ಪ್ರಿಯಕರನ ಮನೆಯಲ್ಲಿ ಯುವತಿಯ ಶವ ಪತ್ತೆ, ಪ್ರಿಯಕರನ ಮನೆಗೆ ಬೆಂಕಿ! | ಜನತಾ ನ್ಯೂಸ್
ಬಾಗಲಕೋಟೆ : ಪ್ರಿಯಕರನ ಮನೆಯಲ್ಲಿಯೇ ನೇಣುಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿದ್ದು, ಆಕ್ರೋಶಗೊಂಡ ಯುವತಿ ಪೋಷಕರು ಪ್ರಿಯಕರನ ಮನೆಗೆ ಬೆಂಕಿಹಚ್ಚಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಕೆಲೂರ ಗ್ರಾಮದಲ್ಲಿ ನಡೆದಿದೆ.
ಯುವತಿ ಬಸಮ್ಮ ಮಾದರ ಮತ್ತು ರಂಜಿತ್ ಕೊಂಚನವರ ಪರಸ್ಪರ ಪ್ರೀತಿಸುತ್ತಿದ್ದರು, ಆದರೆ ಅಂತರ್ಜಾತಿಯಾಗಿದ್ದರಿಂದ ವಿವಾಹವಾಗಿರಲಿಲ್ಲ.. ಆದರೂ ಯುವತಿಯ ಕುಟುಂಬಸ್ಥರು ಬೇರೊಬ್ಬನೊಂದಿಗೆ ಮದುವೆ ಮಾಡಿದ್ದರು. ಗಂಡನಿಗೆ ಬಸಮ್ಮಳ ಬೇರೊಬ್ಬನನ್ನು ಪ್ರೀತಿಸುತ್ತಿದ್ದ ವಿಚಾರ ಗೊತ್ತಾಗಿ ಜಗಳ ನಡೆದು ಇಬ್ಬರ ವೈವಾಹಿಕ ಜೀವನ ಮುರಿದುಬಿದ್ದಿತ್ತು. ಕೊನೆಗೆ ಪ್ರಿಯಕರ ರಂಜಿತ್ ಜತೆ ಬಸಮ್ಮಗೆ ಮದುವೆ ಮಾಡಲಾಗಿತ್ತು.
ಆದರೆ ಇದೀಗ ರಂಜಿತ್ ಮನೆಯಲ್ಲಿ ಯುವತಿ ಬಸಮ್ಮಳ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬಸಮ್ಮಳ ಕುಟುಂಬಸ್ಥರು ಕೊಲೆ ಎಂದು ಆರೋಪಿಸಿದ್ದಾರೆ. ಬಸಮ್ಮ ಶವವಾಗಿ ಪತ್ತೆಯಾದ ಬೆನ್ನಲ್ಲೆ ಪ್ರಿಯಕರ ರಂಜಿತ್ ಕುಟುಂಬಸ್ಥರು ನಾಪತ್ತೆಯಾಗಿದ್ದು, ಆಕ್ರೋಶಗೊಂಡ ಬಸಮ್ಮನ ಕುಟುಂಬಸ್ಥರು ರಂಜಿತ್ ಮನೆಗೆ ಬೆಂಕಿ ಹಚ್ಚಿದ್ದಾರೆ.
ಸ್ಥಳಕ್ಕೆ ಬಂದ ಹುನಗುಂದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.