ನಾನು ಬಿಜೆಪಿ ಪಕ್ಷದ ಮಾಲೀಕನಲ್ಲ, ನಾನು ಪಕ್ಷದ ಕಾರ್ಯಕರ್ತ: ಸಿ.ಟಿ.ರವಿ | ಜನತಾ ನ್ಯೂಸ್
ಚಿಕ್ಕಮಗಳೂರು : ನಾನು ಬಿಜೆಪಿ ಪಕ್ಷದ ಮಾಲೀಕನಲ್ಲ, ನಾನು ಪಕ್ಷದ ಕಾರ್ಯಕರ್ತ. ನಾನು ಯಾವತ್ತೂ ಮಾಲೀಕನ ರೀತಿ ವರ್ತನೆ ಮಾಡಿಲ್ಲ, ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ. ರವಿ ಹೇಳಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಶಾಸಕ ಸಿ.ಟಿ. ರವಿ ಮೂಗಿನ ನೇರಕ್ಕೆ ಎಲ್ಲವೂ ನೆಡೆಯುತ್ತಿದೆ ಎಂದು ನೇರವಾಗಿ ಆರೋಪ ಮಾಡಿದ್ದ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಹೇಳಿಕೆಗೆ ಚಿಕ್ಕಮಗಳೂರಿನ ಕಲ್ಯಾಣ ನಗರದಲ್ಲಿ ಓಪನ್ ಜಿಮ್ ಉದ್ಘಾಟನಾ ಸಂದರ್ಭದಲ್ಲಿ ಸಿ.ಟಿ. ರವಿ ಮಾತನಾಡಿದರು.
ಕಾಂಗ್ರೆಸ್ ನವರಿಗೆ ದೂರುವುದಕ್ಕೆ ಮೋದಿ ಬೇಕು. ಒಳ್ಳೆಯದಕ್ಕಾದರೆ ಮೋದಿ ಬೇಡ. ಗೂಸುಂಬೆ ರಾಜಕಾರಣದಿಂದ ಕಾಂಗ್ರೆಸ್ ಗೆ ಈ ಸ್ಥಿತಿ ಬಂದಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಡಿಕಾರಿದರು.
ಈಗ ಲಸಿಕೆ ರಾಜಕಾರಣ ಮಾಡುವುದು ಬೇಡ. ಈ ಹಿಂದೆ ಕಾಂಗ್ರೆಸ್ ನವರು ಲಸಿಕೆ ತೆಗೆದುಕೊಂಡರೆ ಮಕ್ಕಳಾಗಲ್ಲ ಎಂದಿದ್ದರು. ಆ ಸಮಯದಲ್ಲಿ ಸಿದ್ದರಾಮಯ್ಯ ಏನು ಹೇಳಿದ್ದರೆಂದು ಹೇಳಬೇಕಾ, ಡಿ ಕೆ ಶಿವಕುಮಾರ್ ಟ್ವೀಟ್ ತೋರಿಸಬೇಕಾ? ಜಾರ್ಖಂಡ್ ಆರೋಗ್ಯ ಸಚಿವರ ಹೇಳಿಕೆ ನೆನಪು ಮಾಡಬೇಕಾ ಎಂದು ಹೇಳಿದರು.
ಅವತ್ತು ಲಸಿಕೆ ವಿರುದ್ಧ ರಾಜಕಾರಣ ಮಾಡಿದರು. ಈಗ ಕಾಂಗ್ರೆಸ್ ನವರ ಎಡಬಿಡಂಗಿತನ ಹೇಗೆ ಎಂದರೆ ಪ್ರಧಾನಿ ಎಲ್ಲರಿಗೂ ಉಚಿತ ವಾಕ್ಸಿನ್ ಘೋಷಣೆ ಮಾಡಿದಾಗ ಕಾಂಗ್ರೆಸ್ ನವರು ಥ್ಯಾಂಕ್ಯೂ ಸುಪ್ರೀಂ ಕೋರ್ಟ್ ಎಂದರು. ಉಚಿತ ಲಸಿಕೆಯ ಕ್ರೆಡಿಟ್ ಮೋದಿ, ಬಿಜೆಪಿಗೆ ಹೋಗಬಹುದು ಅಂತ ಥ್ಯಾಂಕ್ಯೂ ಸುಪ್ರೀಂ ಕೋರ್ಟ್ ಅಂತಾ ರಾಜಕಾರಣ ಮಾಡಿದರು ಎಂದು ಸಿ.ಟಿ.ರವಿ ವಾಗ್ದಾಳಿ ನಡೆಸಿದರು.
ನಾನು ಬಿಜೆಪಿ ಪಕ್ಷದ ಮಾಲೀಕನಲ್ಲ. ಎಂ.ಪಿ ಕುಮಾರಸ್ವಾಮಿ ನಮ್ಮ ಮಾಲೀಕರು. ನಾನು ಸದಾ ಕಾಲ ಪಕ್ಷದ ನಿಷ್ಠೆಯಿಂದ ಕೆಲಸ ಮಾಡುವವನು. ಹಾಗೇ ಏನಾದರೂ ಮಾಲೀಕತ್ವ ಪ್ರಶ್ನೆ ಬಂದರೆ ಕುಮಾರಸ್ವಾಮಿಯೇ ಮಾಲೀಕರು, ನಾನು ಯಾವತ್ತೂ ಸಹ ಮಾಲೀಕನ ರೀತಿ ವರ್ತನೆ ಮಾಡಿಲ್ಲ ಎಂದರು.
ವರ್ಗಾವಣೆ ಆದೇಶವನ್ನು ಮಾಡುವ ಅಧಿಕಾರ ನನಗಿಲ್ಲ. ವರ್ಗಾವಣೆ ಶಿಫಾರಸ್ಸು ಯಾರು ಬಂದರು ಮಾಡುತ್ತೇನೆ. ಒಳ್ಳೆಯ ಅಧಿಕಾರಿಗಳು ನಮ್ಮ ಜಿಲ್ಲೆಗೆ ಬರಬೇಕು ಎನ್ನುವುದಷ್ಟೇ ಉದ್ದೇಶ. ಎಂ.ಪಿ ಕುಮಾರಸ್ವಾಮಿಯವರ ಜೊತೆ ನಾನು ಮಾತನಾಡುತ್ತೇನೆ ಎಂದರು.