ಸಂಸದೆ ಸುಮಲತಾ ಹೇಳಿಕೆಗೆ ಕಂದಾಯ ಸಚಿವ ಆರ್.ಅಶೋಕ್ ತೀವ್ರ ಅಸಮಾಧಾನ | ಜನತಾ ನ್ಯೂಸ್
ಮೈಸೂರು : ಕೆಆರ್ಎಸ್ ಡ್ಯಾಂ ಬಿರುಕಿನ ವಿಚಾರದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ನೀಡುತ್ತಿರುವ ಹೇಳಿಕೆಗಳ ಕುರಿತಂತೆ ಕಂದಾಯ ಸಚಿವ ಆರ್.ಅಶೋಕ್ ತೀವ್ರ ಅಸಮಾಧಾನ ಹೊರ ಹಾಕಿದ್ದು, ನಮಗೆ ಯಾವ ವ್ಯಕ್ತಿಯೂ ಮುಖ್ಯ ಅಲ್ಲ, ಕೆಆರ್ಎಸ್ ಡ್ಯಾಂ ಮುಖ್ಯ ಎಂದು ಹೇಳಿದ್ದಾರೆ.
ಅವರು ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಸರ್ಕಾರದ ಅಧಿಕಾರಿಗಳು, ಗಣಿ ಸಚಿವ ನಿರಾಣಿಯವರು, ನಾನು ಮತ್ತು ಜಿಲ್ಲಾಧಿಕಾರಿಗಳು ಕೂಡ ಕೆಆರ್ ಎಸ್ ಗೆ ಏನೂ ಅಪಾಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನೀರಾವರಿ ಇಲಾಖೆಯ ಎಂಜಿನಿಯರ್ ಗಳು ಸಹ ಪತ್ರಿಕಾಗೋಷ್ಠಿ ನಡೆಸಿ ಹೇಳಿದ್ದಾರೆ.
ಇಷ್ಟೆಲ್ಲ ಹೇಳಿದ ಮೇಲೂ ಕೆಆರ್ ಎಸ್ ಡ್ಯಾಂನ ಬಿರುಕಿನ ಬಗ್ಗೆ ಮಾತನಾಡಿದರೆ ಅಣೆಕಟ್ಟು ತೀರದ ಕೆಳಭಾಗಗಳಲ್ಲಿ ವಾಸಿಸುವ ಜನರಿಗೆ ಆತಂಕವಾಗುತ್ತದೆ, ಎಲ್ಲಿ ತಮ್ಮ ಮನೆಗಳಿಗೆ, ಜಮೀನುಗಳಿಗೆ ತೊಂದರೆಯಾಗುತ್ತದೋ ಎಂಬ ಭಯವಿರುತ್ತದೆ ಎಂದರು.
ಸರ್ಕಾರ ಈ ವಿಷಯದಲ್ಲಿ ಈಗಾಗಲೇ ಸ್ಪಷ್ಟನೆ ನೀಡಿದ್ದು ಮೌನವಾಗಿ ಕುಳಿತಿಲ್ಲ, ಹಿಂದೆ ಅದರ ರಿಪೇರಿ ಕೆಲಸಗಳು ನಡೆದಿವೆ. ನೀರಾವರಿ ಇಲಾಖೆಯ ತಜ್ಞರು ವರದಿ ಕೊಟ್ಟಿದ್ದಾರೆ. ಯಾವುದೇ ಬಿರುಕು ಇಲ್ಲ, ಇದನ್ನು ರಾಜಕೀಯ ಗಾಳವನ್ನಾಗಿ ಬಳಸಿಕೊಂಡು ಜನರ ಮನಸ್ಸಿಗೆ ನೋವುಂಟುಮಾಡಬೇಡಿ ಎಂದು ಸುಮಲತಾ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಇದೇ ವೇಳೆ ನಮಗೆ ಯಾವ ವ್ಯಕ್ತಿಯೂ ಮುಖ್ಯ ಅಲ್ಲ, ಕೆಆರ್ಎಸ್ ಡ್ಯಾಂ ಮುಖ್ಯ ಎಂದು ಸ್ಪಷ್ಟಪಡಿಸಿರುವ ಸಚಿವರು, ನಾನೂ ಇಂದು ಮಂಡ್ಯಕ್ಕೆ ಹೋಗುತ್ತಿದ್ದೇನೆ, ಜಿಲ್ಲಾಧಿಕಾರಿ ಭೇಟಿ ಮಾಡುತ್ತೇನೆ. ಕೆಆರ್ಎಸ್ ಡ್ಯಾಂ, ಬೇಬಿ ಬೆಟ್ಟದ ಸುತ್ತ ಏನಾಗಿದೆ ಅಂತ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಡುತ್ತೇನೆ ಎಂದು ಹೇಳಿದರು.