ಸೈಟ್ ಕೊಡಿಸುವುದಾಗಿ ಹಣ ಪಡೆದು ವಂಚನೆ ಮಾಡಿದ್ದ ಬೃಂದಾವನ್ ಪ್ರಾಪರ್ಟಿ ಮಾಲೀಕ ಬಂಧನ! | ಜನತಾ ನ್ಯೂಸ್
ಬೆಂಗಳೂರು : ಕಡಿಮೆ ಬೆಲೆಯಲ್ಲಿ ನಿವೇಶನ ಕೊಡಿಸುವುದಾಗಿ ನಂಬಿಸಿ ಹಲವು ಜನರಿಂದ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿಸಿಕೊಂಡಿದ್ದ ಬೃಂದಾವನ ಪ್ರಾಪರ್ಟೀಸ್ ಮಾಲೀಕ ದಿನೇಶ್ ಗೌಡ ಎಂಬಾತನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ಹಾಸನದ ಅರಕಲಗೂಡಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆತಂದಿರುವ ಪೊಲೀಸರು, ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಈಗಾಗಲೇ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದಿನೇಶ್ ಗೌಡ ವಿರುದ್ಧ ಇದುವರೆಗೂ 1200ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ.
ತಾವು ನಿವೇಶನಕ್ಕಾಗಿ ನೀಡಿರುವ ಹಣವನ್ನು ವಾಪಸ್ ಕೊಡಿಸಬೇಕೆಂದು ನಿನ್ನೆ 500ಕ್ಕೂ ಹೆಚ್ಚು ಮಂದಿ ರಾಜಾಜಿನಗರ ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದರು. ಆರೋಪಿ ದಿನೇಶ್ ಗೌಡ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಆತನ ಬಂಧನಕ್ಕೆ ಪೊಲೀಸರ ತಂಡ ರಚಿಸಲಾಗಿತ್ತು. ಆರೋಪಿ ದಿನೇಶ್ ಗೌಡ ನಿನ್ನೆ ರಾತ್ರಿ ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಇರುವ ಬಗ್ಗೆ ಈ ತಂಡಕ್ಕೆ ಮಾಹಿತಿ ಲಭಿಸಿದೆ. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಅರಕಲಗೂಡಿಗೆ ತೆರಳಿ ದಿನೇಶ್ಗೌಡನನ್ನು ಬಂಧಿಸಿದ್ದಾರೆ.
ನಾಗರಬಾವಿ ನಿವಾಸಿ ದಿನೇಶ್ ಗೌಡ ಎಂಬುವರು ರಾಜಾಜಿನಗರದಲ್ಲಿ ಬೃಂದಾವನ ಪ್ರಾಪರ್ಟೀಸ್ ಎಂಬ ಕಚೇರಿ ತೆರೆದಿದ್ದು, ಕಡಿಮೆ ಬೆಲೆಯಲ್ಲಿ ನಿವೇಶನ ಕೊಡಿಸುವುದಾಗಿ ಹೇಳಿ ಬೃಂದಾವನ ಪ್ರಾಪರ್ಟೀಸ್ ಜನರಿಂದ 1ರಿಂದ 5 ಲಕ್ಷದವರೆಗೆ ಹಣ ಪಡೆದಿತ್ತು.
ಹಲವಾರು ಶ್ರಮಿಕ ವರ್ಗದವರು 2016ರಿಂದಲೂ 2 ಲಕ್ಷ, 5 ಲಕ್ಷ ಹೀಗೆ 10 ಲಕ್ಷ ರೂ.ವರೆಗೂ ನೀಡಿದ್ದರು. ಹಣ ಕೊಟ್ಟು ಹಲವರಿಗೆ ಅಗ್ರಿಮೆಂಟ್ ಸಹ ಮಾಡಿಕೊಡಲಾಗಿತ್ತು. ಹಣ ನೀಡಿದ ಬಳಿಕ ನಿವೇಶನ ಕೇಳಿದರೆ ನೀಡಬೇಕಾಗಿರುವ ಬಡಾವಣೆಯ ಜಾಗ ಅಭಿವೃದ್ದಿಪಡಿಸುತ್ತಿದ್ದು, ಕೆಲಸ ಮುಗಿದ ಬಳಿಕ ನೀಡಲಾಗುವುದು ಎಂದು ಭರವಸೆ ನೀಡುತ್ತಿತ್ತು.
ಕಡಿಮೆ ಹಣಕ್ಕೆ ನಿವೇಶನ ಕೊಡುವುದಾಗಿ ಹಲವಾರು ಜನರಿಂದ ಲಕ್ಷಾಂತರ ರೂ. ಪಡೆದು ಸುಮಾರು 5 ಕೋಟಿ ಸಂಗ್ರಹಿಸಿಕೊಂಡು ನಾಪತ್ತೆಯಾಗಿದ್ದಾನೆ ಎಂಬ ಸುದ್ದಿ ಹರಡುತ್ತಿದ್ದಂತೆ ಕಳೆದ ವಾರ ಹಣಕೊಟ್ಟವರು ಕಚೇರಿ ಬಳಿ ಜಮಾಯಿಸಿದ್ದರು. ಏಕಾಏಕಿ ರಾಜಾಜಿನಗರದ ಬೃಂದಾವನ ಪ್ರಾಪರ್ಟೀಸ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದರು.
ಆದರೆ ಒಂದೇ ನಿವೇಶನವನ್ನು ನಾಲ್ಕೈದು ಮಂದಿಗೆ ಮಾರಾಟ ಮಾಡಿರುವುದು ಗೊತ್ತಾಗಿದೆ. ಅಲ್ಲದೆ ದಿನೇಶ್ ಗೌಡ ಸೂಚಿಸಿದ ಜಾಗದಲ್ಲಿ ಯಾವುದೇ ನಿವೇಶನವಿಲ್ಲ ಎಂದು ತಿಳಿದು ಹಣ ಕಳೆದುಕೊಂಡವರು ಪೊಲೀಸ್ ಠಾಣೆ ಮೆಟ್ಟಿಲೇರಿ ಹಣ ವಾಪಸ್ ಕೊಡಿಸುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ನಿವೇಶನಕ್ಕಾಗಿ ಹಣ ಕೊಟ್ಟು ಮೋಸ ಹೋದ ಸಾವಿರಾರು ಮಂದಿ ರಾಜಾಜಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರುಗಳ ಸುರಿಮಳೆ ಬೆನ್ನಲ್ಲೇ ನಿನ್ನೆ ಅಜ್ಞಾತ ಸ್ಥಳದಿಂದ ವಿಡಿಯೊ ಹರಿಬಿಟ್ಟಿದ್ದ ದಿನೇಶ್, ಕೊರೊನಾ ಲಾಕ್ ಡೌನ್ ಎಲ್ಲಾ ಕ್ಷೇತ್ರದವರನ್ನೂ ಹೈರಾಣಾಗಿಸಿದೆ. ಅದರಲ್ಲಿ ರಿಯಲ್ ಎಸ್ಟೇಟ್ ಮಾರುಕಟ್ಟೆಯೂ ಹೊರತಾಗಿಲ್ಲ. ಕಳೆದ ಎರಡು ವರ್ಷಗಳ ಆರ್ಥಿಕ ಹಿಂಜರಿತದಿಂದಾಗಿ ನಮ್ಮ ಮಾರುಕಟ್ಟೆ ಮತ್ತು ಹಣದ ಸರಪಳಿ ಹಳಿತಪ್ಪಿದೆ. ಈ ಹಳಿ ತಪ್ಪಿರುವ ಹಣ ಮತ್ತು ಮಾರುಕಟ್ಟೆಯ ಸರಪಳಿ ಇನ್ನು ಕೆಲವೇ ದಿನಗಳಲ್ಲಿ ಸರಿಹೋಗಲಿದ್ದು, ಎಲ್ಲಾ ಹೂಡಿಕೆದಾರರಿಗೂ ಕೂಡ ನಾವು ಯಾವುದೇ ಅನ್ಯಾಯವಿಲ್ಲದ ರೀತಿಯಲ್ಲಿ ಸೈಟ್ ನೀಡುತ್ತೇವೆ ಅಥವಾ ಹಣ ಹಿಂದಿರುಗಿಸುತ್ತೇವೆ ಎಂದು ಸ್ಪಷ್ಟನೆ ನೀಡಿದ್ದರು.