ಬಿಜೆಪಿವರಂಥ ಸಂಸ್ಕೃತಿ ಇಲ್ಲದ ಜನ ಬೇರೆ ಯಾರೂ ಇಲ್ಲ! | ಜನತಾ ನ್ಯೂಸ್
ಉತ್ತರ ಕನ್ನಡ : ಭಾರೀ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾನಿ ಉಂಟಾಗಿದ್ದು, ನೆರೆ ಪೀಡಿತ ಪ್ರದೇಶಗಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ ಬಿಜೆಪಿ ವಿರುದ್ಧ ಹರಿಹಾಯ್ದರು. ಭಾರತೀಯ ಜನತಾ ಪಾರ್ಟಿಯವರು ತಾವು ಬಹಳ ಸುಸಂಸ್ಕೃತರು, ಸಂಸ್ಕಾರವಂತರು ಎಂದುಕೊಂಡಿದ್ದಾರೆ. ಅವರಂಥ ಸಂಸ್ಕೃತಿ ಇಲ್ಲದ ಜನ ಬೇರಾರೂ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಭ್ರಷ್ಟ ಪಕ್ಷ, ಬಿಜೆಪಿಯದ್ದು ಭ್ರಷ್ಟ ಸರ್ಕಾರ. ಯಾವ ಕಾರಣಕ್ಕೆ ಯಡಿಯೂರಪ್ಪರನ್ನು ಅಧಿಕಾರದಿಂದ ಕೆಳಗಿಳಿಸಿದ್ದರು? ಬಿಜೆಪಿಯವರು ತಾವು ಸಾಚಾಗಳೆಂದು ತೋರಿಸಿಕೊಳ್ಳುತ್ತಾರೆ. ಆದರೆ ಬಿಜೆಪಿಯವರು ಸಂಸ್ಕೃತಿರಹಿತರು ಎಂದು ತಿಳಿಸಿದ್ದಾರೆ.
ಬಸವರಾಜ ಬೊಮ್ಮಾಯಿಯವರು ಈಗಷ್ಟೇ ಮುಖ್ಯಮಂತ್ರಿಗಳಾಗಿದ್ದಾರೆ. ಅವರ ಬಗ್ಗೆ ಟೀಕೆ ಮಾಡುವುದಿಲ್ಲ. ಆದರೆ ರಾಜ್ಯದ ಸಮಸ್ಯೆಗಳ ಬಗ್ಗೆ ಗಮನ ಕೊಡಬೇಕು ಎಂದು ಒತ್ತಾಯಿಸುತ್ತೇನೆ. ಕೊರೊನಾ ನಿಯಂತ್ರಣ ಸರ್ಕಾರದ ಮೊದಲ ಕೆಲಸವಾಗಬೇಕು. ಆದರೆ ಸಚಿವ ಸಂಪುಟಕ್ಕೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಪದೇಪದೆ ಹೈಕಮಾಂಡ್ ಭೇಟಿಗೆ ಹೋಗುತ್ತಿದ್ದಾರೆ. ಶಾಸಕರು ಕೂಡ ಕ್ಷೇತ್ರಗಳಲ್ಲಿ ಇಲ್ಲ, ಬೆಂಗಳೂರಿನಲ್ಲಿದ್ದಾರೆ. ಶಾಸಕರಿಗೆ ಮಂತ್ರಿ ಆಗೋದು ಮುಖ್ಯ, ಸಮಸ್ಯೆಯಲ್ಲ ಎಂದು ಕಾರವಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಈಗಾಗಲೇ ನಾವು ಸಾಕಷ್ಟು ಕಷ್ಟ ಅನುಭವಿಸಿದ್ದೇವೆ. ಸೂಕ್ತ ಆಸ್ಪತ್ರೆ, ಹಾಸಿಗೆಗಳು, ವೆಂಟಿಲೇಟರ್, ಆಕ್ಸಿಜನ್ ಇಲ್ಲದೆ ಸಾವಿರಾರು ಜನ ಸಾವಿಗೀಡಾಗಿದ್ದಾರೆ, ಇದು ಮತ್ತೆ ಮರುಕಳಿಸದಂತೆ ತಡೆಯಬೇಕು. ಇದನ್ನು ಬಿಟ್ಟು ಮುಖ್ಯಮಂತ್ರಿಗಳು ಮಂತ್ರಿಮಂಡಲ ರಚನೆಗೆ ಓಡಾಡುತ್ತಿದ್ದಾರೆ. ಒಮ್ಮೆ ದೆಹಲಿಗೆ ಹೋಗಲಿ, ಪದೇ ಪದೇ ಹೋಗುವ ಅಗತ್ಯವೇನಿದೆ? ಬಿಜೆಪಿ ಹೈಕಮಾಂಡ್ ಕೂಡ ರಾಜ್ಯದ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಎಂಪಿ ರೇಣುಕಾಚಾರ್ಯ ತಮ್ಮ ವಿರುದ್ಧ ಮಾಧ್ಯಮಗಳು ಯಾವುದೇ ಮಾನಹಾನಿಕರ ಸುದ್ದಿಗಳನ್ನ ಪ್ರಕಟಿಸಬಾರದು ಎಂದು ಕೋರ್ಟ್ ಮೊರೆ ಹೋಗಿರುವ ಕುರಿತು ಮಾತನಾಡಿದ ಅವರು, ಇದು ಏನನ್ನು ಸೂಚಿಸುತ್ತದೆ?. ಇವರು ಯಾವುದೋ ಸ್ಕ್ಯಾಂಡಲ್ನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದೇ ಅರ್ಥ ತಾನೆ? ಅವರು ಯಾವುದೋ ಸೆಕ್ಸ್ ಸ್ಕ್ಯಾಂಡಲ್, ಭ್ರಷ್ಟಾಚಾರ ಅಥವಾ ಬೇರೆ ಯಾವುದೇ ಅಪರಾಧಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಹೀಗಾಗಿ ಕೋರ್ಟ್ ಮೊರೆ ಹೋಗುತ್ತಿದ್ದಾರೆ. ವಿಡಿಯೋಗಳಲ್ಲಿ ಗ್ರಾಫಿಕ್ಸ್ ಮಾಡುವುದಾದರೆ ರೇಣುಕಾಚಾರ್ಯ, ಸದಾನಂದಗೌಡರದ್ದೇ ಯಾಕೆ ಮಾಡಬೇಕು? ಬೇರೆಯವರನ್ನು ಯಾಕೆ ಮಾಡಲ್ಲ?. ಇವರದ್ದು ಕಳ್ಳರ ಮನಸು ಹುಳ್ಳುಳುಗೆ ಎಂಬಂತೆ. ಕಳ್ಳ ಹೆಗಲುಮುಟ್ಟಿ ನೋಡಿಕೊಂಡಂತೆ ಇವರದ್ದು ಎಂದರು.