ಜನರ ಜೀವ, ಜೀವನಕ್ಕೆ ಅಡಚಣೆ ಉಂಟಾಗಬಾರದು, ಕೋವಿಡ್ ಹೆಚ್ಚಾಗದಂತೆ ಕ್ರಮ: ಸಿಎಂ ಬೊಮ್ಮಾಯಿ | ಜನತಾ ನ್ಯೂಸ್
ಬೆಂಗಳೂರು : ಜನರ ಜೀವ, ಜೀವನಕ್ಕೆ ಅಡಚಣೆ ಉಂಟಾಗಬಾರದು, ಜನರಿಗೆ ತೊಂದರೆ ಕೊಡೋದು ನಮ್ಮ ಉದ್ದೇಶ ಅಲ್ಲ, ಆದರೆ ಕೋವಿಡ್ ಹೆಚ್ಚಾಗದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಆರ್.ಟಿ.ನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಇವತ್ತು ಕೋವಿಡ್ ಪರಿಸ್ಥಿತಿ ಇದೆ. ಕೋವಿಡ್ ನಿರ್ವಹಣೆಯಲ್ಲಿ ಹಲವಾರು ಬದಲಾವಣೆ ಮಾಡುವ ಚಿಂತನೆ ಇದೆ. ಕರೊನಾ ಮೊದಲ ಹಾಗೂ ಎರಡನೇ ಅನುಭವದ ಆಧಾರದಲ್ಲಿ ಮೂರನೇ ಅಲೆ ನಿಯಂತ್ರಣ ನಿಟ್ಟಿನಲ್ಲಿ ಗಮನಹರಿಸಿದ್ದು, ತಜ್ಞರು ನಿರಂತರ ಶ್ರಮಿಸಿ ಸಹಕರಿಸುತ್ತಿದ್ದಾರೆ.
ಸೋಂಕು ಉಲ್ಬಣಿಸಿದ ನಂತರ ಹತೋಟಿಗೆ ಪ್ರಯತ್ನಿಸುವ ಬದಲಿಗೆ ಮುಂಜಾಗ್ರತಾ ಕ್ರಮಗಳಿಗೆ ಒತ್ತು ನೀಡಲಾಗುತ್ತದೆ. ಪ್ರಿವೆನ್ಷನ್ ಬೆಟರ್ ದೆನ್ ಕ್ಯೂರ್ ರೀತಿಯಲ್ಲಿ ಸರ್ಕಾರ ಮುತುವರ್ಜಿವಹಿಸಿದ್ದು, ವೈಜ್ಞಾನಿಕ ನಿಯಂತ್ರಣ ಹಾಗೂ ನಿರ್ವಹಣೆಗೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ನಾಳೆ 75 ನೇ ವರ್ಷದ ಸ್ವಾತಂತ್ರ್ಯ ದಿನ ಆಚರಣೆ ಸೌಭಾಗ್ಯ ಬಂದಿದೆ. ಹಲವು ಸವಾಲುಗಳನ್ನು ರಾಜ್ಯ ಎದುರಿಸಿದೆ. ಹಲವು ಸವಾಲೆದುರಿಸಿ ಇಡೀ ದೇಶಕ್ಕೆ ನಮ್ಮ ರಾಜ್ಯ ದೇಶಕ್ಕೆ ಮಾದರಿಯಾಗಿದೆ. ಕೋವಿಡ್ ಸಂದರ್ಭ ಇದೆ ಇವತ್ತು. ಕೋವಿಡ್ ನಿರ್ವಹಣೆಯ ಅನುಭವದ ಹಿನ್ನೆಲೆಯಲ್ಲಿ ಹಲವು ಬದಲಾವಣೆ ಮಾಡುವ ಚಿಂತನೆ ಇದೆ. ಕೊರೊನಾ ಹೆಚ್ಚಾದಾಗ ಕ್ರಮ ಕೈಗೊಳ್ಳುವ ಬದಲು ಮುಂಚೆಯೇ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದರು.
ನಾಡು, ನುಡಿ, ನೆಲ-ಜಲ, ಸಾಹಿತ್ಯ-ಸಂಸ್ಕೃತಿ, ಆಡಳಿತ, ತಂತ್ರಜ್ಞಾನ, ಉದ್ಯಮ-ವ್ಯವಹಾರ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿ ಮಾಡಿದ ಸಾಧನೆಗಳನ್ನು ಬಿಂಬಿಸುವ ಕಾರ್ಯಕ್ರಮ ವರ್ಷಪೂರ್ತಿ ನಡೆಯಲಿದ್ದು, ಕರೊನಾ ಮುನ್ನೆಚ್ಚರಿಕೆ ನಿಯಮಗಳ ಪಾಲನೆಯೊಂದಿಗೆ ಸ್ವಾತಂತ್ರ್ಯದ ಅಮೃತಮಹೋತ್ಸವ ಆಚರಿಸಲಾಗುತ್ತದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.