ಬಿಜೆಪಿಯವರಿಗೆ ಜನರಿಗೆ ಉತ್ತಮ ಆಡಳಿತ ಕೊಡಬೇಕು ಎಂಬ ಆಲೋಚನೆಯಿಲ್ಲ | ಜನತಾ ನ್ಯೂಸ್
ಮೈಸೂರು : ಬಿಜೆಪಿಯವರಿಗೆ ಜನರಿಗೆ ಉತ್ತಮ ಆಡಳಿತ ಕೊಡಬೇಕು ಎಂಬ ಆಲೋಚನೆಯಿಲ್ಲ. ಆದರೆ ಅಧಿಕಾರಕ್ಕೆ ಬಂದು ಹೇಗೆ ದುಡ್ಡು ಮಾಡಬೇಕೆಂಬ ಆಸೆ ಇದೆ ಎಂದರು.
ಮೈಸೂರಿನಲ್ಲಿ ಸಹಾಯ ಅಸ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಶಾಸಕ ಯತೀಂದ್ರ ಸಿದ್ದರಾಮಯ್ಯ, ಬಿಜೆಪಿ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡರು. ಸುಳ್ಳು ಪ್ರಚಾರದ ಮೂಲಕ ಬಿಜೆಪಿ ನಾಯಕರು ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯವರಿಗೆ ಜನರಿಗೆ ಉತ್ತಮ ಆಡಳಿತ ಕೊಡಬೇಕು ಎಂಬ ಆಲೋಚನೆಯಿಲ್ಲ. ಆದರೆ ಅಧಿಕಾರಕ್ಕೆ ಬಂದು ಹೇಗೆ ದುಡ್ಡು ಮಾಡಬೇಕೆಂಬ ಆಸೆ ಇದೆ. ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ, ರಾಜ್ಯದಲ್ಲಿ ದೊಡ್ಡ ಪ್ರಹಸನ ನಡೆಯಿತು. ಆದರೆ, ಸಚಿವ ಸಂಪುಟ ರಚನೆಯಾದ ಬಳಿಕ ಬೇಕಾದ ಖಾತೆ ಸಿಗಲಿಲ್ಲ, ಸಚಿವರಲ್ಲಿ ಅಸಮಾಧಾನ ಇದೆ. ಸಚಿವ ಸ್ಥಾನ ಸಿಗದೇ ಇರುವವರು ಸರ್ಕಾರದ ವಿರುದ್ಧವೇ ಮಾತನಾಡುತ್ತಿದ್ದಾರೆ. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವಧಿಯಲ್ಲಿ 24 ದಿನಗಳ ಕಾಲ ಸಚಿವ ಸಂಪುಟವಿಲ್ಲದೆ ಅವರೊಬ್ಬರೇ ಕೆಲಸ ಮಾಡಿದ್ದರು ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಇಡೀ ಪ್ರಪಂಚದಲ್ಲಿ ಎಲ್ಲ ರಾಷ್ಟ್ರಗಳೂ ವ್ಯಾಕ್ಸಿನ್ ಖರೀದಿಸಿ ತಮ್ಮ ದೇಶದ ಜನರನ್ನ ರಕ್ಷಣೆ ಮಾಡಲು ಮುಂದಾದವು. ಆದ್ರೆ, ಮೋದಿ ನೇತೃತ್ವದ ಸರ್ಕಾರ ವ್ಯಾಕ್ಸಿನ್ ಖರೀದಿ ಮಾಡದೆ ಮೀನಾಮೇಷ ಎಣಿಸುತ್ತಿತ್ತು ಎಂದು ಯತೀಂದ್ರ ಆರೋಪಿಸಿದರು.
ಈಗಲೂ ಸಹ ಸೂಕ್ತ ರೀತಿಯಲ್ಲಿ ವ್ಯಾಕ್ಸಿನ್ ಹಂಚಿಕೆ ಮಾಡಲು ಸರ್ಕಾರ ವಿಫಲವಾಗಿದೆ. ಬಿಜೆಪಿ ನಾಯಕರು ಸರ್ಕಾರ ನೀಡಬೇಕಾದ ಸವಲತ್ತುಗಳನ್ನು ಜನರಿಗೆ ತಲುಪಿಸೋದಕ್ಕೇ ಕಷ್ಟ ಪಡುತ್ತಿದ್ದಾರೆ. ಆದ್ರೆ, ಕಾಂಗ್ರೆಸ್ ನಾಯಕರು ನಮ್ಮ ಸ್ವಂತ ಹಣದಿಂದ ಜನರ ಸಹಾಯಕ್ಕೆ ಮುಂದಾಗುತ್ತಿದ್ದಾರೆ ಎಂದು ಯತೀಂದ್ರ ಹೇಳಿದರು.
ಬಿಜೆಪಿ ಸರ್ಕಾರ ನೀಡಿರುವ ಈ ಕೆಟ್ಟ ಆಡಳಿತಕ್ಕೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಜನರೇ ಕಾಯುತ್ತಿದ್ದಾರೆ ಅಂತ ಯತೀಂದ್ರ ಸಿದ್ದರಾಮಯ್ಯ ಕಿಡಿಕಾರಿದರು.