ಸಿಕ್ಕ ಸಿಕ್ಕ ಕಾರುಗಳ ಗಾಜು ಪುಡಿ ಪುಡಿ ಮಾಡಿದ ಪಾಗಲ್ ಪ್ರೇಮಿ! | ಜನತಾ ನ್ಯೂಸ್
ಬೆಂಗಳೂರು : ಪ್ರೀತಿಸಲು ಯುವತಿ ನಿರಾಕರಿಸಿದ್ದರಿಂದ ಕೋಪಗೊಂಡು ರಸ್ತೆ ಬದಿ ನಿಲ್ಲಿಸಿದ್ದ 8 ಕಾರುಗಳ ಗಾಜು ಒಡೆದು ಪರಾರಿಯಾಗಿದ್ದ ಯುವಕನನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಮಹಾಲಕ್ಷ್ಮಿಲೇಔಟ್ ನಿವಾಸಿ ಸತೀಶ್ (26) ಎಂಬಾತ ಕುಡಿದ ಮತ್ತಿನಲ್ಲಿ ಕಂಡ ಕಂಡ ಕಾರ್ಗಳ ಗಾಜು ಹೊಡೆದು ಪುಂಡಾಟ ಮೆರೆದಿದ್ದಾನೆ. ಕುಡಿದ ಮತ್ತಿನಲ್ಲಿ ಮಹಾಲಕ್ಷ್ಮೀ ಲೇಔಟ್ನಲ್ಲಿ ಮತ್ತು ಬಸವೇಶ್ವರನಗರದಲ್ಲಿ 5 ಕಾರುಗಳನ್ನು ಜಖಂಗೊಳಿಸಿದ್ದಾನೆ. ಕುಡಿದ ಮತ್ತಿನಲ್ಲಿ ಬೈಕ್ನಲ್ಲಿ ಬಂದು ಕೃತ್ಯ ಎಸಗಿದ್ದಾನೆ.
ಕಾರ್ಪೆಂಟರ್ ವೃತ್ತಿ ಮಾಡುತ್ತಿರುವ ಸತೀಶ್ ತಮಿಳುನಾಡಿನ ವೇಲೂರಿನ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ, ಆಕೆ ಈತನನ್ನು ಪ್ರೀತಿಸಲು ನಿರಾಕರಿಸಿದ್ದಳು. ಇದರಿಂದ ಬೇಸತ್ತು ಈತ ಮದ್ಯದ ಅಮಲಿನಲ್ಲಿ ಇಂದು ಬೆಳಗಿನ ಜಾವ 1.30ರಿಂದ 1.45ರ ಮಧ್ಯೆ ರಸ್ತೆ ಬದಿ ನಿಲಿಸಿದ್ದ ಕಾರುಗಳ ಗಾಜುಗಳನ್ನು ದೊಣ್ಣೆಯಿಂದ ಒಡೆದು ಹಾನಿ ಮಾಡಿ ಪರಾರಿಯಾಗಿದ್ದನು.
ಬಸವೇಶ್ವರನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.