ಹಾಡಹಗಲೇ ವೃದ್ಧನ ಕತ್ತು ಸೀಳಿ ಬರ್ಬರ ಹತ್ಯೆ | ಜನತಾ ನ್ಯೂಸ್
ಬೆಳಗಾವಿ : ನಗರದ ವಡಗಾವಿಯ ಯಳ್ಳೂರು ಕ್ರಾಸ್ ಬಳಿ ಭೀಕರ ಹತ್ಯೆ ನಡೆದಿದೆ. ಮೂಲತಃ ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಮದ ನಿವಾಸಿ ಮಹಾದೇವ ಮಾರುತಿ ಜಾಧವ್ ಎಂಬ 55 ವರ್ಷ ವಯಸ್ಸಿನ ವೃದ್ಧನ ಕತ್ತು ಸೀಳಿ ಕೊಲೆ ಮಾಡಲಾಗಿದೆ.
ಬೆಳಗಾವಿ ತಾಲೂಕಿನ ಅಂಬೆವಾಡಿ ಗ್ರಾಮದ ಮಹಾದೇವ ಮಾರುತಿ ಜಾಧವ್ (50) ಕೊಲೆಯಾದ ಕಾರ್ಮಿಕ. ಗೌಂಡಿ ಕೆಲಸ ಮಾಡುತ್ತಿದ್ದ ಮಹಾದೇವ, ಕೆಲಸದ ನಿಮಿತ್ತ ವಡಗಾವಿಯ ಭಾರತ ನಗರದ ಬಾಡಿಗೆ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಮಹಾದೇವ ಅವರ ಕುಟುಂಬ ಅಂಬೆವಾಡಿ ಗ್ರಾಮದಲ್ಲಿ ನೆಲೆಸಿದ್ದು, ಇವರು ವಾಸವಿದ್ದ ಬಾಡಿಗೆ ಮನೆ ಪಕ್ಕವೇ ಸಹೋದರಿಯ ಮನೆಯೂ ಇದೆ.
ಮಹಾದೇವ ಜಾಧವ್ ನಿನ್ನೆ ಕೆಲಸಕ್ಕೆ ರಜೆ ಇದೆ, ಹೊರಗೆ ಹೋಗಿ ಬರ್ತೀನಿ ಅಂತಾ ತಂಗಿಗೆ ಹೇಳಿ ತೆರಳಿದ್ದ. ಹೀಗೆ ಹೋಗಿದ್ದ ಆತ ಮನೆಯಿಂದ ಸ್ವಲ್ಪ ದೂರದಲ್ಲೇ ಇರುವ ವಡಗಾವಿಯ ಯಳ್ಳೂರು ಕ್ರಾಸ್ ಬಳಿ ಆಟೋ ನಿಲ್ದಾಣದ ಹತ್ತಿರ ರಕ್ತದ ಮಡುವಿನಲ್ಲಿ ಹೆಣವಾಗಿ ಬಿದ್ದಿದ್ದ. ಈ ವೇಳೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಇಬ್ಬರು ಅಪರಿಚಿತರು, ನಡುರಸ್ತೆಯಲ್ಲೇ ಮಹಾದೇವನನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ.
ಅಸಲಿಗೆ ಮಹಾದೇವ ಜಾಧವ್ ಜೊತೆ ಕೆಲಸ ಮಾಡ್ತಿದ್ದ ಸೂರಜ್ ಎಂಬಾತನ ಬಳಿ ಎರಡು ಸಾವಿರ ರೂಪಾಯಿ ಹಣ ಸಾಲ ಪಡೆದಿದ್ದನಂತೆ. ಎರಡು ಸಾವಿರ ರೂಪಾಯಿ ವಾಪಸ್ ನೀಡುವಂತೆ ಕೇಳಿದರೂ ಕೊಡ್ತಿರಲಿಲ್ವಂತೆ. ಇಂದು ಬೆಳಗ್ಗೆ ಯಳ್ಳೂರು ಕ್ರಾಸ್ ಬಳಿ ತೆರಳುತ್ತಿದ್ದ ಮಹಾದೇವ ಜಾಧವ್ ಬಳಿ ಸೂರಜ್ ತಾನು ನೀಡಿದ ಹಣ ವಾಪಾಸ್ ನೀಡುವಂತೆ ಕೇಳಿದ್ದಾನಂತೆ.
ಈ ವೇಳೆ ಇಬ್ಬರ ಮಧ್ಯೆ ವಾಗ್ವಾದ ನಡೆದು ಜಗಳವಾಗಿದೆ. ಇದು ವಿಕೋಪಕ್ಕೆ ತಿರುಗಿ ಸೂರಜ್ ತನ್ನ ಬಳಿ ಇದ್ದ ರೇಡಿಯಮ್ ಕಟರ್ನಿಂದ ಮಹಾದೇವ ಜಾಧವ್ ಕತ್ತು ಸೀಳಿ ಪರಾರಿಯಾಗಿದ್ದಾನೆ. ಈ ವೇಳೆ ಸ್ಥಳದಲ್ಲೇ ಕುಸಿದು ಬಿದ್ದ ಮಹಾದೇವ ಜಾಧವ್ ವಿಲವಿಲ ಒದ್ದಾಡಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾನೆ ಎನ್ನಲಾಗಿದೆ.
ಕೇವಲ 2ಸಾವಿರ ರೂಪಾಯಿಗಾಗಿ ವ್ಯಕ್ತಿಯ ಹತ್ಯೆ ನಡೆದಿರೋದು ಜನ ಬೆಚ್ಚಿಬೀಳುವಂತೆ ಮಾಡಿದೆ. ಈ ಸಂಬಂಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಂತಕರ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.