ಲಾಕ್ ಡೌನ್ ಬೇಡ, ಅಗತ್ಯ ಬಿದ್ದರೆ ವೀಕೆಂಡ್ ಕರ್ಫ್ಯೂ; ಕೋವಿಡ್ ಸಭೆಯಲ್ಲಿ ಮಹತ್ವದ ನಿರ್ಧಾರ | ಜನತಾ ನ್ಯೂಸ್
ಬೆಂಗಳೂರು : ಕೋವಿಡ್ ಮೂರನೇ ಅಲೆ ನಿಯಂತ್ರಣ ಸಂಬಂಧ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೋವಿಡ್ ತಾಂತ್ರಿಕ ತಜ್ಞರು, ಅಧಿಕಾರಿಗಳೊಂದಿಗೆ ಮುಂಜಾಗ್ರತಾ ಕ್ರಮಗಳ ಕುರಿತು ಗಂಭೀರ ಚರ್ಚೆ ನಡೆಸಿದರು.
ಪಾಸಿಟಿವ್ ದರವಿರುವ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಲಾಗಿದ್ದು, ಸದ್ಯಕ್ಕೆ ಲಾಕ್ ಡೌನ್ ನಂತಹ ಕಠಿಣ ಕ್ರಮ ಬೇಡ. ಅಗತ್ಯಬಿದ್ದರೆ ಮಾತ್ರ ವಿಕೇಂಡ್ ಕರ್ಫ್ಯೂ ಜಾರಿ ಮಾಡುವ ಬಗ್ಗೆ ಯೋಚಿಸೋಣ ಎಂದಿದ್ದಾರೆ.
ಕೊವಿಡ್ 3ನೇ ಅಲೆ ತಡೆಗಟ್ಟುವ ಕುರಿತ ನಡೆಸಿದ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲಾವಾರು ಕೊವಿಡ್ ಅಂಕಿಅಂಶಗಳ ಮಾಹಿತಿ ಪಡೆದರು. ಕೊರೊನಾ 2ನೇ ಅಲೆ ಸಂಪೂರ್ಣವಾಗಿ ಹೋಗಿಲ್ಲ. ಬಹಳ ಎಚ್ಚರಿಕೆಯಿಂದ ಕೊರೊನಾ ನಿಯಂತ್ರಿಸಬೇಕಾಗಿದೆ. ಮಹಾರಾಷ್ಟ್ರ ಮತ್ತು ಕೇರಳದ ಗಡಿ ಹಳ್ಳಿಗಳಲ್ಲಿ ಸಂಪೂರ್ಣ ಕೊವಿಡ್ ಪರೀಕ್ಷೆ ನಡೆಸಲಾಗುವುದು. ಕೊವಿಡ್ ತಡೆಯಲು ಜಿಲ್ಲಾವಾರು ಯೋಜನೆಗೆ ನಿರ್ಧಾರ ಮಾಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಹಾಸನ, ಬೆಂಗಳೂರು ಗ್ರಾಮೀಣ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಚಾಮರಾಜನಗರ ಜಿಲ್ಲೆಗಳಲ್ಲಿ ಲಸಿಕೆ ವಿತರಣೆ ಇನ್ನೂ ವೇಗ ಪಡೆಯಬೇಕು.
ಪಾಸಿಟಿವಿಟಿ ದರ 2 ಪರ್ಸೆಂಟ್ ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆ ಓಪನ್ ಮಾಡಬೇಕು. ಪೋಷಕರು ಮತ್ತು ಶಿಕ್ಷಕರು ಕೊರೊನಾ ಲಸಿಕೆ ಪಡೆದಿರಬೇಕು. ಕೊವಿಡ್ ಪಾಸಿಟಿವಿಟಿ ದರ ಶೇಕಡಾ 2ಕ್ಕಿಂತ ಹೆಚ್ಚಾದರೆ ಒಂದು ವಾರ ಶಾಲೆಯನ್ನು ಮುಚ್ಚಿ, ಸ್ಯಾನಿಟೈಸ್ ಮಾಡ್ತೇವೆ. ಸ್ಯಾನಿಟೈಸ್ ಮಾಡಿ ವಾರದ ಬಳಿಕ ಶಾಲೆ ಆರಂಭಿಸುತ್ತೇವೆ.
ಇದೇ ವೇಳೆ ಎರಡನೇ ಅಲೆಯಲ್ಲಿ ಆದ ಅನಾಹುತ ಮೂರನೇ ಅಲೆಯಲ್ಲಿ ಅಗದಂತೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಯಿತು. ಜೊತೆಗೆ ಆಕ್ಸಿಜನ್ , ಐಸಿಯು ಬೆಡ್, ಆ್ಯಂಬುಲೆನ್ಸ್ , ಕೊರತೆ ಆಗದಂತೆ ಕ್ರಮ ಕೈಗೊಂಡು ಮೂರನೇ ಅಲೆಯ ಬಗ್ಗೆ ಪೂರ್ವ ತಯಾರಿ ಮಾಡಿಕೊಳ್ಳುವಂತೆ ತಜ್ಞರ ಸಮಿತಿ ಎಚ್ಚರಿಕೆ ನೀಡಿದೆ.
ದಿನಗೂಲಿ ನೌಕರರು, ಕೂಲಿ ಕಾರ್ಮಿಕರು, ಆಟೋ, ಓಲಾ, ಊಬರ್, ಹೊಟೆಲ್ಗಳಲ್ಲಿ ಕೆಲಸ ಮಾಡುವವರು ಸೇರಿದಂತೆ ದಿನಗೂಲಿ ಕೆಲಸ ಅವಲಂಬಿತರಿಗೆ ಯಾವುದೇ ತೊಂದರೆಯಾಗಬಾರದು ಎಂದು ಸೂಚನೆ ನೀಡಿದರು ಎನ್ನಲಾಗಿದೆ.
ಹಬ್ಬಗಳ ಸಾಲಿರುವ ಹಿನ್ನಲೆ ಹಬ್ಬದ ದಿನದಲ್ಲಿ ಜನ ಒಂದೇಡೆ ಸೇರದಂತೆ ಎಚ್ಚರವಹಿಸಬೇಕು. ಯಾವುದೇ ರೀತಿ ಜನರಿಗೆ ತೊಂದರೆಯಾಗಬಾರದು.ಹಬ್ಬಗಳ ಆಚರಣೆ ಈ ಹಿಂದಿನ ಮಾರ್ಗಸೂಚಿಗಳೇ ಮುಂದುವರಿಯಲಿದೆ ಎನ್ನಲಾಗಿದೆ.