ಪಶ್ಚಿಮ ಬಂಗಾಳ ಹಿಂಸಾಚಾರದ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ವರದಿ ಕುರಿತು ಹೆಚ್ಚಿದ ಚರ್ಚೆ | ಜನತಾ ನ್ಯೂಸ್
ನವದೆಹಲಿ : ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ(ಎನ್ಎಚ್ಆರ್ಸಿ) ಸಮಿತಿಯು ಪಶ್ಚಿಮ ಬಂಗಾಳದಲ್ಲಿ ಮತದಾನದ ನಂತರದ ಹಿಂಸಾಚಾರದ ಕುರಿತು ನೀಡಿದ ವರದಿಯ ಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಪಶ್ಚಿಮ ಬಂಗಾಳದಲ್ಲಿ ಮತದಾನದ ನಂತರದ ಹಿಂಸಾಚಾರದ ಆರೋಪಗಳನ್ನು ತನಿಖೆ ಮಾಡುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ(ಎನ್ಎಚ್ಆರ್ಸಿ) ಸಮಿತಿಯು "ರಾಜ್ಯದಲ್ಲಿ ಚುನಾವಣೆ ಬಳಿಕ ನಡೆದ ಕೊಲೆ ಮತ್ತು ಅತ್ಯಾಚಾರದಂತಹ ಭೀಕರ ಅಪರಾಧಗಳ" ಬಗ್ಗೆ ಸಿಬಿಐ ತನಿಖೆಯನ್ನು ಶಿಫಾರಸು ಮಾಡಿದೆ, ರಾಜ್ಯದ ಪರಿಸ್ಥಿತಿ ಒಂದು “ಕಾನೂನಿನ ಆಡಳಿತದ ಬದಲಿಗೆ, ಆಡಳಿತಗಾರನ ಕಾನೂನು" ಎಂಬಂತೆ ಭಾಸವಾಗಿದೆ, ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಹೈಕೋರ್ಟ್ನ ಐದು ನ್ಯಾಯಾಧೀಶರ ಪೀಠದ ನಿರ್ದೇಶನದ ಮೇರೆಗೆ ರಚಿಸಲಾದ ಸಮಿತಿಯು ಈ ಪ್ರಕರಣಗಳನ್ನು ರಾಜ್ಯದ ಹೊರಗೆ ವಿಚಾರಣೆ ನಡೆಸಬೇಕು, ಎಂದು ಹೇಳಿದೆ. "ಪಶ್ಚಿಮ ಬಂಗಾಳ ರಾಜ್ಯದಲ್ಲಿ ಹಿಂಸಾತ್ಮಕ ಘಟನೆಗಳ ಪ್ರಾದೇಶಿಕ-ತಾತ್ಕಾಲಿಕ ವಿಸ್ತರಣೆಯು ಸಂತ್ರಸ್ತರ ದುಃಸ್ಥಿತಿಯ ಬಗ್ಗೆ ರಾಜ್ಯದ ಟಿಎಂಸಿ ಸರ್ಕಾರದ ಭೀಕರ ನಿರಾಸಕ್ತಿಯನ್ನು ಪ್ರತಿಬಿಂಬಿಸುತ್ತದೆ" ಎಂದು ಅದು ಹೇಳಿದೆ.