ಚೀನಾದೊಂದಿಗಿನ ಗಡಿ ವಿವಾದ ಮಾತುಕತೆ ಮೂಲಕ ಪರಿಹಾರ: ಏಕಪಕ್ಷಿಯ ಕ್ರಮಕ್ಕೆ ಅವಕಾಶ ನೀಡುವುದಿಲ್ಲ - ರಾಜನಾಥ್ ಸಿಂಗ್ | ಜನತಾ ನ್ಯೂಸ್
ನವದೆಹಲಿ : ಚೀನಾದೊಂದಿಗಿನ ಗಡಿ ವಿವಾದಗಳಿಗೆ ಮಾತುಕತೆಯ ಮೂಲಕ ಪರಿಹಾರವನ್ನು ಭಾರತ ಬಯಸುತ್ತದೆ, ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ಪುನರ್ರುಚ್ಚರಿಸಿದ್ದಾರೆ. ಸಿಂಗ್ ರಾಷ್ಟ್ರೀಯ ಭದ್ರತೆಯ ವಿಷಯವಾಗಿ ಪಂಜಾಬ್ ವಿಶ್ವವಿದ್ಯಾಲಯವು ಆಯೋಜಿಸಿದ ಮೂರನೇ ಬಲರಾಮ್ಜಿ ದಾಸ್ ಟಂಡನ್ ಸ್ಮಾರಕ ಉಪನ್ಯಾಸದಲ್ಲಿ ಮಾತನಾಡುತ್ತಿದ್ದರು.
ಗಡಿಗಳ ಪಾವಿತ್ರ್ಯತೆಯನ್ನು ಉಲ್ಲಂಘಿಸಲು ಸರ್ಕಾರ ಎಂದಿಗೂ ಅನುಮತಿಸುವುದಿಲ್ಲ, ಎಂದು ಪ್ರತಿಪಾದಿಸಿದ ರಕ್ಷಣಾ ಸಚಿವರು ಇದೇ ಸಂದರ್ಭದಲ್ಲಿ, ವಾಸ್ತವ ನಿಯಂತ್ರಣ ರೇಖೆ(ಎಲ್ಎಸಿ)ಯಲ್ಲಿ ಯಾವುದೇ ರೀತಿಯ ಏಕಪಕ್ಷೀಯ ಕ್ರಮವನ್ನು ನಿರ್ಲಕ್ಷಿಸಬಾರದು ಎಂದು ಪಡೆಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದ ಸರ್ಕಾರವು ಸ್ಪಷ್ಟಪಡಿಸಿದೆ, ಎಂದು ಅವರು ಹೇಳಿದ್ದಾರೆ.
ಭಾರತವು ಚೀನಾದೊಂದಿಗಿನ ಗಡಿ ವಿವಾದಕ್ಕೆ ಮಾತುಕತೆಯ ಮೂಲಕ ಪರಿಹಾರವನ್ನು ಬಯಸುತ್ತದೆ, ಎಂದು ರಕ್ಷಣಾ ಸಚಿವರು ಹೇಳಿದರು ಮತ್ತು "ದೇಶದ ಗಡಿ, ದೇಶದ ಗೌರವ ಮತ್ತು ಸ್ವಾಭಿಮಾನ" ವಿಷಯಗಳಲ್ಲಿ ಸರ್ಕಾರ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ, ಎಂದು ಪ್ರತಿಪಾದಿಸಿದರು. ಗಡಿಗಳ ಪಾವಿತ್ರ್ಯವನ್ನು ಉಲ್ಲಂಘಿಸಲು ನಾವು ಎಂದಿಗೂ ಅನುಮತಿಸುವುದಿಲ್ಲ, ಎಂದು ಅವರು ಸ್ಪಷ್ಟವಾಗಿ ಹೇಳಿದರು.
ಚೀನಾದ ಗಡಿಯಲ್ಲಿ ಗ್ರಹಿಕೆ ವ್ಯತ್ಯಾಸಗಳಿವೆ ಇದರ ಹೊರತಾಗಿಯೂ, ಕೆಲವು ಒಪ್ಪಂದಗಳು, ಪ್ರೋಟೋಕಾಲ್ಗಳಿವೆ, ಇದನ್ನು ಎರಡೂ ದೇಶಗಳ ಸೇನೆಗಳು ಗಸ್ತು ನಡೆಸಲು ಅನುಸರಿಸುತ್ತವೆ, ಎಂದು ರಕ್ಷಣಾ ಸಚಿವರು ಹೇಳಿದರು.
ಕಳೆದ ವರ್ಷ ಪೂರ್ವ ಲಡಾಖ್ ನಲ್ಲಿ ನಡೆದ ಘರ್ಷಣೆಗಳನ್ನು ಉಲ್ಲೇಖಿಸಿ, ಚೀನಾ ಪಡೆಗಳು ಒಪ್ಪಿಕೊಂಡ ಪ್ರೋಟೋಕಾಲ್ ಗಳನ್ನು ಕಡೆಗಣಿಸಿವೆ, ಎಂದು ಸಿಂಗ್ ಹೇಳಿದರು.
"ಯಾವುದೇ ಸಂದರ್ಭದಲ್ಲಿಯೂ ಚೀನೀ ಸೇನೆ(ಪಿಎಲ್ಎ)ಗೆ ಏಕಪಕ್ಷೀಯವಾಗಿ ಎಲ್ಎಸಿಯಲ್ಲಿ ಕಾರ್ಯನಿರ್ವಹಿಸಲು ನಾವು ಅನುಮತಿಸುವುದಿಲ್ಲ. ಆ ದಿನ ಭಾರತೀಯ ಸೇನೆಯು ಗಲ್ವಾನ್ನಲ್ಲಿ ಅದನ್ನೇ ಮಾಡಿದೆ ಮತ್ತು ಪಿಎಲ್ಎ ಸೈನಿಕರನ್ನು ಧೈರ್ಯದಿಂದ ಎದುರಿಸಿ ಅವರನ್ನು ಹಿಮ್ಮೆಟ್ಟುವಂತೆ ಒತ್ತಾಯಿಸಿತು, ಎಂದು ಸ್ಮರಿಸಿದ ಅವರು ಇದನ್ನು "ಐತಿಹಾಸಿಕ ಘಟನೆ" ಎಂದು ಕರೆದರು.