ಪೊಲೀಸ್ ಠಾಣೆಯಲ್ಲಿ ಆರೋಪಿ ಆತ್ಮಹತ್ಯೆ, ಪಿಎಸ್ಐ ಸೇರಿ ಐವರ ಅಮಾನತು! | ಜನತಾ ನ್ಯೂಸ್
ವಿಜಯಪುರ : ಸಿಂದಗಿಯಲ್ಲಿನ ನಡೆದ ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಅನುಮಾನಾಸ್ಪದವಾಗಿ ಸಾವಿಗೀಡಾದ ಹಿನ್ನೆಲೆ ಪಿಎಸ್ಐ ಸೇರಿ ಐವರು ಪೊಲೀಸರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.
ಪಿಎಸ್ಐ ಸಂಗಮೇಶ ಹೊಸಮನಿ, ಸಿಬ್ಬಂದಿ ಎನ್.ಬಿ.ನಾದ್, ಗುರುರಾಜ್ ಮಾಶ್ಯಾಳ, ಅನಂತ ಪಾಟೀಲ್, ಪಿ.ಎಲ್. ಪಟ್ಟೇದ ಇವರನ್ನು ಅಮಾನತು ಮಾಡಿ ಎಸ್ಪಿ ಆನಂದಕುಮಾರ್ ಆದೇಶ ಹೊರಡಿಸಿದ್ದಾರೆ.
ಡಾಬಾ ಮಾಲೀಕನಾಗಿದ್ದ ದೇವಿಂದ್ರ ಎಂಬಾತ ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಎಂದು ದೂರು ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ದೇವಿಂದ್ರ ಸಂಗೋಗಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ಟಾಯ್ಲೆಟ್ಗೆ ಹೋಗುವುದಾಗಿ ಹೇಳಿ ಪೊಲೀಸ್ ಠಾಣೆಯ ಶೌಚಗೃಹಕ್ಕೆ ಹೋದವ ಅಲ್ಲೇ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದ.
ಕರ್ತವ್ಯಲೋಪದ ಆಧಾರದ ಮೇಲೆ ಪಿಎಸ್ಐ ಸೇರಿ ಐವರನ್ನು ಅಮಾನತು ಮಾಡಲಾಗಿದೆ. ಈ ಪ್ರಕರಣವನ್ನು ಸಿಐಡಿಗೆ ಹಸ್ತಾಂತರ ಮಾಡಲಾಗಿದೆ ಎಂದು ಎಸ್ಪಿ ಆನಂದಕುಮಾರ್ ತಿಳಿಸಿದ್ದಾರೆ.