ಮೈಸೂರು ಗ್ಯಾಂಗ್ ರೇಪ್ ಪ್ರಕರಣದಲ್ಲಿ ಐವರ ಬಂಧನ, ಓರ್ವ ಬಾಲ ಆರೋಪಿ: ರಾಜ್ಯ ಡಿಜಿ&ಐಜಿಪಿ ಪ್ರವೀಣ್ ಸೂದ್ | ಜನತಾ ನ್ಯೂಸ್
ಮೈಸೂರು : ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿ & ಐಜಿಪಿ ಪ್ರವೀಣ್ ಸೂದ್ ಸುದ್ದಿಗೋಷ್ಠಿ ನಡೆಸಿದ್ದು, ವಿದ್ಯಾರ್ಥಿನಿ ಹೆದರಿಸಿ 3 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ದರೋಡೆಗೆ ಪ್ರಯತ್ನಿಸಿ ನಂತರ ಅತ್ಯಾಚಾರ ನಡೆಸಿದ್ದರು, ಇದಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಿದ್ದು, ಕಾರ್ಮಿಕರಾಗಿರುವ ಇವರು ತಮಿಳುನಾಡಿನ ಮೂಲದವರು ಎಂದು ಮಾಹಿತಿ ನೀಡಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ತಾಂತ್ರಿಕ ಮತ್ತು ವೈಜ್ಞಾನಿಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ 5 ಜನರನ್ನು ಬಂಧಿಸಲಾಗಿದೆ. ಬಂಧಿತರು ತಮಿಳು ನಾಡಿನ ತಿರ್ಪುರ್ ಮೂಲದವರಾಗಿದ್ದು ಕೂಲಿ ಕಾರ್ಮಿಕರು ಹಾಗೂ ಬಹುತೇಕ ಅನಕ್ಷರಸ್ಥರಾಗಿದ್ದಾರೆ.
ಚಾಲಕ, ಕಾರ್ಪೆಂಟರ್, ಕೂಲಿ ಕೆಲಸ ಮಾಡುತ್ತಿದ್ದರು. ಮೈಸೂರಿಗೆ ತರಕಾರಿ ತೆಗೆದುಕೊಂಡು ಆಗಾಗ ಬರುತ್ತಿದ್ದರು. ಅವರಿಂದ ಈ ಕುಕೃತ್ಯ ನಡೆದಿದ್ದು ಅದರಲ್ಲಿ 17 ವರ್ಷದ ಒಬ್ಬ ಬಾಲ ಆರೋಪಿ ಕೂಡ ಇದ್ದಾನೆ ಎಂದು ಮಾಹಿತಿ ನೀಡಿದರು.
ಗಂಭೀರ ಪ್ರಕರಣದಲ್ಲಿ 16 ವರ್ಷ ಆಗಿದ್ದರೆ ನ್ಯಾಯಾಲಯದಲ್ಲಿ ವಿಚಾರಣೆ ಆಗಲಿದೆ. 6 ಆರೋಪಿಗಳ ಪೈಕಿ ಓರ್ವ ತಲೆಮರೆಸಿಕೊಂಡಿದ್ದಾನೆ. ಇವರೆಲ್ಲರೂ ಕೆಲಸಕ್ಕೆ ಮೈಸೂರಿಗೆ ಬಂದಿದ್ದು, ವಾಪಸ್ಸು ಹೋಗುವಾಗ ಕುಡಿದು ಪಾರ್ಟಿ ಮಾಡುತ್ತಿದ್ದರು ಎಂದು ಗೊತ್ತಾಗಿದೆ.
ತನಿಖೆ ಪ್ರಾಥಮಿಕ ಹಂತದಲ್ಲಿದ್ದು ಹೆಚ್ಚಿನ ವಿವರ ನೀಡಲು ಈ ಸಂದರ್ಭದಲ್ಲಿ ಸಾಧ್ಯವಿಲ್ಲ. ಮೈಸೂರಿಗೆ ಆಗಾಗ ಬರುತ್ತಿದ್ದ ಈ ಆರೋಪಿಗಳು ಬಂದು ಹೋಗುವಾಗ ಮದ್ಯಪಾನ ಮಾಡಿಕೊಂಡು ಪಾರ್ಟಿ ಮಾಡಿಕೊಂಡು ಹೋಗುತ್ತಿದ್ದರು. ಮೊನ್ನೆ ಆಗಸ್ಟ್ 24ರಂದು ಅತ್ಯಾಚಾರದಂತಹ ಹೀನಕೃತ್ಯ ನಡೆಸಿದ್ದಾರೆ.
ಆರೋಪಿಗಳನ್ನು ಬಂಧಿಸಿದ ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ವೈಜ್ಞಾನಿಕ ಹಾಗೂ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳ ಬಂಧನವಾಗಿದೆ. ಆರೋಪಿಗಳನ್ನು ಬಂಧಿಸಿದ ಪೊಲೀಸರನ್ನು ಶ್ಲಾಘಿಸುವೆ. ಪ್ರಕರಣ ಭೇದಿಸಿದ ಪೊಲೀಸರಿಗೆ 5 ಲಕ್ಷ ರೂ. ಬಹುಮಾನ ಘೋಷಿಸುತ್ತೇವೆ ಎಂದು ತಿಳಿಸಿದ್ದಾರೆ.