ಗಂಡನನ್ನು ಕೊಲ್ಲಲು ಸುಪಾರಿ ಕೊಟ್ಟ ಖತರ್ನಾಕ್ ಹೆಂಡತಿ! | ಜನತಾ ನ್ಯೂಸ್
ಬೆಂಗಳೂರು : ಪ್ರಿಯಕರನ ಜೊತೆ ಸೇರಿ ಪತ್ನಿಯೇ ಪತಿಗೆ ಮೂಹೂರ್ತವಿಟ್ಟು ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಹುಸ್ಕೂರಿನಲ್ಲಿ ನಡೆದಿದೆ.
ಮಾದನಾಯಕನಹಳ್ಳಿ ಸಮೀಪ ಗಿರೀಶ್ ಎಂಬಾತ ಹೋಗುತ್ತಿದ್ದ. ಮಂಕಿ ಕ್ಯಾಪ್ ಧರಿಸಿದ್ದ ನಾಲ್ವರು ಕಿರಾತಕರು ಇನ್ನೇನು ಕೊಚ್ಚಿ ಕೊಲೆ ಮಾಡಲು ಮಚ್ಚು ಬೀಸುವ ಸಮಯದಲ್ಲೇ ಅದೃಷ್ಟವಶಾತ್ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. ಈ ವೇಳೆ ಸಿಕ್ಕಿ ಬಿದ್ದ ಖತರ್ನಾಕ್ ಹೆಂಡತಿ ಗಂಡನ ಕೊಲೆಗೆ ಪ್ರಿಯಕರನ ಜೊತೆ ಸೇರಿ ಸ್ನೇಹಿತರಿಗೆ ಸುಪಾರಿ ನೀಡಿರುವ ಸಂಗತಿ ಬೆಳಕಿಗೆ ಬಂದಿದ್ದು ಪ್ರಿಯಕರ ಕಲ್ಪ್ ಕುಮಾರ್ ಜೈನ್ ಸೇರಿ 6 ಜನ ಆರೋಪಿಗಳನ್ನು ಮಾದನಾಯಕನ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಗಿರೀಶ್ ಮತ್ತು ರೂಪ ಎಂಬುವವರು ಆರು ವರ್ಷದ ಹಿಂದೆ ಮದುವೆಯಾಗಿದ್ರು. ರೂಪ ಕೆಲಸಕ್ಕೆ ಹೋಗುತ್ತಿದ್ದಳು, ಈ ನಡುವೆ ಕಲ್ಪ್ ಕುಮಾರ್ ಜೈನ್ ಎಂಬಾತ ರೂಪಳಿಗೆ ಪರಿಚಯವಾಗಿದ್ದಾನೆ. ಕ್ರಮೇಣ ಪರಿಚಯ ಮುಂದುವರೆದು ಅವರಿಬ್ಬರ ನಡುವೆ ಪ್ರೇಮಾಂಕುರವಾಗಿದೆ. ಕ್ರಮೇಣ ರೂಪಾಳ ನಡುವಳಿಕೆಯಲ್ಲಿ ವ್ಯತ್ಯಾಸ ಕಂಡ ಗಂಡ ಇನ್ನು ಕೆಲಸಕ್ಕೆ ಹೋಗುವುದು ಬೇಡ ಎಂದಿದ್ದಾನಂತೆ.
ಈ ವಿಷಯವನ್ನು ರೂಪಾ ತನ್ನ ಪ್ರಿಯಕರನಿಗೆ ತಿಳಿಸಿದ್ದಾಳೆ. ತಮ್ಮ ಅಕ್ರಮ ಸಂಬಂಧಕ್ಕೆ ಗಂಡ ಅಡ್ಡಿಯಾಗುತ್ತಿದ್ದಾನೆಂದು ಪತ್ನಿ ಪ್ರಿಯಕರನ ಜೊತೆ ಸೇರಿ ಪತಿಯನ್ನು ಮುಗಿಸಲು ಸ್ಕೇಚ್ ಹಾಕಿದ್ದಾಳೆ ಎನ್ನಲಾಗಿದೆ.