ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ವಿರುದ್ಧ ಗೂಳಿಹಟ್ಟಿ ಶೇಖರ್ ಆಕ್ರೋಶ! | ಜನತಾ ನ್ಯೂಸ್
ಬೆಂಗಳೂರು : ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಮುಂದೆ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಬಹಿರಂಗವಾಗಿ ಏರು ಧ್ವನಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.
ವಿಧಾನಸೌಧದ ಸಚಿವರ ಕಚೇರಿಗೆ ಆಗಮಿಸಿದ ಗೂಳಿಹಟ್ಟಿ ಶೇಖರ್ ಸಚಿವರ ಭೇಟಿಗೆ ತೆರಳಿದ್ದಾರೆ. ಆದರೆ ಕಚೇರಿಯಲ್ಲಿ ಕಾರ್ಯಕರ್ತರೇ ತುಂಬಿದ್ದು. ಭೇಟಿಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಗೂಳಿಹಟ್ಟಿ ಸಚಿವರ ಮುಂದೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಗೂಳಿಹಟ್ಟಿ, ಕೋಟಾ ಶ್ರೀನಿವಾಸ್ ಪೂಜಾರಿಗೆ ಕಾದು - ಕಾದು ಸುಸ್ತಾಗಿದ್ದಾರೆ. ಸಚಿವರಿಂದ ಸ್ವಂದನೆ ಸಿಗದೇ ಇದ್ದಾಗ, ಸಿಟ್ಟಾದ ಗೂಳಿಹಟ್ಟಿ ಶೇಖರ್ ಸಚಿವರ ಮುಂದೆ ಏರು ಧ್ವನಿಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ಬಳಿಕ ಗೂಳಿಹಟ್ಟಿ ಅವರನ್ನು ಕರೆದೊಯ್ದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಸಮಾಧಾನ ಪಡಿಸಿದ್ದಾರೆ.
ಈ ಸಂದರ್ಭದಲ್ಲಿ ತಮ್ಮ ನೋವು ತೋಡಿಕೊಂಡ ಗೂಳಿಹಟ್ಟಿ, ನಾವು ಬುಧವಾರ, ಗುರುವಾರ ಬೆಂಗಳೂರಿಗೆ ಆಗಮಿಸುತ್ತೇವೆ. ಈ ಸಂದರ್ಭದಲ್ಲಿ ಸಚಿವರು ಶಾಸಕರಿಗೆ ಸಿಗಬೇಕು ಹಾಗೂ ಅವರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಸಚಿವರು ಸಮರ್ಪಕವಾಗಿ ಸ್ಪಂದಿಸದ ವಿಚಾರವನ್ನು ಗೂಳಿಹಟ್ಟಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೂ ತಂದಿದ್ದಾರೆ ಎನ್ನಲಾಗಿದೆ.