ಡಿಸಿಎಂ, ಸಚಿವ ಸ್ಥಾನ ಯಾವುದು ಕೊಟ್ಟರೂ ಬೇಡ ಅನ್ನಲ್ಲ: ಕೆ.ಎಸ್. ಈಶ್ವರಪ್ಪ | ಜನತಾ ನ್ಯೂಸ್
ಶಿವಮೊಗ್ಗ : ಉಪ ಮುಖ್ಯಮಂತ್ರಿ ಸ್ಥಾನ ಹಾಗೂ ಸಚಿವ ನೀಡಿದರೆ ನಾನು ಬೇಡ ಎನ್ನುವುದಿಲ್ಲ. ಆದರೆ, ಅದಕ್ಕಾಗಿ ಲಾಬಿ ಮಾಡುವುದಿಲ್ಲಎಂದು ಶಾಸಕ ಹಾಗೂ ಬಿಜೆಪಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, "ಉಪ ಮುಖ್ಯಮಂತ್ರಿ ಹುದ್ದೆ, ಸಚಿವ ಸ್ಥಾನ ಯಾವುದೂ ಬೇಡ ಎಂದು ಹೇಳುವುದಿಲ್ಲ. ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುತ್ತೇನೆ. ಒಂದು ವೇಳೆ ಸಂಘಟನೆ ಮಾಡುವಂತೆ ಜವಾಬ್ದಾರಿ ನೀಡಿದರೆ ಅದನ್ನು ಮಾಡುತ್ತೇನೆ,' ಎಂದು ತಿಳಿಸಿದರು.
ಯಾವುದೇ ಗೊಂದಲವಿಲ್ಲದೇ ಸರ್ವಸಮ್ಮತಿ ಮೇರೆಗೆ ಮುಖ್ಯಮಂತ್ರಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ನವರ ನಿರೀಕ್ಷೆ ಸುಳ್ಳಾಗಿ ಅವರಿಗೆ ನಿರಾಶೆ ತಂದಿದೆ. ಯಾವ ಗೊಂದಲಗಳು ಇಲ್ಲದೇ ರಾಷ್ಟ್ರೀಯ ನಾಯಕರು ಅತ್ಯಂತ ಸರಳವಾಗಿ ಬಗೆಹರಿಸಿದ್ದಾರೆ ಎಂದರು.
ಹಲವು ಸಂಘ, ಸಂಸ್ಥೆಗಳು ಅಭಿಮಾನಿಗಳು ನಾನು ಉಪ ಮುಖ್ಯಮಂತ್ರಿ ಆಗಬೇಕೆಂದು ಬಯಸುತ್ತಿದ್ದಾರೆ. ನಾನೊಬ್ಬ ಪಕ್ಷ ದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಈ ಹಿಂದೆ ಸಚಿವ ಸ್ಥಾನದಲ್ಲಿದ್ದರೂ ಕೂಡ ಅದನ್ನು ಬಿಟ್ಟು ವರಿಷ್ಠರ ತೀರ್ಮಾನದಂತೆ ರಾಜ್ಯಾಧ್ಯಕ್ಷ ನಾಗಿ ಕೆಲಸ ಮಾಡಿದ್ದೇನೆ. ಪಕ್ಷ ದ ವರಿಷ್ಠರ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ನನಗೆ ಮಂತ್ರಿ ಸ್ಥಾನವನ್ನಾದರೂ ಕೊಡಲಿ, ಉಪ ಮುಖ್ಯಮಂತ್ರಿ ಸ್ಥಾನವನ್ನಾದರೂ ಕೊಡಲಿ ಇಲ್ಲವೇ ಶಾಸಕನಾಗಿ ಉಳಿದು ಪಕ್ಷ ಸಂಘಟನೆ ಮಾಡುವ ಜವಾಬ್ದಾರಿ ನೀಡಿದರೂ ಅದನ್ನು ನಿಷ್ಠೆಯಿಂದ ನಿಭಾಯಿಸುತ್ತೇನೆ ಎಂದರು.
"ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎಂದು ಹೇಳಲಾಗುತ್ತಿರುವ ಆಡಿಯೋ ವಿಚಾರವಾಗಿ ಮಾತನಾಡಿದ ಈಶ್ವರಪ್ಪ, ಯಾವುದೇ ಆಡಿಯೋ, ವಿಡಿಯೋಗೆ ಹೆದರುವುದಿಲ್ಲ." ಎಂದಿದ್ದಾರೆ.
ತಮಗೂ ಮುಖ್ಯಮಂತ್ರಿ ಆಗುವ ಅರ್ಹತೆ ಇತ್ತು. ತಮಗಿಂತಲೂ ಹಿರಿಯರು, ಅನುಭವಿಗಳು ಪಕ್ಷದಲ್ಲಿದ್ದಾರೆ. ಆದರೆ ವರಿಷ್ಠರು ಬಸವರಾಜ ಬೊಮ್ಮಾಯಿಗೆ ಆ ಜವಾಬ್ದಾರಿ ನೀಡಿದ್ದಾರೆ. ಎರಡು ವರ್ಷ ಅವರಿಗೆ ನಾವೆಲ್ಲ ಬೆಂಬಲ ನೀಡುತ್ತೇವೆ. ಎರಡು ವರ್ಷದಲ್ಲಿ ಜನ ಮೆಚ್ಚುವಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇವೆ, ಎಂದು ಈಶ್ವರಪ್ಪ ತಿಳಿಸಿದರು.
ಸಿಎಂ ಹಾಗೂ ಸಂಪುಟ ಬದಲಾದರೂ ಶಿವಮೊಗ್ಗದ ಘೋಷಿತ ಮತ್ತು ಚಾಲ್ತಿಯಲ್ಲಿರುವ ಯಾವ ಅಭಿವೃದ್ಧಿ ಕಾರ್ಯಗಳು ನಿಲ್ಲುವುದಿಲ್ಲ. ಶಿವಮೊಗ್ಗಕ್ಕೆ ಮತ್ತಷ್ಟು ಯೋಜನೆ ತರಲಿದ್ದೇವೆ. ಮುಂದಿನ ದಿನಗಳಲ್ಲಿಬಿಜೆಪಿ ಜಿಲ್ಲೆಯಲ್ಲಿಮತ್ತಷ್ಟು ಪ್ರಬಲವಾಗಲಿದೆ. ಮುಂದಿನ ಜಿಪಂ ಮತ್ತು ತಾಪಂ ಚುನಾವಣೆಯಲ್ಲಿಬಿಜೆಪಿ ಜಯಭೇರಿ ಬಾರಿಸಲಿದೆ. ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಯಿಂದ ಯಾವ ಬದಲಾವಣೆಯೂ ಆಗುವುದಿಲ್ಲ ಎಂದರು.
ಬಸವರಾಜ ಬೊಮ್ಮಾಯಿಯನ್ನು ವರಿಷ್ಠರು ಸಿಎಂ ಮಾಡಿದ್ದು ಕೃಷ್ಣನ ತಂತ್ರವಾಗಿದೆ. ಎರಡು ವರ್ಷ ಉತ್ತಮವಾಗಿ ಅಧಿಕಾರ ನಡೆಸುತ್ತೇವೆ. ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತಂದು ರಾಮರಾಜ್ಯ ನಿರ್ಮಿಸುತ್ತೇವೆ, ಎಂದು ಹೇಳಿದರು.