ರಿಯಲ್ ಎಸ್ಟೇಟ್ ಉದ್ಯಮಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ, 24 ಗಂಟೆಯಲ್ಲಿ ಆರೋಪಿಗಳು ಅರೆಸ್ಟ್ | ಜನತಾ ನ್ಯೂಸ್
ದಾವಣಗೆರೆ : ತನ್ನ ಪರಿಚಯಸ್ಥರ ಮನೆಗೆ ಹೋಗಿ ವಾಪಸ್ ಮರಳುವಾಗ ಆಟೋರಿಕ್ಷಾದಲ್ಲಿ ಬಂದ ಮೂವರು, ಕಾಂಗ್ರೆಸ್ ಯುವ ಮುಖಂಡನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿರುವ ಘಟನೆ ದಾವಣಗೆರೆಯಲ್ಲಿ ಬುಧವಾರ ರಾತ್ರಿ ನಡೆದಿದೆ.
ಇದೀಗ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಯಾದ 24 ಗಂಟೆಯಲ್ಲಿ 4 ಜನ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ನಗರದ ಬಸವರಾಜಪೇಟೆಯಲ್ಲಿ ಈ ಕೃತ್ಯ ನಡೆದಿದ್ದು, 42 ವರ್ಷ ವಯಸ್ಸಿನ ಸೀಮೆಎಣ್ಣೆ ಪರಮೇಶ್ ಕೊಲೆಗೀಡಾದ ಕಾಂಗ್ರೆಸ್ ಯುವ ಮುಖಂಡ. ಇವರು ಕಾಂಗ್ರೆಸ್ ಹಿರಿಯ ನಾಯಕ ಸೀಮೆಎಣ್ಣೆ ಮಲ್ಲೇಶ್ ಎಂಬುವವರ ಸಂಬಂಧಿಕರಾಗಿದ್ದರು.
ಹನುಮಂತಪ್ಪ, ಬಸವರಾಜ್, ಕುಮಾರ್, ನಿಯಾಜ್ ಬಂಧಿತ ಆರೋಪಿಗಳಾಗಿದ್ದು, ನಾಲ್ವರು ಆರೋಪಿಗಳು ದಾವಣಗೆರೆಯ ನಿವಾಸಿಗಳಾಗಿದ್ದಾರೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿದ್ದಾಗಿ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಾಹಿತಿ ನೀಡಿದ್ದಾರೆ.
ಬುಧವಾರ ರಾತ್ರಿ ಬಸವರಾಜಪೇಟೆಯ ತನ್ನ ಸ್ನೇಹಿತರ ಮನೆಗೆ ಪರಮೇಶ್ ಹೋಗಿದ್ದರು. ಸ್ನೇಹಿತರನ್ನು ಮಾತನಾಡಿಸಿಕೊಂಡು ಮನೆಯಿಂದ ಹೊರಬಂದು ತಮ್ಮ ಮನೆಗೆ ಹೊರಟಿದ್ದರು. ಈ ವೇಳೆ ಆಟೋರಿಕ್ಷಾದಲ್ಲಿ ಬಂದ ಮೂವರು ಹೊಂಚು ಹಾಕಿ ಕುಳಿತಿದ್ದರು. ಆಗ ಪರಮೇಶ್ ಮೇಲೆ ಮೂವರು ಹಲ್ಲೆ ನಡೆಸಿದ್ದು, ಕೆಳಗಡೆ ಬೀಳುತ್ತಿದ್ದಂತೆ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಹಂತಕರು ಪರಾರಿಯಾಗಿದ್ದಾರೆ.
ರಕ್ತಸಿಕ್ತವಾಗಿದ್ದ ಪರಮೇಶ್ರನ್ನು ತಕ್ಷಣ ಸ್ಥಳೀಯರು ಆಸ್ಪತ್ರೆಗೆ ಸೇರಿಸಲು ಮುಂದಾದರು. ಆದರೆ ಅಷ್ಟರಲ್ಲೇ ಪರಮೇಶ್ ಇಹಲೋಕ ತ್ಯಜಿಸಿದ್ದರು.