ಪತ್ನಿ ಬಡಿದು ಕೊಂದು, ಮೆಟ್ಟಿಲಿಂದ ಬಿದ್ದಳೆಂದು ಆಸ್ಪತ್ರೆಗೆ ಸೇರಿಸಿದ ಪತಿ! | ಜನತಾ ನ್ಯೂಸ್
ಮಂಗಳೂರು : ಹೆಂಡತಿಯನ್ನು ಬಡಿದು ತಾನೇ ಕೊಲೆಗೈದು, ಬಳಿಕ ಆಕೆ ಮೆಟ್ಟಿಲಿನಿಂದ ಜಾರಿ ಬಿದ್ದು ಗಾಯಗೊಂಡಿದ್ದಾಳೆ ಎಂದು ಕಥೆ ಕಟ್ಟಿ ಆಸ್ಪತ್ರೆಗೆ ಸೇರಿಸಿದ ಪ್ರಕರಣ ಜಿಲ್ಲೆಯ ಮೂಡಬಿದ್ರೆಯ ಧರೆಗುಡ್ಡೆಯಲ್ಲಿ ಬೆಳಕಿಗೆ ಬಂದಿದೆ.
ಮೂಡಬಿದಿರೆ ತಾಲೂಕಿನ ಧರೆಗುಡ್ಡೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಠ ನಿವಾಸಿ ದಿನರಾಜ್ ಹೆಂಡತಿಯನ್ನು ಕೊಲೆಗೈದ ಪತಿ ಮಹಾಶಯ. ದಿನರಾಜ್ ಮತ್ತು ಸುನೀತಾ ಎಂಬುವವರಿಗೆ ಕಳೆದ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದೆ.
ಮೂಡಬಿದಿರೆಯಲ್ಲಿ ಬ್ಯಾಟರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ದಿನರಾಜ್ ಕೂಡಾ ಮದುವೆಯಾಗಿ ಆರು ತಿಂಗಳ ತನಕ ಹೆಂಡತಿಯ ಜೊತೆಗೆ ಖುಷಿಯಲ್ಲೇ ಇದ್ದ. ಆದರೆ ಆನಂತರ ವಾರದಲ್ಲೊಮ್ಮೆ ತೆಗೆದುಕೊಳ್ಳುತ್ತಿದ್ದ ಮದ್ಯವನ್ನು ಪ್ರತಿದಿನ ತೆಗೆದುಕೊಳ್ಳಲು ಆರಂಭಿಸಿದ್ದಾನೆ.
ಹೆಂಡತಿಯ ಬಗ್ಗೆ ಸದಾ ಅನುಮಾನ ವ್ಯಕ್ತಪಡಿಸುತ್ತಿದ್ದ ದಿನರಾಜ್, ಕಂಠ ಪೂರ್ತಿ ಕುಡಿದು ಬಂದು ಹಲ್ಲೆ ಮಾಡುತ್ತಿದ್ದ. ಇತ್ತ ಕುಡುಕ ಗಂಡನ ಕಾಟ ತಡೆಯಲಾರದೆ ಸುನೀತಾ ತವರು ಮನೆಯಲ್ಲಿ ದೂರು ನೀಡಿದರೂ, ಹಿರಿಯರೆಲ್ಲಾ ಮಾತುಕತೆ ನಡೆಸಿ ಗಂಡ-ಹೆಂಡತಿಯ ಅಸಮಾಧಾನಗಳನ್ನು ದೂರ ಮಾಡಿದ್ದರು.
ಮತ್ತೆ ಮದ್ಯದ ದಾಸನಾದ ದಿನರಾಜ್ ಪ್ರತಿದಿನ ಕುಡಿದು ಮನೆಗೆ ಬಂದು ಹೆಂಡತಿ ಸುನೀತಾ ಜೊತೆ ಗಲಾಟೆ ಆರಂಭಿಸಿದ್ದಾನೆ. ಆಗಸ್ಟ್ 17ರ ಸಂಜೆ 6 ಗಂಟೆಗೇನೇ ಕುಡಿದು ಬಂದು ಶೀಲದ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದಂತೆಯೇ ಹೆಂಡತಿಯೂ ಗಲಾಟೆ ಆರಂಭಿಸಿದ್ದಾಳೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಮಾತು ಮಿತಿ ಮೀರಿ ಹೊಡೆದಾಟ ವಾಗಿದೆ.
ಈ ಸಂದರ್ಭದಲ್ಲಿ ದಿನರಾಜ್ ಮದ್ಯದ ಅಮಲಿನಲ್ಲಿ ಕೈಗೆ ಸಿಕ್ಕ ಬಲವಾದ ವಸ್ತುವಿನಲ್ಲಿ ಹೆಂಡತಿಯ ತಲೆಗೆ ಹೊಡೆದಿದ್ದಾನೆ. ಹೆಂಡತಿ ಸುನೀತಾ ರಕ್ತದ ಮಡುವಿನಲ್ಲಿ ಬಿದ್ದಿದ್ದರಿಂದ ಭಯಗೊಂಡ ದಿನರಾಜ್ ಪಕ್ಕದ ಮನೆಯವರಿಗೆ ಕರೆ ಮಾಡಿ ಹೆಂಡತಿ ಮೆಟ್ಟಿಲಿನಿಂದ ಕಾಲು ಜಾರಿ ಬಿದ್ದಿದ್ದಾಳೆ ಎಂದು ಕಥೆ ಕಟ್ಟಿದ್ದಾನೆ.
ಈತ ತನ್ನ ಹೆಂಡತಿ ಸುನಿತಾಳನ್ನು ನಿನ್ನೆ ಮೂಡಬಿದ್ರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತನ್ನ ಹೆಂಡತಿ ಮನೆಯ ಮೆಟ್ಟಲಿನಿಂದ ಜಾರಿ ಬಿದ್ದು ಗಾಯಗೊಂಡಿದ್ದಾಳೆ ಎಂದು ಹೇಳಿದ್ದ. ಅಲ್ಲಿ ಪರೀಕ್ಷಿಸಿದ ವೈದ್ಯರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರು. ಖಾಸಗಿ ಆಸ್ಪತ್ರೆಗೆ ಹೋದ ಸಂದರ್ಭದಲ್ಲಿ ಸುನಿತಾ ಸಾವನ್ನಪ್ಪಿದ್ದು, ಮೃತದೇಹವನ್ನು ಮಂಗಳೂರಿನ ಜಿಲ್ಲಾಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಸುನಿತಾ ಮನೆಯವರು ಆಕೆಯ ಸಾವಿನ ಅನುಮಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪತಿ ದಿನರಾಜ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಹಾರೆಯಿಂದ ಆಕೆಗೆ ಹೊಡೆದು, ಬಳಿಕ ಸುಳ್ಳು ಹೇಳಿ ಆಸ್ಪತ್ರೆಗೆ ಕರೆದುಕೊಂಡು ಬಂದಿರುವುದು ತಿಳಿದುಬಂದಿದೆ.