ರಾಜ್ಯದಲ್ಲಿ ಭಾರೀ ಮಳೆ: ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರವಾಹದಿಂದ 81 ಗ್ರಾಮಗಳಿಗೆ ಹಾನಿ | ಜನತಾ ನ್ಯೂಸ್
ಉತ್ತರಕನ್ನಡ : ಧಾರಾಕಾರವಾಗಿ ಸುರಿದ ಮಳೆಯಿಂದ ಉತ್ತರ ಕನ್ನಡ ಜಿಲ್ಲೆಯ ನದಿಗಳು ಉಕ್ಕಿ ಹರಿದು ಸೃಷ್ಟಿಸಿದ ಪ್ರವಾಹದಿಂದ ಈ ಬಾರಿ ದೊಡ್ಡ ಮಟ್ಟದಲ್ಲಿಯೇ ಹಾನಿ ಸಂಭವಿಸಿದೆ. ಪ್ರವಾಹದಿಂದ 81 ಗ್ರಾಮಗಳಿಗೆ ಹಾನಿಯಾಗಿದೆ. 12,600 ಜನರು ನೆರೆಯಿಂದ ಬಾಧಿತರಾಗಿದ್ದಾರೆ ಎಂದು ಕಾರವಾರದಲ್ಲಿ ಉತ್ತರಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಮಾಹಿತಿ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕದ್ರಾ ಜಲಾಶಯ ವ್ಯಾಪ್ತಿಯಲ್ಲಿ ಸಾಲುಸಾಲು ಮನೆಗಳು ಕುಸಿದಿವೆ. ಕದ್ರಾ ಜಲಾಶಯ ವ್ಯಾಪ್ತಿಯ ಗಾಂಧಿನಗರದಲ್ಲಿ 15ಕ್ಕೂ ಹೆಚ್ಚು ಮನೆಗಳು ನೆಲಸಮ ಆಗಿವೆ. ಜಲಾಶಯದಿಂದ 2 ಲಕ್ಷ ಕ್ಯೂಸೆಕ್ಸ್ ನೀರು ಬಿಟ್ಟ ಪರಿಣಾಮ ಮನೆಗಳು ಕುಸಿದಿವೆ.
ಕಳೆದ ಮೂರು ದಿನಗಳಿಂದ ಜಿಲ್ಲೆಯ ಘಟ್ಟದ ಮೇಲೆ ಹಾಗೂ ಕರಾವಳಿ ತಾಲೂಕಿನಲ್ಲಿ ಸುರಿದ ಮಳೆಯಿಂದ ಪ್ರವಾಹ ಸೃಷ್ಟಿಯಾಗಿ ಸಾಕಷ್ಟು ಅನಾಹುತಕ್ಕೆ ಕಾರಣವಾಗಿದೆ. ಅದರಲ್ಲೂ ಕಾಳಿ, ಗಂಗಾವಳಿ, ಅಘನಾಶಿನಿ ನದಿ ರೌದ್ರಾವತಾರ ತಾಳಿದ್ದರಿಂದ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದ್ದು, ಅಂಕೋಲಾ, ಯಲ್ಲಾಪುರ, ಕಾರವಾರ, ಶಿರಸಿ, ಸಿದ್ದಾಪುರ ತಾಲೂಕುಗಳು ಅಕ್ಷರಶಃ ನಲುಗಿವೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರವಾಹದಿಂದ 81 ಗ್ರಾಮಗಳಿಗೆ ಹಾನಿಯಾಗಿದೆ. 12,600 ಜನರು ನೆರೆಯಿಂದ ಬಾಧಿತರಾಗಿದ್ದಾರೆ ಎಂದು ಕಾರವಾರದಲ್ಲಿ ಉತ್ತರಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಮಾಹಿತಿ ನೀಡಿದ್ದಾರೆ. ಯಲ್ಲಾಪುರ, ಶಿರಸಿ, ಸಿದ್ಧಾಪುರ ಹಾಗೂ ಹೊನ್ನಾವರದಲ್ಲಿ ತಲಾ ಓರ್ವರು ಸಾವನ್ನಪ್ಪಿದ್ದಾರೆ.
ಅಂಕೋಲಾದಲ್ಲಿ 2, ಯಲ್ಲಾಪುರದಲ್ಲಿ ಓರ್ವ ಸೇರಿ 3 ಮಂದಿ ಕಣ್ಮರೆಯಾಗಿದ್ದಾರೆ. 50 ಮನೆಗಳು ಪೂರ್ಣ, 146 ಮನೆಗಳಿಗೆ ಭಾಗಶಃ ಹಾನಿಯಾಗಿವೆ. ಜಿಲ್ಲೆಯಾದ್ಯಂತ 94 ಕಾಳಜಿ ಕೇಂದ್ರಗಳಲ್ಲಿ 9,655 ಮಂದಿ ನಿರಾಶ್ರಿತರಿಗೆ ಆಶ್ರಯ ನೀಡಲಾಗಿದೆ. ಪ್ರವಾಹದಿಂದಾಗಿ 28 ಸೇತುವೆ ಹಾಗೂ ಕಾಲುಸಂಕಗಳಿಗೆ ಹಾನಿ ಆಗಿದೆ. ನೆರೆಯಿಂದಾಗಿ 148.2 ಕಿಲೋ ಮೀಟರ್ ರಸ್ತೆಗಳಿಗೆ ಹಾನಿ ಉಂಟಾಗಿದೆ.
15214 ಜನರನ್ನು ಕಾಳಜಿ ಕೇಂದ್ರದಲ್ಲಿ ಇರಿಸಲಾಗಿತ್ತು. ಸದ್ಯ 132 ಕಾಳಜಿ ಕೇಂದ್ರದಲ್ಲಿ 15077 ಜನರು ತಂಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಪ್ರವಾಹಕ್ಕೆ ಸಿಲುಕಿ 43 ಜಾನವಾರು ಸಾವನ್ನಪ್ಪಿದ್ದು, 912.88 ಹೆಕ್ಟೇರ್ ಕೃಷಿ ಭೂಮಿ ಹಾಗೂ 61 ಹೆಕ್ಟೇರ್ ತೋಟಗಾರಿಕಾ ಭೂಮಿಗೆ ಹಾನಿ ಸಂಭವಿಸಿದೆ.