ನಕಲಿ ವಿಡಿಯೊ ಸೃಷ್ಟಿಸಿ ನನ್ನ ಹಾಗು ಸುಮಲತಾ ಮಧ್ಯೆ ಸಂಬಂಧ ಕಲ್ಪಿಸಲು ಕುಮಾರಸ್ವಾಮಿ ಯತ್ನಿಸಿದ್ದರು | ಜನತಾ ನ್ಯೂಸ್
ಬೆಂಗಳೂರು : ಸಂಸದೆ ಸುಮಲತಾ ಅಂಬರೀಷ್ ಪರ ಮಾತನಾಡಿರುವ ಚಲನಚಿತ್ರ ನಿರ್ಮಾಪಕ, ಅಂಬರೀಷ್ ಕುಟುಂಬದ ಆಪ್ತ ರಾಕ್ ಲೈನ್ ವೆಂಕಟೇಶ್ ಅವರು ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಮತ್ತು ಸುಮಲತಾ ಅಂಬರೀಷ್ ಬಗ್ಗೆ ಸಂಬಂಧ ಕಲ್ಪಿಸಲು ಕುಮಾರಸ್ವಾಮಿ ಯತ್ನಿಸಿದ್ದರು ಎಂದೂ ರಾಕ್ಲೈನ್ ವೆಂಕಟೇಶ್ ಗಂಭೀರ ಆರೋಪ ಮಾಡಿದ್ದಾರೆ.
ಕಳೆದ 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ ನಕಲಿ ವಿಡಿಯೊ ಸೃಷ್ಟಿಸಿ ತಮ್ಮ ಮತ್ತು ಸುಮಲತಾ ಅವರ ತೇಜೋವಧೆ ಮಾಡಲು ಹೊರಟಿದ್ದರು, ಸುಮಲತಾ ಅವರ ಹೆಸರಿಗೆ ಮಸಿ ಬಳಿಯಲು ಯತ್ನಿಸಿದ್ದರು ಎಂದು ಗುರುತರ ಆರೋಪಗಳನ್ನು ಮಾಡಿದ್ದಾರೆ.
ಹೆಚ್ ಡಿ ಕುಮಾರಸ್ವಾಮಿ ಅವರು ಆಡಿಯೋ ವಿಡಿಯೋ ಬಾಂಬ್ ಎಂದು ಬೆದರಿಕೆ ಹಾಕುವುದು ಹೊಸದಲ್ಲ, ಚುನಾವಣೆ ಸಂಬಂಧ ಬೆಂಗಳೂರು ಮತ್ತು ಮಂಡ್ಯದಲ್ಲಿ ಹಲವು ಸಭೆಗಳನ್ನು,ಚರ್ಚೆಗಳನ್ನು ಮಾಡುತ್ತಿದ್ದೆವು. ನಮ್ಮ ಬೆಂಬಲಿಗರ ಜೊತೆ ಚರ್ಚಿಸಲು ಹೊಟೇಲ್ ಗಳಲ್ಲಿ ಕೂಡ ಸಭೆ ಮಾಡುತ್ತಿದ್ದೆವು.
ಹೀಗೆ ಏಟ್ರಿಯಾ ಹೊಟೇಲ್ ನಲ್ಲಿ ಸಭೆ ನಡೆಸಲು ನಿಶ್ಚಯಿಸಿದ್ದಾಗ ಕಾರಿನಿಂದ ನಾನು ಮತ್ತು ಸುಮಲತಾ ಅವರು ಇಳಿದು ಹೋಗುವಾಗ ಹೊಟೇಲ್ ನ ಸಿಸಿಟಿವಿ ಕ್ಯಾಮರಾದ ದೃಶ್ಯಾವಳಿಗಳನ್ನು ಸೆಕ್ಯುರಿಟಿ ಕೈಯಿಂದ ಪಡೆದುಕೊಂಡು ಸುಮಲತಾ ಅವರ ಹೆಗಲಿಗೆ ಯಾರೋ ಕೈ ಹಾಕಿದ್ದ ಫೋಟೋ ಬಳಸಿಕೊಂಡು ನಾನು ಮತ್ತು ಸುಮಲತಾ ಅವರು ಹೊಟೇಲ್ ಕಾರಿಡಾರ್ ಮೂಲಕ ರೂಂಗೆ ಇಬ್ಬರೇ ಹೋಗುತ್ತೇವೆ ಎಂದು ಅಶ್ಲೀಲ ಚಿತ್ರಗಳನ್ನು ತಂದು ಪೇಸ್ಟ್ ಮಾಡಿ ನಕಲಿ ವಿಡಿಯೊ ಸೃಷ್ಟಿಸಿ ಚುನಾವಣೆ ಸಂದರ್ಭದಲ್ಲಿ ಹರಿಬಿಡಲು ಆಸೆಪಟ್ಟಿದ್ದರು.
ಡಾ ರಾಜ್ ಕುಮಾರ್ ಅವರು ತೀರಿಕೊಂಡಾಗ ಯಾರು ಸಿಎಂ ಆಗಿದ್ದರು ಎಂದು ಗೊತ್ತಿದೆ, ಡಾ ವಿಷ್ಣುವರ್ಧನ್ ಅವರು ತೀರಿಕೊಂಡಾಗ ಅಂಬರೀಷ್ ಅವರೇ ಖುದ್ದು ನಿಂತು ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಿಸಿದ್ದರು. ಆಗ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದರು. ಅಂಬರೀಷ್ ಅವರಿಗೆ ಯಾರೂ ಬೇಕಾಗಿಲ್ಲ, ಯಾರು ಏನೂ ಮಾಡಬೇಕಾಗಿರಲಿಲ್ಲ, ಅವರು ದೇವಮಾನವ, ದೇವರು ಅವರಿಗೆ ಮಾಡಬೇಕಾದ್ದನ್ನು ಮಾಡಿಸಿಕೊಂಡು ಕರೆದುಕೊಂಡು ಹೋದರು ಎಂದರು.
ಈ ಬಗ್ಗೆ ಹೆಚ್ ಡಿ ಕುಮಾರಸ್ವಾಮಿಯ ಚಾನೆಲ್ ನಲ್ಲಿದ್ದ ಅಂಬರೀಷ್ ಅವರ ಅಭಿಮಾನಿಯೇ ನನ್ನಲ್ಲಿ ಹೇಳಿದ್ದರು, ಕೊನೆಗೆ ಅದು ಚುನಾವಣೆ ಸಮಯದಲ್ಲಿ ಬಿಡುಗಡೆ ಮಾಡದೆ, ಇನ್ನೊಂದು ಸಂದರ್ಭದಲ್ಲಿ ನೋಡೋಣ ಎಂದು ನಿರ್ಧರಿಸಿದ್ದಾರೆ ಎಂದರು. ಅಂದರೆ ಅವರ ಮನಸ್ಸು ಎಷ್ಟು ಹೊಲಸಾಗಿದೆ ಎಂದು ಹೆಚ್ ಡಿ ಕುಮಾರಸ್ವಾಮಿಯವರನ್ನೇ ಸಂಬೋಧಿಸಿ ರಾಕ್ ಲೈನ್ ವೆಂಕಟೇಶ್ ಆರೋಪಿಸಿದ್ದಾರೆ.