ಪದೇ ಪದೇ ನನ್ನ ತಂದೆಯ ಸಾವಿನ ವಿಚಾರ ತರಬೇಡಿ: ಅಭಿಷೇಕ್ ಅಂಬರೀಶ್ | ಜನತಾ ನ್ಯೂಸ್
ಬೆಂಗಳೂರು : ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರ ರಾಜಕೀಯ ಬೆಳವಣಿಗೆ ಸಹಿಸದೆ ಈ ರೀತಿಯಲ್ಲಿ ಟಾರ್ಗೆಟ್ ಮಾಡುತ್ತಿರಬಹುದು ಎಂದು ಸಂಸದೆ ಸುಮಲತಾ ಅಂಬರೀಶ್ ಅವರ ಪುತ್ರ ಅಭಿಷೇಕ್ ಅವರು ಆರೋಪ ಮಾಡಿದ್ದಾರೆ.
ಅಂಬರೀಶ್ ಮೃತದೇಹವನ್ನು ಮಂಡ್ಯಕ್ಕೆ ಕೊಂಡೊಯ್ಯಲು ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದೀರು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನ ತಲೆಗೆ ಗನ್ ಇಟ್ಟು ಬಾಡಿ ತೆಗೆದುಕೊಂಡು ಹೋಗಿದ್ದಾರಾ? ನಾವು ಒಪ್ಪಿಗೆ ನೀಡಿದ್ದಕ್ಕೆ ತಾನೆ ಮಂಡ್ಯಕ್ಕೆ ಕೊಂಡೊಯ್ದಿದ್ದು… ಸಾವಿನ ವಿಚಾರದಲ್ಲಿ ಪದೇಪದೆ ರಾಜಕೀಯ ನನಗೆ ಇಷ್ಟವಿಲ್ಲ ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ ಅವರ ಮನಸ್ಸಿನಲ್ಲಿ ಏನಿದೆ ಎಂದು ಗೊತ್ತಿಲ್ಲ. ಅವರೇ ಫೋನ್ ಟ್ಯಾಪ್ ಮಾಡುವವರು ಎಂದು ಅಭಿಷೇಕ್ ಆರೋಪಿಸಿದ್ದಾರೆ. ಸಂಸದೆಯಾಗಿ ನನ್ನ ತಾಯಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಮಗನಾಗಿ ಅವರ ಬೆನ್ನಿಗೆ ನಾನು ನಿಲ್ಲುತ್ತೇನೆ. ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಇಲ್ಲಿಗೆ ನಿಲ್ಲಿಸುವುದಿಲ್ಲ. ಮಂಡ್ಯ ಕ್ಷೇತ್ರದ ಜನತೆ ನಮ್ಮ ತಾಯಿಯ ಬೆನ್ನಿಗೆ ನಿಂತಿದ್ದಾರೆ ಎಂದರು.
ಒಬ್ಬ ಮಗನಾಗಿ ತಂದೆಯ ಸಾವಿನ ವಿಚಾರವನ್ನು ರಾಜಕೀಯ ಮಾಡುತ್ತಿರುವುದನ್ನು ನೋಡಿ ನನಗೆ ನೋವಾಗುತ್ತಿದೆ. ತಂದೆ ಮೃತಪಟ್ಟಾಗ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದರು. ಅವರು ಏನು ಹೇಳಿದ್ದರು ಎಂಬುದು ದಾಖಲೆ ಇದೆ. ಪದೇ ಪದೇ ನನ್ನ ತಂದೆಯ ಸಾವಿನ ವಿಚಾರ ತರಬೇಡಿ ಎಂದು ಹೆಚ್ಡಿಕೆಗೆ ಅಭಿಷೇಕ್ ಟಾಂಗ್ ನೀಡಿದ್ದಾರೆ.
ತಂದೆಯ ಸಾವಿನ ವಿಚಾರವಾಗಿ ಮತ್ತೆ ಮತ್ತೆ ಮಾತಾಡೋದು ಸರಿ ಹೋಗಲ್ಲ. ಅಕ್ರಮ ಗಣಿಗಾರಿಕೆ ಧ್ವನಿ ಎತ್ತಿದ್ದು ತಪ್ಪಾ? ನವೆಂಬರ್ 24, 2018 ಏನು ಮಾತಾಡಿದ್ರು ನೀವೇ ನೋಡಿ. ನಿಮ್ಮ ಮನೆಯಲ್ಲಿ ಯಾರನ್ನಾದರು ಕಳೆದುಕೊಂಡಾಗ ಮನೆಯವರು ಮಾತಾಡೋ ಪರಿಸ್ಥಿತಿಯಲ್ಲಿ ಇರ್ತಾರಾ? ಅವತ್ತು ನಮ್ಮಮ್ಮ ಗಂಡನನ್ನು ಕಳೆದುಕೊಂಡ ನೋವಿನಲ್ಲಿದ್ದರು. ಏನೂ ಮಾತಾಡಿಲ್ಲ ಅವತ್ತು. ಯಾಕೆ ಅವರು ನಮ್ಮನ್ನು ವಿರೋಧಿಸುತ್ತಿದ್ದಾರೆ ಅವರ ಮನಸ್ಸಲ್ಲಿ ಏನಿದೆ ನನಗೆ ಗೊತ್ತಿಲ್ಲ. ಅಕ್ರಮದ ಬಗ್ಗೆ ಮಾತಾಡೋದು ನಟೋರಿಯಸ್ ಆದರೆ ನಾವು ನಟೋರಿಯಸ್ ಹೌದು ಎಂದು ಹೆಚ್ಡಿಕೆ ವಿರುದ್ಧ ಕಿಡಿಕಾರಿದರು.
ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿದ್ದಕ್ಕೆ ವಿರೋಧ ವ್ಯಕ್ತವಾಗಿದ್ದಕ್ಕೆ ಉತ್ತರ ನೀಡಿದ ಅವರು, ಅಕ್ರಮ ಕೆಲಸ ಮಾಡುವವರು ಯಾರಾದರೂ ತನಿಖೆಗೆ ಹೋದ್ರೆ ರೆಡ್ ಕಾರ್ಪೆಟ್ ಹಾಕಿಕೊಡ್ತಾರಾ? ಮಾಜಿ ಸಿಎಂ ಅವರು ಹಿರಿಯರು. ನಾನು ಅವರ ಸಮಾನ ಅಲ್ಲ. ಅವರು ಹೇಗೆ ಮಾತನಾಡುತ್ತಾರೆ, ಯಾಕೆ ಮಾತನಾಡುತ್ತಾರೆ ಗೊತ್ತಿಲ್ಲ. ಜನರೇ ಅವರನ್ನು ನೋಡ್ತಿದ್ದಾರೆ. ಮಾತನಾಡಿ ಪ್ರಯೋಜನ ಇಲ್ಲ ಎಂದು ಅಭಿಷೇಕ್ ಹೇಳಿದರು.