಷದವರಿಂದಲೂ ಆಕ್ಷೇಪ ವ್ಯಕ್ತವಾಗಿದೆ. ಇಷ್ಟು ಮುಂಚಿತವಾಗಿ ಘೋಷಿಸಿದ ಕುರಿತು ನಮಗೂ ಒಪ್ಪಿಗೆ ಇಲ್ಲ. ಸೌಜನ್ಯಕ್ಕಾದರೂ ನಮ್ಮನ್ನು ಕೇಳಬೇಕಿತ್ತು. ಆದರೆ, ಮರುಪರಿಶೀಲನೆ ಮಾಡಿ ಎಂದು ಸರ್ಕಾರ ಮನವಿ ಮಾಡುವುದಿಲ್ಲ. ಯಾರಿಗೆ ಅಸಮಾಧಾನ ಇದೆಯೋ ಅವರು ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶ ಇದೆ ಎಂದರು.
ಸಂಸದರಾದ ಸುಮಲತಾ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇಬ್ಬರೂ ಬಳಸುವ ಭಾಷೆ ಸರಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.