ಎಚ್.ಡಿ.ದೇವೇಗೌಡ ನನ್ನ ಜೊತೆ ಫೋನ್ನಲ್ಲಿ ಮಾತನಾಡಿ, ಪಕ್ಷ ಬಿಡಬೇಡಿ ಎಂದಿದ್ದಾರೆ: ಮಾಜಿ ಸಚಿವ ಜಿ.ಟಿ.ದೇವೇಗೌಡ | ಜನತಾ ನ್ಯೂಸ್
ಮೈಸೂರು : ಹಲವು ದಿನಗಳ ಬಳಿಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ನನ್ನ ಜತೆ ಫೋನ್ನಲ್ಲಿ ಚರ್ಚೆ ಮಾಡಿದ್ದಾರೆ. 2023ಕ್ಕೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಪಕ್ಷ ಬಿಡಬೇಡಿ ಎಂದು ದೂರವಾಣಿಯ ಮೂಲಕ ಅವರು ನನಗೆ ತಿಳಿಸಿದ್ದಾರೆ ಎಂದು ಮೈಸೂರಿನಲ್ಲಿ ಮಾಜಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಮತ್ತು ನನ್ನ ಮಗ ಪಕ್ಷೇತರರಾಗಿ ಸ್ಪರ್ಧಿಸಿದರೂ ಗೆಲ್ಲುವ ವಿಶ್ವಾಸವಿದೆ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.
ನಾನು ಜಿಲ್ಲಾಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗಳಿಗೆ ಪಕ್ಷದಿಂದ ಬೆಂಬಲಿಗರನ್ನು ನಿಲ್ಲಿಸಬೇಕೋ, ಅಥವಾ ಪಕ್ಷೇತರವಾಗಿ ನಿಲ್ಲಿಸಬೇಕೋ ಎಂಬುದನ್ನು ಕಾರ್ಯಕರ್ತರ ಅಭಿಪ್ರಾಯ ಪಡೆದು ತೀರ್ಮಾನ ಮಾಡುತ್ತೇನೆ. ಈಬಗ್ಗೆ ಮುಂದಿನ ವಾರದಿಂದ ಕ್ಷೇತ್ರ ಪ್ರವಾಸ ಕೈಗೊಳ್ಳುವೆ.
2008ರಲ್ಲಿ ಹುಣಸೂರಿನಲ್ಲಿ ಸೋಲಿನ ಅನುಭವ ಇದೆ. ಮತದಾರರ ಅಭಿಪ್ರಾಯ ಕೇಳದೆ 2008ರಲ್ಲಿ ಸೋತಿದ್ದೇನೆ. ಮತದಾರರನ್ನು ಬಿಟ್ಟು ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ಮತದಾರರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಹೆಜ್ಜೆ ಇಡುವೆ ಎಂದು ಅವರು ಇದೇ ಸಂದರ್ಭದಲ್ಲಿ ತಮ್ಮ ಮುಂದಿನ ನಡೆಗಳ ಬಗ್ಗೆ ಸುಳಿವು ನೀಡಿದರು.