ನನಗೆ ಅಧಿಕಾರದ ಆಸೆ ಇಲ್ಲ, ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನನ್ನ ಗುರಿ: ಹೆಚ್. ಡಿ.ಕುಮಾರಸ್ವಾಮಿ | ಜನತಾ ನ್ಯೂಸ್
ಬೆಂಗಳೂರು : ನನಗೆ ಅಧಿಕಾರದ ಆಸೆ ಇಲ್ಲ. ಆದರೆ, ಸ್ವತಂತ್ರವಾಗಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನನ್ನ ಗುರಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಪಕ್ಷದ ಕಚೇರಿ ಜೆ.ಪಿ ಭವನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾವಾರು ಸಭೆಗೂ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷ ಜನರಿಗಾಗಿಯೇ ಇರುವ ಪಕ್ಷ. 2023 ರ ವಿಧಾನಸಭೆ ಚುನಾವಣೆಗೆ ಕನಿಷ್ಠ 150 ಜನ ಅಭ್ಯರ್ಥಿಗಳನ್ನು ಜನವರಿ 15ರ ಒಳಗೆ ಆಯ್ಕೆ ಮಾಡುತ್ತೇವೆ ಎಂದು ತಿಳಿಸಿದರು.
ಮುಂದಿನ ಚುನಾವಣೆಗೆ ಪಕ್ಷ ಸಂಘಟನೆ ಮಾಡುವುದು ನಮ್ಮ ಗುರಿ. ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದ್ದೇನೆ. ಕರೊನಾ ಸಂಪೂರ್ಣವಾಗಿ ಕಡಿಮೆಯಾಗಬೇಕಿದೆ. ಹಾಗಾಗಿ ಆಷಾಢ ಮಾಸದ ನಂತರ ಪ್ರವಾಸ ಮಾಡುತ್ತೇನೆ ಎಂದರು. ಪ್ರವಾಸದ ವೇಳೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ತಿಳಿಸಲಿದ್ದೇವೆ.
ಒಂದು ವಾರಗಳ ಕಾಲ ಪಕ್ಷದ ಜಿಲ್ಲಾವಾರು ಸಂಘಟನೆ ಸಭೆ ಕರೆದಿದ್ದೇನೆ. ಮುಂದಿನ ಐದು ದಿನಗಳ ಕಾಲ ಸಂಘಟನೆ ಬಗ್ಗೆ ಚರ್ಚೆ ನಡೆಯಲಿದೆ ಎಂದು ತಿಳಿಸಿದರು. ತಾಲ್ಲೂಕು, ಜಿಲ್ಲಾ ಪಂಚಾಯಿತಿ, ಮುಂದಿನ ವಿಧಾನಸಭೆ ಚುನಾವಣೆ ಬಗ್ಗೆ ಚರ್ಚಿಸಲಿದ್ದೇವೆ ಎಂದು ಹೇಳಿದರು. ಕಾಂಗ್ರೆಸ್ ಪರಿಸ್ಥಿತಿ, ಬಿಜೆಪಿ ಅಧಿಕಾರ ಎಲ್ಲವನ್ನೂ ಜನತೆ ನೋಡಿದ್ದಾರೆ. ಜನತಾದಳ ಅಧಿಕಾರದಲ್ಲಿದ್ದಾಗ ಮಾತ್ರ ಅಭಿವೃದ್ಧಿ ಆಗಿದೆ ಎಂದರು.
"ಜನರ ಜೊತೆ ಮಾತುಕತೆ ನಡೆಸಲಿದ್ದೇನೆ. ಪ್ರಾದೇಶಿಕ ಪಕ್ಷದ ಅಗತ್ಯ. ಶಿಕ್ಷಣ, ರಾಜಕೀಯ, ರೈತರ ವಿಚಾರದಲ್ಲಿ ಪಕ್ಷದ ನಿಲುವು ಏನು ಎಂಬುದನ್ನು ಜನರಿಗೆ ತಿಳಿಸಿಕೊಡುತ್ತೇನೆ" ಎಂದು ಕುಮಾರಸ್ವಾಮಿ ವಿವರಣೆ ನೀಡಿದರು.
"ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯವೈಖರಿಯನ್ನು ಜನರು ನೋಡುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳು ಅಧಿಕಾರಕ್ಕೆ ಬಂದರೆ ಕರ್ನಾಟಕವನ್ನು ಅವರು ಲೂಟಿ ಮಾಡಲು ಬಳಕೆ ಮಾಡಿಕೊಳ್ಳುತ್ತಾರೆ" ಎಂದು ಕುಮಾರಸ್ವಾಮಿ ದೂರಿದರು.
ಜಲಮಿಷನ್ ಯೋಜನೆ ಬಗ್ಗೆ ತಿಳಿಸಲು ಕೇಂದ್ರ ಸಚಿವರು ರಾಜ್ಯಕ್ಕೆ ಬಂದಿದ್ದರು. ಆದರೆ, ಕೇಂದ್ರ ಸಚಿವರ ಸಭೆಗೆ ಈಶ್ವರಪ್ಪ ಹೋಗುವುದೇ ಇಲ್ಲ. 99 ಲಕ್ಷ ಕುಟುಂಬಕ್ಕೆ ನೀರು ಪೂರೈಸುವ ಬಗ್ಗೆ ಹೇಳಿದ್ದರು. ಅವರು ನೀರಾವರಿ ವಿಚಾರವಾಗಿ ಚರ್ಚೆ ಮಾಡಲು ಬಂದಿಲ್ಲ. ಮಹದಾಯಿ, ಮೇಕೇದಾಟು ವಿಚಾರ ಸಮಗ್ರವಾಗಿ ಚರ್ಚೆ ನಡೆಸಿಲ್ಲಅವರು ಟೋಪಿ ಹಾಕಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಪರಿಸ್ಥಿತಿ, ಬಿಜೆಪಿ ಅಧಿಕಾರ ಎಲ್ಲವನ್ನೂ ಜನತೆ ನೋಡಿದ್ದಾರೆ. ಈ ಹಿಂದೆ ಜನತಾದಳ ಅಧಿಕಾರದಲ್ಲಿದ್ದಾಗ ಮಾತ್ರ ಅಭಿವೃದ್ಧಿ ಆಗಿರುವುದು. ನಾನು ಕೃಷಿಯಲ್ಲಿ ತೊಡಗಿಕೊಂಡಿದ್ದರೂ, ಪಕ್ಷ ಸಂಘಟನೆಯನ್ನು ಮಾಡುತ್ತಿದ್ದೇನೆ. ಹೊಸದೊಂದು ಬದಲಾವಣೆಗೆ ಪ್ರಾದೇಶಿಕ ಪಕ್ಷದ ಪಾತ್ರದ ಬಗ್ಗೆ ಜನರಿಗೆ ತಿಳಿಸುತ್ತೇನೆ ಎಂದರು.