"ಲವ್ ಯೂ ರಚ್ಚು" ಸಿನಿಮಾ ನಿರ್ದೇಶಕ ಸೇರಿ ಮೂವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ! | ಜನತಾ ನ್ಯೂಸ್
ಬೆಂಗಳೂರು : ಚಿತ್ರೀಕರಣ ವೇಳೆ ಹೈ ಟೆನ್ಷನ್ ವಿದ್ಯುತ್ ತಂತಿ ತಗುಲಿ ಫೈಟರ್ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಮೂವರು ಆರೋಪಿಗಳಿಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ರಾಮನಗರ ಹೆಚ್ಚುವರಿ ಸಿವಿಲ್ ಕೋರ್ಟ್ ಜಡ್ಜ್ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಚಿತ್ರದ ನಿರ್ದೇಶಕ ಶಂಕರ್ ರಾಜ್, ಫೈಟ್ ಮಾಸ್ಟರ್ ವಿನೋದ್ ಕುಮಾರ್ ಮತ್ತು ಕ್ರೇನ್ ಆಪರೇಟರ್ ಮಹಾದೇವ್ ಎಂಬುವವರನ್ನು 14 ದಿನಗಳ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.
ನಟ ಅಜಯ್ ರಾವ್ ಮತ್ತು ನಟಿ ರಚಿತ ರಾಮ್ ನಟನೆಯ "ಲವ್ ಯೂ ರಚ್ಚು" ಕನ್ನಡ ಸಿನಿಮಾ ಶೂಟಿಂಗ್ ರಾಮನಗರದ ಬಿಡದಿ ಹೋಬಳಿಯ ಜೋಗರಪಾಳ್ಯದಲ್ಲಿ 5 ದಿನಗಳಿಂದ ನಡೆದಿತ್ತು. ಶೂಟಿಂಗ್ನ ಕೊನೇ ದಿನವಾದ ಸೋಮವಾರ ಸಾಹಸದ ದೃಶ್ಯ ಚಿತ್ರೀಕರಣ ವೇಳೆ ವಿದ್ಯುತ್ ಅವಘಡ ಸಂಭವಿಸಿ ಇಬ್ಬರ ಸ್ಥಿತಿ ಗಂಭೀರವಾಗಿತ್ತು. ಈ ಪೈಕಿ ಫೈಟರ್ ತಮಿಳುನಾಡು ಮೂಲದ ವಿವೇಕ್ ಮೃತಪಟ್ಟಿದ್ದು, ಮತ್ತೊಬ್ಬ ರಂಜಿತ್ಗೆ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.
ಈ ಪೈಕಿ ಶಂಕರ್ ರಾಜ್, ವಿನೋದ್ ಕುಮಾರ್ ಮತ್ತು ಮಹದೇವ್ ಎಂಬುವವರನ್ನು ಪೊಲೀಸರು ಬಂಧಿಸಿದ್ದು, ಘಟನೆ ಬಳಿಕ ಚಿತ್ರದ ನಿರ್ಮಾಪಕ ಗುರು ದೇಶಪಾಂಡೆ ಮತ್ತು ಪ್ರೊಡಕ್ಷನ್ ಮ್ಯಾನೇಜರ್ ಫರ್ನಾಂಡಿಸ್ ಪರಾರಿ ಆಗಿದ್ದಾರೆ. ಅವರನ್ನು ಬಿಡದಿ ಪೊಲೀಸರು ಹುಡುಕುತ್ತಿದ್ದಾರೆ ಎನ್ನಲಾಗಿದೆ.