ರೌಡಿಶೀಟರ್ ಮನೆಗಳ ಮೇಲೆ ಪೊಲೀಸರಿಂದ ದಾಳಿ, ಹಲವರು ವಶಕ್ಕೆ | ಜನತಾ ನ್ಯೂಸ್
ಬೆಂಗಳೂರು : ಕೆಲ ದಿನಗಳ ಹಿಂದಷ್ಟೇ ನಗರದಲ್ಲಿ 2 ಸಾವಿರಕ್ಕೂ ಹೆಚ್ಚು ರೌಡಿ ಮನೆಗಳ ಮೇಲೆ ದಾಳಿ ಮಾಡಿದ್ದ ಪೊಲೀಸರು, ಮುಂದುವರಿದ ಭಾಗವಾಗಿ ಅಪರಾಧ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ ರೌಡಿಗಳ ಮನೆ ಮೇಲೆ ಆಗ್ನೇಯ ವಿಭಾಗದ ಪೊಲೀಸರು ದಾಳಿ ನಡೆಸಿದ್ದಾರೆ.
ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಷಿ ಅವರ ನೇತೃತ್ವದಲ್ಲಿ ಪೊಲೀಸ್ ಪಡೆ ಏಕಕಾಲ ದಲ್ಲಿ 63 ರೌಡಿಗಳ ಮನೆ ಗಳ ಮೇಲೆ ದಾಳಿ ಮಾಡಿ 31 ರೌಡಿಗಳನ್ನು
ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.
ಸುಜಿತ್ ಅಲಿಯಾಸ್ ಡೊಟ್ರಿ, ತೇಜಸ್ ವಿಜಿ ಅಸೋಸಿಯೇಟ್ಸ್, ಕಿಶೋರ್ ಅಲಿಯಾಸ್ ಪುಣೆ, ಸುರೇಶ್ ಅಲಿಯಾಸ್ ಮರ್ಡರ್ ಸುರೇಶ್, ಅತಾವುಲ್ಲಾ, ಆನಂದ್, ಗೌತಮ್, ಮಣಿಕಾಂತ್, ಆನಂದ್ ಅಲಿಯಾಸ್ ಬ್ರಿಡ್ಜ್, ಶಿವ ಅಲಿಯಾಸ್ ಹಂದಿಶಿವ, ಅಂಬರೀಶ್, ಗೆಜ್ಜಿ ವೆಂಕಟೇಶ್ ಸೇರಿದಂತೆ 63 ರೌಡಿಗಳ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿ ಸಂದರ್ಭದಲ್ಲಿ ಸಿಕ್ಕಿದ 31 ರೌಡಿಗಳನ್ನು ಆಯಾ ಠಾಣೆಗಳಿಗೆ ಕರೆತಂದ ಅಧಿಕಾರಿಗಳು ಮತ್ತು ಸಿಬ್ಬಂದಿ ರೌಡಿಗಳು ಪ್ರಸ್ತುತ ಮಾಡುತ್ತಿರುವ ಉದ್ಯೋಗ, ಮೊಬೈಲ್ ಸಂಖ್ಯೆ, ಖಾಯಂ ವಿಳಾಸದ ಬಗ್ಗೆ ಮಾಹಿತಿ ಪಡೆದುಕೊಂಡರು. ಹಣಕಾಸು ವ್ಯವಹಾರ, ವೈಯಕ್ತಿಕ ದ್ವೇಷ ಸೇರಿದಂತೆ ಇತ್ಯಾದಿ ಕಾರಣಗಳಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿ ಬಾಲ ಬಿಚ್ಚದಂತೆ ಎಚ್ಚರಿಕೆ ನೀಡಿದರು ಎನ್ನಲಾಗಿದೆ.