ಬಸ್-ಲಾರಿ ಅಪಘಾತ, 23 ಪ್ರಯಾಣಿಕರು ಪಾರು, ಲಾರಿಯಲ್ಲಿ ಸಿಲುಕಿದ ಚಾಲಕ! | ಜನತಾ ನ್ಯೂಸ್
ಅಂಕೋಲಾ : ಬಸ್ ಹಾಗೂ ಮೀನು ಸಾಗಿಸುವ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಲಾರಿ ಚಾಲಕ ವಾಹನದಲ್ಲಿಯೇ ಸಿಲುಕಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ರಾಷ್ಟ್ರೀಯ ಹೆದ್ದಾರಿ ಬಾಳೆಗುಳಿ ಕ್ರಾಸ್ ನಲ್ಲಿ ನಡೆದಿದೆ.
ಬಸ್ ಚಾಲಕ ಹನುಮಂ ಯಡಳ್ಳಿ ಸಣ್ಣಪುಟ್ಟ ಗಾಯಗೊಂಡಿದ್ದು, 23 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಘಾತಾದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಮೀನು ಹಾನಿಗೀಡಾಗಿದೆ. ಅಂತೆಯೇ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಕುಮಾರ ದೊಡ್ಡಮನೆ ಎಂಬುವವರ ಬೈಕ್ ಲಾರಿಯಡಿಯಲ್ಲಿ ಸಿಲುಕಿ ಸಂಪೂರ್ಣ ಜಖಂಗೊಂಡಿದೆ.
ಲಾರಿಯು ಅಂಕೋಲಾದಿಂದ ಕಾರವಾರ ಮಾರ್ಗವಾಗಿ ಚಲಿಸುತ್ತಿತ್ತು. ಹುಬ್ಬಳ್ಳಿ- ಕಾರವಾರ ಮಾರ್ಗದ ಬಸ್ ಅಂಕೋಲಾ ನಿಲ್ದಾಣದೆಡೆಗೆ ತೆರಳುತ್ತಿತ್ತು. ಅಂಕೋಲಾ ಪಟ್ಟಣ ಪ್ರವೇಶಿಸುವ ಕಣಕಣೇಶ್ವರ ರಸ್ತೆಯ ಕಾಮಗಾರಿ ನಡೆಯುತ್ತಿದೆ. ಹಾಗಾಗಿ ರಾಷ್ಟ್ರೀಯ ಹೆದ್ದಾರಿಯ ಮೂಲಕ ತೆರಳಬೇಕಿತ್ತು. ಬಸ್ ಚಾಲಕ ಅಜಾಗರೂಕತೆಯಿಂದ ರಾಷ್ಟ್ರೀಯ ಹೆದ್ದಾರಿಯ ಎಡಭಾಗದಲ್ಲಿ ವಾಹನ ಚಲಾಯಿಸುವುದನ್ನು ಬಿಟ್ಟು, ಬಲಭಾಗದ ರಸ್ತೆಯಲ್ಲಿ ಬಸ್ ಚಲಾಯಿಸಿದ್ದರಿಂದ ಅಪಘಾತ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ.
ಅಪಘಾತದಲ್ಲಿ ಲಾರಿ ಜಖಂ ಆಗಿದ್ದು, ಬಸ್ ಮುಂಭಾಗ ಸಹ ಹಾನಿಯಾಗಿದೆ. ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನಿಡಿ ಪರಿಶೀಲನೆ ನಡೆಸಿದ್ದಾರೆ.