ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಕಷ್ಟಕಾಲ ಬಂದ್ರೆ ನನ್ನ ಸಪೋರ್ಟ್ ಇದೆ : ಹೆಚ್ಡಿಡಿ | ಜನತಾ ನ್ಯೂಸ್
ಬೆಂಗಳೂರು : ಯಡಿಯೂರಪ್ಪ ಅವರನ್ನ ದೂರ ಇಟ್ಟು ಸರ್ಕಾರ ರಚನೆ ಮಾಡುವುದು ಕಷ್ಟ. ಈ ಸರ್ಕಾರಕ್ಕೆ ಕಷ್ಟಕಾಲ ಬಂದ್ರೆ ನಾನು ಸಪೋರ್ಟ್ ಮಾಡ್ತೀನಿ. ಅವಧಿಗೂ ಮೊದಲೇ ಚುನಾವಣೆಗೆ ಹೋಗುವ ಆಸೆ ನಮಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾಜಿ ಸಿಎಂ ಎಚ್.ಡಿ. ದೇವೇಗೌಡ ಭರವಸೆ ನೀಡಿದ್ದಾರೆ.
ಪದ್ಮನಾಭ ನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಭಾನುವಾರ ಸಿಎಂ ಬೊಮ್ಮಾಯಿ ಅವರು ಭೇಟಿ ನೀಡಿ ಅನೌಪಚಾರಿಕವಾಗಿ ಕೆಲಕಾಲ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ, ಅವರ ತಂದೆ ಮತ್ತು ಬಸವರಾಜ ಇಬ್ಬರೂ ನಮ್ಮ ಜತೆ ಕೆಲಸ ಮಾಡಿದ್ದಾರೆ. ನನ್ನನ್ನು ಭೇಟಿ ಮಾಡಬೇಕು ಅಂದ್ರು, ಬಾರಪ್ಪ ಎಂದು ಕರೆದೆ, ಬಂದರು.
ಒಳ್ಳೆಯ ಕೆಲಸ ಮಾಡು, ಜನತೆಗೆ ಒಳ್ಳೆಯದಾಗಬೇಕು. ನನಗೆ ಕಾಲಿನ ತೊಂದರೆಯಿಂದ ಓಡಾಡಲು ಆಗಲ್ಲ. ನೀರಾವರಿ ವಿಚಾರದಲ್ಲಿ ಸಲಹೆ ಕೇಳಿದ್ರೆ ಕೊಡ್ತೀನಿ. ಎರಡು ವರ್ಷ ಅಧಿಕಾರಾವಧಿ ಪೂರ್ಣಗೊಳಿಸಲು ನಮ್ಮಿಂದ ನಿಮಗೆ ಯಾವುದೇ ಸಮಸ್ಯೆ ಆಗಲ್ಲ. ನಿನಗೆ ಒಳ್ಳೆಯದಾಗ್ಲಿ ಎಂದು ಹೇಳಿ ಕಳಿಸಿದೆ ಎಂದು ಹೇಳಿದರು.
ಸದ್ಯ ಮಧ್ಯಂತರ ಚುನಾವಣೆಗೆ ಹೋಗುವ ಯೋಚನೆ ನಮಗಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಕಷ್ಟಕಾಲ ಬಂದರೆ ಬೆಂಬಲ ನೀಡುತ್ತೇವೆ. ಈಗ ಜಿ.ಪಂ, ತಾ.ಪಂ ಚುನಾವಣೆ ಬರುತ್ತಿದೆ. ಆ ನಂತರ ಚುನಾವಣೆ ಬಂದೇ ಬಿಡುತ್ತೆ. ಸಿದ್ದರಾಮಯ್ಯ ನನ್ನ ಶಿಷ್ಯ ಅಲ್ಲಾ, ಎಲ್ಲರೂ ಕೂಡ ನಾಯಕರೇ, ಅವರೆಲ್ಲರೂ ಈಗ ಅವರದೇ ಗೌರವಯುತ ಸ್ಥಾನ ತಲುಪಿದ್ದಾರೆ ಎಂದರು.
ರಾಜಕಾರಣದಲ್ಲಿ ವಯಸ್ಸು ಮುಖ್ಯನಾ ಎಂಬ ಪ್ರಶ್ನೆಗೆ ಮಹಾಭಾರತದ ಪ್ರಸಂಗ ನೆನಪಿಸಿದ ಹೆಚ್ಡಿಡಿ, ವಯಸ್ಸಿಗಿಂತ ಹೆಚ್ಚಾಗಿ ಮನಸ್ಸಿನಲ್ಲಿ ಶ್ರದ್ಧೆ,ಹೋರಾಟದ ಕಿಚ್ಚು ಮುಖ್ಯ. ವಯಸ್ಸಾದರೂ ಹೋರಾಟ ಮನೋಭಾವನೆ ಇರಬೇಕು.
ಭೀಷ್ಮನಿಗೆ ವಯಸ್ಸಾದರೂ 10 ದಿನ ಯುದ್ಧ ಮಾಡಿದ. ಕರ್ಣ ಒಂದು ದಿನ ಯುದ್ಧ ಮಾಡಿದ ಎಂದ ಅವರು, ರಾಜಕಾರಣಕ್ಕೂ ವಯಸ್ಸಿಗೂ ಸಂಬಂಧ ಇಲ್ಲ ಎಂದು ತಿಳಿಸಿದರು.ಯಡಿಯೂರಪ್ಪರನ್ನು ತೆಗೆಯಬೇಕು ಅಂತಾ ನಾವೇನು ಹೇಳಿರಲಿಲ್ಲ.
ಕೇಂದ್ರದ ಬಿಜೆಪಿ ನಾಯಕರು 75 ವರ್ಷ ಮೇಲ್ಪಟ್ಟವರಿಗೆ ಅವಕಾಶ ನೀಡಿರಲಿಲ್ಲ. ಯಡಿಯೂರಪ್ಪ ವಿಚಾರದಲ್ಲಿ ಅದು ವಿಶೇಷ ಸಂದರ್ಭ. ಈಗ ಅವರಿಂದ ರಾಜೀನಾಮೆಯನ್ನು ಪಡೆದುಕೊಂಡಿದ್ದಾರೆ. ಬಸವರಾಜ್ ಬೊಮ್ಮಾಯಿ ಈಗ ಸಿಎಂ ಆಗಿದ್ದಾರೆ.
ಈ ಮೊದಲು ಯಡಿಯೂರಪ್ಪ, ಶೆಟ್ಟರ್, ಸದಾನಂದಗೌಡ ಅವಧಿಯಲ್ಲಿ ಸಚಿವರಾಗಿದ್ದಾರೆ. ಬಿಜೆಪಿಯಲ್ಲಿ ಅದಕ್ಕಿಂತಲೂ ಯಡಿಯೂರಪ್ಪ ಜೊತೆ ನಡೆದುಕೊಂಡ ರೀತಿ ನೋಡಿ ಕೊನೆಗೆ ಹೈಕಮಾಂಡ್ ಒಪ್ಪಿಕೊಂಡು ಅವಕಾಶ ನೀಡಿದೆ ಎಂದರು.
ಸಿಎಂ ಬೊಮ್ಮಾಯಿ ಭೇಟಿ ವೇಳೆ ಯಾವುದೇ ಚರ್ಚೆ ಮಾಡಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್.ಆರ್.ಬೊಮ್ಮಾಯಿ ಮತ್ತು ನಾನು ಒಟ್ಟಿಗಿದ್ದೆವು. ಜನತಾ ಪರಿವಾರದಲ್ಲಿದ್ದರಿಂದ ಭೇಟಿಗೆ ಬರುವುದಾಗಿ ಹೇಳಿದ್ದರು. ಅಂತೆಯೇ ಭೇಟಿಯಾಗಿದ್ದಾರೆ. ಆದ್ದರಿಂದ ಆಶೀರ್ವಾದ ಪಡೆಯಲು ಮನೆಗೆ ಬಂದಿದ್ದರು. ರಾಜ್ಯಕ್ಕೆ ಒಳ್ಳೆಯ ಕೆಲಸ ಮಾಡಿ ಎಂದು ಸಿಎಂ ಹೇಳಿದ್ದೇನೆ. ಸರ್ಕಾರದ ಒಳ್ಳೆಯ ಕೆಲಸಗಳಿಗೆ ನಮ್ಮ ಸಹಕಾರ ಇರುತ್ತದೆ ಎಂದು ತಿಳಿಸಿದ್ದೇನೆ ಎಂದು ಬೆಂಗಳೂರಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.