ನಾವು ಬಳೆ ತೊಟ್ಟು ಕೂತಿಲ್ಲ. ಹೆಸರು ಬದಲಿಸಲಿ. ಮುಂದೆ ಏನಾಗುತ್ತೋ ನೋಡ್ಲಿ.. | ಜನತಾ ನ್ಯೂಸ್
ಬೆಂಗಳೂರು : ಇಂದಿರಾ ಕ್ಯಾಂಟೀನ್ ಹೆಸರು ಬದಲಿಸುವಂತೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್.. ನಾವ್ಯಾರೂ ಕೈಗಳಿಗೆ ಬಳೆ ತೊಟ್ಕೊಂಡು ಕೂತಿಲ್ಲ.. ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರ ಮುಟ್ಟಲಿ ಗೊತ್ತಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಯುವಕರಿಗೆ ಮತದಾನದ ಹಕ್ಕು ಕೊಟ್ಟ ನಾಯಕ ರಾಜೀವ್ ಗಾಂಧಿ. ಯುವಕರ ಬದುಕು ಬದಲಾವಣೆಗೆ ಅನೇಕ ಕಾರ್ಯಕ್ರಮ ನೀಡಿದ್ರು. ದ್ಯಾನಚಂದ್ ನಮ್ಮ ದೇಶದ ಆಸ್ತಿ. ಅವರ ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ ಮಾಡ್ಲಿ. ಬೇರೆ ಯಾವುದೇ ಹೊಸ ಕಾರ್ಯಕ್ರಮಕ್ಕೆ ಚಾಲನೆ ಕೊಡ್ಲಿ. ಗಾಂಧಿ ಕುಟುಂಬದ ಹೆಸರು ಬದಲಾವಣೆ ಸಹಿಸಲು ಸಾಧ್ಯವಿಲ್ಲ. ದ್ವೇಷದ ರಾಜಕಾರಣ ಮಾಡುವುದು ಸರಿಯಲ್ಲ, ಸಹಿಸಲು ಸಾಧ್ಯವಿಲ್ಲ ಎಂದರು.
ಸರ್ದಾರ್ ವಲ್ಲಬಾಯ್ ಪಟೇಲ್ ಪುತ್ಥಳಿ ನಿರ್ಮಾಣ ಮಾಡ್ತೀರಾ. ಸ್ಟೇಡಿಯಂಗೆ ಹೆಸರು ಬದಲಾವಣೆ ಮಾಡ್ತೀರಾ. ಇದು ದೇಶಭಕ್ತಿಯಾ? ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರ ಮಾತನಾಡಿ, ಹೆಸರು ಬದಲಿಸಿ ಎಂದು ಸಿಎಂಗೆ ಸಿ ಟಿ ರವಿ ಟ್ವೀಟ್ ಮಾಡಿದ್ದಾರೆ. ನಾವು ಬಳೆ ತೊಟ್ಟು ಕೂತಿಲ್ಲ. ಹೆಸರು ಬದಲಿಸಲಿ. ಮುಂದೆ ಏನಾಗುತ್ತೋ ನೋಡ್ಲಿ ಎಂದು ಚಾಲೆಂಜ್ ಹಾಕಿದರು.
ವಾಜಪೇಯಿ ಹೆಸರಿನಲ್ಲಿ ಸಾರಿಗೆ ಇದೆ. ಹಾಗಂತ ನಾವು ವಿರೋಧ ಮಾಡಿದ್ವಾ? ರಾಜೀವ್ ಗಾಂಧಿ ಈ ರಾಷ್ಟ್ರಕ್ಕೆ ಏನೂ ಮಾಡ್ಲಿಲ್ವ? 18 ವರ್ಷದ ಯುವ ಜನತೆಗೆ ಮತದಾನದ ಹಕ್ಕು ನೀಡಿದ್ದು ರಾಜೀವ್ ಗಾಂಧಿ. CT ರವಿ ಈ ವಿಚಾರವನ್ನ ಮುಟ್ಟಿ ನೋಡಲಿ, ಹೆಸರು ಬದಲಾವಣೆ ವಿಚಾರದಲ್ಲಿ ಟಚ್ ಮಾಡಲಿ, ಕಾಂಗ್ರೆಸ್ ಪಕ್ಷ, ಈ ದೇಶದ ಜನ ಏನ್ ಮಾಡ್ತಾರೆ ಅಂತ ಗೊತ್ತಾಗಲಿದೆ ಎಂದು ಖಡಕ್ ಆಗಿ ಹೇಳಿದ್ದಾರೆ.
ನೈಟ್ ಕರ್ಪ್ಯೂ ಇಂದ ಯಾವುದೇ ಪ್ರಯೋಜನ ಇಲ್ಲ. ನಿಮ್ಮಲ್ಲಿ ಬದ್ಧತೆ ಇದ್ದರೆ ಪಿಎಂ ಭೇಟಿ ಮಾಡಿ ವ್ಯಾಕ್ಸಿನೇಷನ್ ಹೆಚ್ಚು ಕೊಡುವ ಬಗ್ಗೆ ಒತ್ತಾಯ ಮಾಡಿ. ವ್ಯಾಕ್ಸಿನೇಷನ್ ಪಡೆಯಲು ಕ್ಯೂ ನಿಂತಿದ್ದಾರೆ. ಇವರು ಕೊರೊನಾ ವ್ಯಾಕ್ಸಿನೇಷನ್ ಕೊಡುವಲ್ಲಿ ವಿಫಲವಾಗಿದ್ದಾರೆ. ಗಡಿ ಮುಚ್ಚಿದ್ರೆ ಅಕ್ಕಪಕ್ಕದ ರಾಜ್ಯಗಳ ಜತೆ ಸಂಬಂಧ ಹಾಳಾಗುತ್ತೆ ಎಂದರು.