SC, ST ನಕಲಿ ಪ್ರಮಾಣಪತ್ರ ಕೊಟ್ಟ ಅಧಿಕಾರಿಗಳ ವಿರುದ್ಧ ಕ್ರಮ: ಸಿಎಂ ಬೊಮ್ಮಾಯಿ ಎಚ್ಚರಿಕೆ | ಜನತಾ ನ್ಯೂಸ್
ಬೆಂಗಳೂರು : ಎಸ್ಸಿ, ಎಸ್ಟಿ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ವಿಧಿಸಿದರು.
ವಿಧಾನಸೌಧದಲ್ಲಿ ದೌರ್ಜನ್ಯ ಪ್ರತಿಬಂಧಕ ಅಧಿನಿಯಮ 1989 (ತಿದ್ದುಪಡಿ ಕಾಯ್ದೆ 2015) ಮತ್ತು ನಿಯಮಗಳು 1995 (ತಿದ್ದುಪಡಿ ನಿಯಮಗಳು 2016) ರಡಿ ರಾಜ್ಯಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿಯ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಎಸ್ಸಿ ಮತ್ತು ಎಸ್ಟಿ ದೌರ್ಜನ್ಯ ಸಮಿತಿ ಸಭೆಯನ್ನು ಮೂರು ತಿಂಗಳಿಗೊಮ್ಮೆ ನಡೆಸಲು ನಿರ್ಧಾರ ಮಾಡಿದ್ದೇವೆ.
ಕೇಸ್ ಕೊಟ್ಟಾಗ ಅನಗತ್ಯವಾಗಿ ತಡ ಮಾಡುತ್ತಿರುವುದರ ಬಗ್ಗೆ ಸಭೆಯಲ್ಲಿ ತಿಳಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಈ ರೀತಿ ಆಗದಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಸಂಬಂಧಿಸಿದ ಪ್ರಕರಣಗಳ ಸಾಕ್ಷಿದಾರರಿಗೆ ರಕ್ಷಣೆ ನೀಡುವ ಕೆಲಸ ಆಗಬೇಕು. 1.8 ಲಕ್ಷ ಪ್ರಕರಣಗಳನ್ನು ಪುನರ್ ಪರಿಶೀಲನೆ ಮಾಡಬೇಕು. ಎಸ್ಸಿ, ಎಸ್ಟಿ ಸಮುದಾಯಕ್ಕೆ ಸಂಬಂಧಿಸಿ ಮಂಜೂರಾದ ಬೋರ್ವೆಲ್ ಹಂಚಿಕೆ ತ್ವರಿತವಾಗಿ ಆಗಬೇಕು. ಈ ಸಮುದಾಯಗಳಿಗೆ ಮೀಸಲಿಟ್ಟ ಅನುದಾನವನ್ನು ಬೇರೆ ಕೆಲಸಗಳಿಗೆ ವರ್ಗಾಯಿಸುವಂತಿಲ್ಲ ಎಂದು ಸಹ ಅವರು ಸೂಚಿಸಿದರು.
ಸರ್ಕಾರದಿಂದ ಎಸ್ಟಿ, ಎಸ್ಸಿ ಸಮುದಾಯದ ಫಲಾನುಭವಿಗಳಿಗೆ ಬೋರ್ ವೆಲ್ ಮಂಜೂರು ಮಾಡಿದಾಗ ಅನಗತ್ಯವಾಗಿ ತೊಂದರೆ ಕೊಡಬಾರದು. ಕಾಲಮಿತಿಯಲ್ಲಿ ಬೋರ್ವೆಲ್ ಹಾಕಿಕೊಡಬೇಕು ಎಂದು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.ಎಸ್ಸಿಪಿ ಮತ್ತು ಟಿಎಸ್ಪಿ ಹಣ ಬೇರೆ ಸಮುದಾಯಕ್ಕೆ ಉಪಯೋಗಿಸುವಂತಿಲ್ಲ.
ಈ ಸಂಬಂಧ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಹಣವನ್ನು ಆಯಾ ಸಮುದಾಯಕ್ಕೆ ಮಾತ್ರ ಬಳಸಬೇಕು. ಅಗತ್ಯ ತಿದ್ದುಪಡಿ ತರಲು ಸಲಹೆ ನೀಡಿದ್ದಾಗಿ ಸಿಎಂ ಮಾಹಿತಿ ನೀಡಿದರು.